ಗೌಡ್ರ ರಾಜಕೀಯಕ್ಕೆ ಮೇಲುಗೈ: ಬಿಬಿಎಂಪಿ 'ಗದ್ದುಗೆ' ಮಾತುಕತೆ ಅಂತಿಮ
ಬೆಂಗಳೂರು, ಸೆ 25: ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ತೀರ್ಪಿನ ನಂತರ ತನ್ನ ರಾಜಕೀಯ ಜೀವನದ ಅನುಭವವನ್ನೆಲ್ಲಾ ಧಾರೆ ಎರೆದು ಸರಕಾರದ ಪರವಾಗಿ ನಿಂತು, ರಾಜ್ಯದ ಜನರ ಎದುರಿಗೆ ಸೈ ಎನಿಸಿಕೊಂಡಿದ್ದ ಜೆಡಿಎಸ್ ವರಿಷ್ಠ ದೇವೇಗೌಡ, ಬಿಬಿಎಂಪಿ ವಿಚಾರದಲ್ಲಿ ತನ್ನ ಎಂದಿನ ದಾಳ ಉರುಳಿಸಿದ್ದಾರೆ.
ತಮ್ಮ ಪಕ್ಷದ ಕೆಲವೇ ಸಂಖ್ಯೆಯ ಸದಸ್ಯರು ಬಿಬಿಎಂಪಿಯಲ್ಲಿದ್ದರೂ ತಾನಿಟ್ಟ ರಾಜಕೀಯ ನಡೆಗೆ ಮೇಲುಗೈ ಸಿಗುವಂತೆ ನೋಡಿಕೊಳ್ಳುವ ಗೌಡ್ರು, ಬಹುತೇಕ ತಾವು ಬಯಸಿದಂತೆಯೇ ಬಿಬಿಎಂಪಿ ಹೊಂದಾಣಿಕೆ ಮಾತುಕತೆಯನ್ನು ಮಗನ ಮುಖಾಂತರ ಮುಗಿಸಿದ್ದಾರೆ. (ಬಿಬಿಎಂಪಿ ಮೇಯರ್ ಚುನಾವಣೆ, ಅಂಕಿ ಸಂಖ್ಯೆಗಳಲ್ಲಿ ಬಲಾಬಲ)
ಬಿಬಿಎಂಪಿ ಚುನಾವಣೆ ಮೈತ್ರಿ ವಿಚಾರದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಡುವೆ ಇದೀಗ ಸ್ವಲ್ಪ ಹೊತ್ತಿಗೆ ಮುನ್ನ (ಸೆ 25) ಮುಕ್ತಾಯಗೊಂಡ ಸಭೆ ಫಲಪ್ರದವಾಗಿದೆ.
ಕಾವೇರಿ ವಿವಾದಕ್ಕೂ, ಬಿಬಿಎಂಪಿಗೂ ಹೋಲಿಕೆ ಮಾಡಬೇಡಿ. ಅದು ಬೇರೆ, ಇದು ಬೇರೆ. ಇದಕ್ಕು ಅದಕ್ಕೂ ಏನೂ ಸಂಬಂಧವಿಲ್ಲ. ಬಿಬಿಎಂಪಿ ವಿಚಾರವನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ ಎಂದು ದೇವೇಗೌಡರು ಭಾನುವಾರ ಬೆಳಗ್ಗೆ ಹೇಳಿದ್ದರು.
ಬಿಬಿಎಂಪಿಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸದಸ್ಯರಿದ್ದರೂ, ಗೌಡ್ರ ರಾಜಕೀಯ ದಾಳದ ಮುಂದೆ ಕೈಕಟ್ಟಿ ಕೂತಿದ್ದ ಬಿಜೆಪಿ, ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿತ್ತು.
ಇದೇ ಬರುವ ಬುಧವಾರ (ಸೆ 28) ನಡೆಯಲಿರುವ ಬಿಬಿಎಂಪಿ ಚುನಾವಣೆಯ ವಿಚಾರದಲ್ಲಿ ಪರಮೇಶ್ವರ್, ಎಚ್ದಿಕೆ ಮಾತುಕತೆಯಲ್ಲಿ ಉಭಯ ಪಕ್ಷಗಳ ಒಪ್ಪಂದ, ಏನಿತ್ತು?
ಕಾವೇರಿಗಾಗಿ ಉಪವಾಸ
ತುಮಕೂರಿನಲ್ಲಿ ಭಾನುವಾರ (ಸೆ25) ಕೆಂಪೇಗೌಡ ಜಯಂತಿ ಉತ್ಸವದಲ್ಲಿ ಮಾತನಾಡುತ್ತಿದ್ದ ಗೌಡ್ರು, ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವುದೇ ಅಂತಿಮವಾದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆಂದು ದೇವೇಗೌಡರು ಹೇಳಿದ್ದಾರೆ.
ಬಿಬಿಎಂಪಿ ಮಾತುಕತೆ
ಖಾಸಗಿ ಹೋಟೆಲ್ ನಲ್ಲಿ ನಡೆದ ಮಾತುಕತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರಾಮಲಿಂಗ ರೆಡ್ಡಿ, ಕುಪೇಂದ್ರ ರೆಡ್ಡಿ ಮುಂತಾದ ಮುಖಂಡರು ಭಾಗವಹಿಸಿದ್ದರು.
ಸ್ಥಾಯಿ ಸಮಿತಿ ಸದಸ್ಯರು
ಕಳೆದ ವರ್ಷದಂತೇ, ಮೇಯರ್ ಸ್ಥಾನವನ್ನು ಕಾಂಗ್ರೆಸ್ ಮತ್ತು ಉಪಮೇಯರ್ ಸ್ಥಾನವನ್ನು ಜೆಡಿಎಸ್ ಹಂಚಿಕೊಳ್ಳಲಿದೆ. ಎಚ್ಡಿಕೆ ಬೇಡಿಕೆಯಂತೆ, ಆರು ಪ್ರಮುಖ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತ. ಸದ್ಯ, ಜೆಡಿಎಸ್ ಎರಡು ಸದಸ್ಯ ಸ್ಥಾನವನ್ನು ಹೊಂದಿದೆ.
ಬಿಬಿಎಂಪಿ ಚುನಾವಣೆ
ದೇವೇಗೌಡರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರೂ ನಮ್ಮ ಪಕ್ಷದ ಜೊತೆಗೆ ಮೈತ್ರಿಗೆ ಉತ್ಸುಕರಾಗಿದ್ದಾರೆ, ಏನು ಮಾಡುವುದೆಂದು ಸುಮಾರು ಎರಡು ತಾಸು ಮಾತುಕತೆ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಕಾಂಗ್ರೆಸ್ ಪರವಾಗಿ ಹೋಗುವುದೇ ಉತ್ತಮ ಎಂದು ಗೌಡ್ರು, ಕುಮಾರನಿಗೆ ಆದೇಶ ನೀಡಿದ್ದರು ಎನ್ನುವ ಮಾಹಿತಿಯಿದೆ.
ಉಲ್ಟಾ ಹೊಡೆದ ಕುಮಾರಣ್ಣ
ಮೇಯರ್ ಸ್ಥಾನ ಬಿಟ್ಟುಕೊಡುವ ಪಕ್ಷದೊಂದಿಗೆ ನಮ್ಮ ಮೈತ್ರಿ ಎಂದು ಕುಮಾರಸ್ವಾಮಿ ಒಂದು ದಿನದ ಹಿಂದೆಯಷ್ಟೇ ಹೇಳಿದ್ದರು. ಮೇಯರ್ ಸ್ಥಾನ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ಖಡಾಖಂಡಿತವಾಗಿ ಹೇಳಿತ್ತು. ಇದಾದ ನಂತರ ತಮ್ಮ ನಿಲುವನ್ನು ಬದಲಿಸಿ, ಗೌಡ್ರು ಹೇಳಿದಂತೆ ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಮೇಲೆ ಕುಮಾರಸ್ವಾಮಿ ಗಮನಹರಿಸಿದ್ದಾರೆ.