ಮುನಿರತ್ನ ಕಟ್ಟಡದಲ್ಲಿ ಬಿಬಿಎಂಪಿ ಕಡತ : ಸಿಬಿಐ ತನಿಖೆಗೆ ಒತ್ತಾಯ
ಬೆಂಗಳೂರು, ಡಿ. 31: ಬಿಬಿಎಂಪಿ ಸಭೆ ಮತ್ತೆ ರಣರಂಗವಾಗಿದೆ. ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ ಸೇರಿದ ಕಟ್ಟಡದಲ್ಲಿ ಬಿಬಿಎಂಪಿ ಕಡತಗಳು ಸಿಕ್ಕಿವೆ ಎಂಬ ಆರೋಪ ಮಂಗಳವಾರ ನಡೆದ ಸಭೆಯಲ್ಲಿ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.
ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಬಿಬಿಎಂಪಿ ಕಡತಗಳು ಶಾಸಕರ ಕಚೇರಿಯಲ್ಲಿ ವಿಲೇವಾರಿ ಆಗಿರುವುದು ಕಂಡುಬಂದಿದೆ. ಇಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆಯಿದೆ ಎಂದು ಆರೋಪಿಸ ಆಡಳಿತ ಪಕ್ಷದ ಸದಸ್ಯರು ದಿನವಿಡೀ ಪ್ರತಿಭಟನೆ ನಡೆಸಿದರು. [ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಂಧನ]
ಪ್ರತಿಕ್ರಿಯಿಸದ ಕಾಂಗ್ರೆಸ್ : ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸದಸ್ಯರು ಸುಮ್ಮನೆ ಕುಳಿತಿದ್ದರು. ಆದರೆ, ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪ್ರತಿಭಟನೆಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದರು.
ಸಭೆ ಆರಂಭದಿಂದಲೇ ಪ್ರತಿಭಟನೆಗಿಳಿದ ಬಿಜೆಪಿ ಸದಸ್ಯರಾದ ರವೀಂದ್ರ, ನಾಗರಾಜು ಇನ್ನಿತರರು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು. ಮುನಿರತ್ನ ಅವರಿಗೆ ಸೇರಿದ ಕಟ್ಟಡದ ಲೋಕಾಯುಕ್ತ ದಾಳಿ ನಡೆದ ಸಂದರ್ಭದಲ್ಲಿ ಬಿಬಿಎಂಪಿ ಕಡತಗಳು ಸಿಕ್ಕ ಕಾರಣ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಅವರನ್ನು ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. [ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಜಯಭೇರಿ]
ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳನ್ನು ಬಂಧಿಸಬಾರದು. ಕಚೇರಿಯಲ್ಲಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಸಿಬಿಐ ತನಿಖೆಗೆ ವಿರೋಧವಿಲ್ಲ : ಕಟ್ಟಡದಲ್ಲಿ ಬಿಬಿಎಂಪಿ ಕಡತ ಸಿಕ್ಕ ಪ್ರಕರಣದಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು. ಈ ಕುರಿತು ಸಿಬಿಐ ತನಿಖೆ ನಡೆಸಲು ನನ್ನ ಅಭ್ಯಂತರವಿಲ್ಲ ಎಂದು ಮುನಿರತ್ನ ಹೇಳಿಕೆ ನೀಡಿದರು.
ಏನಿದು ಪ್ರಕರಣ? : ವೈಯಾಲಿಕಾವಲ್ನಲ್ಲಿರುವ ಖಾಸಗಿ ಕಟ್ಟಡವೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಅಲ್ಲಿ ಬಿಬಿಎಂಪಿಗೆ ಸೇರಿದ ಹಲವು ಕಡತಗಳು ಪತ್ತೆಯಾಗಿದ್ದವು. ಈ ಕಟ್ಟಡ ಶಾಸಕ ಮುನಿರತ್ನ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಗಿದೆ.