ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೇಯರ್ ಶಾಂತಕುಮಾರಿ ಸಂದರ್ಶನ

|
Google Oneindia Kannada News

ಬೆಂಗಳೂರು, ಅ. 17 : 'ಬೆಂಗಳೂರು ಬೆಳೆದಂತೆ ನಗರದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೇವಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಮಾತ್ರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿಲ್ಲ. ಇದಕ್ಕೆ ಜನರ ಸಹಕಾರವೂ ಮುಖ್ಯ' ಎಂದು ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಹೇಳಿದ್ದಾರೆ.

ತಮ್ಮ ಬಿಡುವಿಲ್ಲದ ಕಾರ್ಯಕ್ರಗಳ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೇಯರ್ ಶಾಂತಕುಮಾರಿ ಅವರು ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದರು. 'ನನ್ನ ಅಧಿಕಾರಾವಧಿ ಎಂಟು ತಿಂಗಳು ಇದೆ. ಇರುವ ಸಮಯದಲ್ಲಿಯೇ ನಗರದ ಸಮಸ್ಯೆ ನಿವಾರಣೆ ಮಾಡಲು ಪ್ರಯತ್ನ ನಡೆಸುತ್ತೇನೆ' ಎಂದು ಭರವಸೆ ನೀಡಿದರು.

ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕಿ ಗೀತಾಲಕ್ಷ್ಮೀ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೇಯರ್, ಘಟನೆಗೆ ಕಾರಣವಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಬಿಬಿಎಂಪಿ ವಿಭಜನೆ ಮಾಡುವುದು ಬೇಡ ಎಂದು ಹೇಳಿದ ಮೇಯರ್, ನಗರದಲ್ಲಿ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿ ಕಾರ್ಯ ಮುಂದಿನವಾರದಿಂದ ಆರಂಭವಾಗಲಿದೆ ಎಂದರು. ಸಂದರ್ಶನದ ವಿವರಗಳು ಇಲ್ಲಿವೆ ನೋಡಿ

ಶಾಂತಕುಮಾರಿ ಅವರನ್ನು ಸಮಸ್ಯೆಗಳೇ ಸ್ವಾಗತಿಸುತ್ತಿವೆಯೇ?
ಬೆಂಗಳೂರು ನಗರ ಬೆಳೆದಂತೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಎರಡು ಮೂರು ಪಟ್ಟು ಬೆಳೆದಿದೆ. ಆದ್ದರಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಜನರ ಸಹಕಾರವೂ ನಮಗೆ ಮುಖ್ಯ. ನಾನು ಅಧಿಕಾರಕ್ಕೆ ಬಂದ ಮೇಲೆ ಹಲವಾರು ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

Mayor N. Shanthakumari

ಮಳೆ ಬಂದಾಗ ಬೆಂಗಳೂರು ಏಕೆ ಹೀಗಾಗುತ್ತದೆ?
ನೋಡಿ 20 ವರ್ಷಗಳಿಂದ ನಾನು ಬೆಂಗಳೂರನ್ನು ನೋಡುತ್ತಿದ್ದೇನೆ. ಆಗ ಕೆರೆಗಳಿದ್ದವು ಮಳೆ ನೀರು ಭೂಮಿ ಕುಡಿದು, ಹೆಚ್ಚಾದ ನೀರು ಕೆರೆಗೆ ಹೋಗುತ್ತಿತ್ತು. ಕೆರೆ ತುಂಬಿ ಕೋಡಿಯೂ ಹರಿಯುತ್ತಿತ್ತು. ಇಂದು ಕೋಡಿಗಳ ಜಾಗಗಳು ಅತಿಕ್ರಮಣವಾಗಿವೆ. ಕೆಲವು ಕೆರೆಗಳ ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣವಾಗಿವೆ. ಆದ್ದರಿಂದ ನೀರು ಹೋಗಲು ಜಾಗವಿಲ್ಲದೇ ಸಮಸ್ಯೆ ಉಂಟಾಗುತ್ತಿದೆ. ಹೆಚ್ಚು ಮಳೆ ಸುರಿದರೆ ಮಾತ್ರ ಇಂತಹ ಸಮಸ್ಯೆ ಉಂಟಾಗುತ್ತದೆ.

ಭೂ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲವೇ?
ಭೂ ಒತ್ತುವರಿ ತೆರವು ಕಾರ್ಯಾಚರಣೆ ಶೀಘ್ರವಾಗಿ ಆಗುವ ಕೆಲಸವಲ್ಲ. ಉದಾಹರಣೆಗೆ ಕಿನೋ ಥಿಯೇಟರ್ ಬಳಿ ಮಳೆ ಬಂದಾಗ ಹೆಚ್ಚು ನೀರು ನಿಲ್ಲುತ್ತದೆ. ಇಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು 400 ಮನೆಗಳನ್ನು ಒಡೆಯಬೇಕಾಗುತ್ತದೆ. ಮನೆ ಒಡೆಯಲು ಮುಂದಾದರೆ, ಜನರು ಕೋರ್ಟ್‌ ಮೆಟ್ಟಿಲೇರುತ್ತಾರೆ. ತಡೆಯಾಜ್ಞೆ ತರುತ್ತಾರೆ. ಎಲ್ಲರ ಮನವೊಲಿಸಿ ಕಾಮಗಾರಿ ನಡೆಸಲು ಸುದೀರ್ಘ ಸಮಯ ಬೇಕಾಗುತ್ತದೆ. ಆದ್ದರಿಂದ ತುರ್ತು ಪರಿಹಾರವನ್ನು ಬಿಬಿಎಂಪಿ ಕಡೆಯಿಂದ ಕೈಗೊಳ್ಳುತ್ತೇವೆ. ಈಗ ಅಲ್ಲಿ ಮೋಟಾರ್ ಆಳವಡಿಸಿ ನೀರು ತೆಗೆಯಲಾಗುತ್ತಿದೆ.

ಮಳೆ ಬಂದಾಗ ಉಂಟಾಗುವ ಸಮಸ್ಯೆಗಳ ಬಗ್ಗೆ ಮುಂಜಾಗ್ರತಾ ಕ್ರಮವೇನು?
ಮಳೆಗಾಲ ಆರಂಭವಾಗುವುದಕ್ಕೆ ಮುಂಚೆ ಚರಂಡಿ ಹೂಳು ತೆಗೆಯುವುದು ಮುಂತಾದ ಕಾರ್ಯಕ್ರಮಗಳನ್ನು ವಾರ್ಡ್ ಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ. ಪ್ರತಿ ವಾರ್ಡ್‌ಗೆ 2 ಕೋಟಿ ಅನುದಾನ ನೀಡುತ್ತೇವೆ. ಅದರಲ್ಲಿ 20 ಲಕ್ಷ ತುರ್ತು ಕೆಲಸಗಳಿಗಾಗಿ ಖರ್ಚು ಮಾಡಬಹುದು. 10 ಸಿಬ್ಬಂದಿ, 1 ಟ್ರಾಕ್ಟರ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ, ಕೆಲವು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವುದಿಲ್ಲ.

ಗೀತಾಲಕ್ಷ್ಮೀ ಸಾವಿನ ಪ್ರಕರಣದ ಬಗ್ಗೆ ಏನು ಹೇಳುವಿರಿ?
ಅಧಿಕಾರಿಗಳ ಅಚಾತುರ್ಯದಿಂದಾಗಿ ಇಂತಹ ಘಟನೆ ಸಂಭವಿಸಿದೆ. ಕರ್ತವ್ಯಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಆಯುಕ್ತರು ಅಮಾನತು ಮಾಡಿದ್ದಾರೆ. ಘಟನೆಯಿಂದ ನನಗೆ ತುಂಬಾ ನೋವಾಯಿತು. ನಾನು ಮೇಯರ್ ಆಗಿದ್ದಾಗ ಇಂತಹ ಘಟನೆ ನಡೆಸಿದ್ದು, ಬೇಸರ ಉಂಟುಮಾಡಿದೆ. ಸರಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಯಾವಾಗ?
ಆಯುಕ್ತರು ಮತ್ತು ಅಧಿಕಾರಿಗಳ ಜೊತೆ ರಸ್ತೆಗಳ ದುರಸ್ತಿ ಕಾರ್ಯದ ಬಗ್ಗೆ ಸಭೆ ನಡೆಸಿದ್ದೇನೆ. ಸರ್ಕಾರ ಸಹ ತುರ್ತಾಗಿ 50 ಕೋಟಿ ಹಣ ಬಿಡುಗಡೆ ಮಾಡಲಿದೆ. ಮುಂದಿನ ವಾರದಿಂದಲೇ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಸರಿಯಾಗಿ ಕಾಮಗಾರಿ ನಡೆಸದಿದ್ದರೆ, ಗುತ್ತಿಗೆದಾರರಿಗೆ ಹಳೆಯ ಬಿಲ್ ಮತ್ತು ಹೊಸ ಬಿಲ್ ಎರಡನ್ನೂ ಪಾವತಿ ಮಾಡುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇವೆ.

English summary
Oneindia Kannada interview : The Bruhat Bengaluru Mahanagara Palike (BBMP) Mayor N. Shanthakumari interview on problems of Bangalore. Mayor said, BBMP need citizens help to solve problems of city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X