ದೇವೇಗೌಡ ಭೇಟಿಯಾದ ಮೇಯರ್ ಮಂಜುನಾಥ್ ರೆಡ್ಡಿ!
ಬೆಂಗಳೂರು, ಆಗಸ್ಟ್ 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಸುವ ಕುರಿತು ಚರ್ಚೆ ನಡೆಯುತ್ತಿದೆ. ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸೆಪ್ಟೆಂಬರ್ 19ರಂದು ಚುನಾವಣೆ ನಡೆಯಲಿದೆ.
ಮಂಗಳವಾರ ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ ಮತ್ತು ಆಡಳಿತ ಪಕ್ಷದ ನಾಯಕ, ದತ್ತಾತ್ರೇಯ ವಾರ್ಡ್ನ ಕಾಂಗ್ರೆಸ್ ಸದಸ್ಯ ಆರ್.ಎಸ್. ಸತ್ಯನಾರಾಯಣ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದರು.[ಮೇಯರ್ ಚುನಾವಣೆ : ಜೆಡಿಎಸ್ ಬೆಂಬಲ ಯಾರಿಗೆ?]
ಸೆಪ್ಟೆಂಬರ್ 19ರಂದು ನಡೆಯಲಿರುವ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಈ ಅವಧಿಯಲ್ಲಿಯೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರೆಯುವ ಸಾಧ್ಯತೆ ಇದೆ.[JDSಗೆ ಸೆಡ್ಡು ಹೊಡೆಯಲಿದ್ದಾರೆ ಭಿನ್ನಮತೀಯರು]
ಸದ್ಯ, ಮೇಯರ್ ಆಗಿರುವ ಬಿ.ಎನ್.ಮಂಜುನಾಥ್ ರೆಡ್ಡಿ ಮತ್ತು ಉಪ ಮೇಯರ್ ಎಸ್.ಪಿ.ಹೇಮಲತಾ ಅವರ ಅಧಿಕಾರಾವಧಿ ಸೆಪ್ಟೆಂಬರ್ 14ರಂದು ಕೊನೆಗೊಳ್ಳಲಿದೆ. ಸೆ.19ರಂದು ಚುನಾವಣೆ ನಡೆಯಲಿದ್ದು, ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.[ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!]
ಮೈತ್ರಿ ಮುಂದುವರೆಯುತ್ತಾ? : ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಈಗ ಸರಿಯಾಗಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಆರು ತಿಂಗಳ ಹಿಂದೆಯೇ ಮೈತ್ರಿ ಮುರಿಯುವ ಮಾತನಾಡಿದ್ದರು. ಸರಿಯಾಗಿ ಆಡಳಿತ ನಡೆಸಲು ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕಿಸಿದ್ದರು.
ಹಿಂದೆ ಮೈತ್ರಿ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಅವರು, 'ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದಂತೆ ಕೇಳುತ್ತೇವೆ. ದೇವೇಗೌಡರ ಜೊತೆ ಮಾತನಾಡುವ ಹೊಣೆಯನ್ನು ಅವರಿಗೆ ನೀಡುತ್ತೇವೆ' ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.