'ಬಿಬಿಎಂಪಿ ಮೇಯರ್ ಪಟ್ಟದ ಮೈತ್ರಿ ಇನ್ನೂ ಅಂತಿಮವಾಗಿಲ್ಲ'
ಬೆಂಗಳೂರು, ಸೆಪ್ಟೆಂಬರ್ 16 : 'ಜೆಡಿಎಸ್ ಬಿಬಿಎಂಪಿಯಲ್ಲಿನ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ ಎಂಬುದು ಉಹಾಪೋಹ. ದೇವೇಗೌಡ, ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಪರಮೇಶ್ವರ ಅವರು, 'ಪದಾಧಿಕಾರಿಗಳ ಸಭೆಯಲ್ಲಿ ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರೆಸುವ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ' ಎಂದು ತಿಳಿಸಿದರು.[ಮೇಯರ್ ಚುನಾವಣೆ : ಅಂಕಿ-ಸಂಖ್ಯೆಗಳಲ್ಲಿ ಬಲಾಬಲ]
'ಶೀಘ್ರದಲ್ಲೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚೆ ನಡೆಸುತ್ತೇನೆ. ಬಳಿಕ ಮೈತ್ರಿ ಮುಂದುವರೆಸುವ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ' ಎಂದರು.[ಬಿಬಿಎಂಪಿ ಮೈತ್ರಿ : ಅಡ್ಡಗೋಡೆ ಮೇಲೆ ದೀಪವಿಟ್ಟ ಕುಮಾರಸ್ವಾಮಿ]
ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸೆ.28ರಂದು ಚುನಾವಣೆ ನಡೆಯಲಿದೆ. ಈ ಬಾರಿ ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆ ಎಂಬುದರ ಆಧಾರದ ಮೇಲೆ ಮೇಯರ್ ಯಾರು? ಎಂಬುದು ತೀರ್ಮಾನವಾಗುತ್ತದೆ.
ಮೇಯರ್ ಪಟ್ಟಕ್ಕೆ ಏರಲು ಮ್ಯಾಜಿಕ್ ನಂಬರ್ 135. ಸದ್ಯ, ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ 76 ಬಿಬಿಎಂಪಿ ಸದಸ್ಯರು, 28 ಶಾಸಕರು, 8 ಸಂಸದರನ್ನು ಒಳಗೊಂಡು 112 ಸದಸ್ಯ ಬಲ ಹೊಂದಿದೆ. ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಮೇಯರ್ ಪಟ್ಟ ಒಲಿಯಲಿದೆ.