ಬಿಬಿಎಂಪಿ ಫಲಿತಾಂಶ: ಬೆಂಗಳೂರಿಗರ ಮನಸ್ಸಿನಲ್ಲಿ ಏನಿದೆ?
ಬೆಂಗಳೂರು, ಆಗಸ್ಟ್, 26: 'ಫಲಿತಾಂಶ ಏನೇ ಬಂದಿರ್ಲಿ, ನಮಗೆ ಬೇಕಾಗಿರೋದು ಒಳ್ಳೆ ರಸ್ತೆ, ಕುಡಿಯುವ ನೀರು, ಸಮರ್ಪಕ ಕಸ ವಿಲೇವಾರಿ. ಯಾರು ಗೆದ್ರೇ ಏನಂತೆ ಇವಿಷ್ಟು ಮಾಡಿಕೊಟ್ಟರೆ ಸಾಕು'
ಇದು ಬೆಂಗಳೂರಿನ ಪ್ರತಿಯೊಬ್ಬನಾಗರಿಕನ ಮನಸ್ಸಿನಲ್ಲಿ ಇರುವ ಸಂಗತಿ. ಇದನ್ನು ಹೊಸ ಕಾರ್ಪೋರೇಟರ್ ಗಳು ಬೇಡಿಕೆ ಎಂದುಕೊಂಡ್ರೂ ತಪ್ಪಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಪಕ್ಷಗಳು ಸೋಲು-ಗೆಲುವಿನ ಪರಾಮರ್ಶೆ ಮಾಡುತ್ತಿವೆ.[ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್ಸಿಗೆ ಮುಖಭಂಗ]
ಆದರೆ ನಿಜಕ್ಕೂ ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬೆನ್ನು ಹತ್ತಿ ಹೊರಟ ನಮಗೆ ಸಿಕ್ಕ ಉತ್ತರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಬೆಂಗಳೂರು ನಾಗರಿಕರು ಬಿಬಿಎಂಪಿ ಫಲಿತಾಂಶದ ಬಗ್ಗೆ ಏನಂದ್ರು? ಅವರು ನಿಜವಾಗಿ ಬಯಸುತ್ತಿರುವುದು ಏನನ್ನು? ಎಂಬುದಕ್ಕೆ ಉತ್ತರ ಇದೆ.
ಅವಕಾಶ ಬಳಸಿಕೊಳ್ಳಲಿ
ಜನ ಹಿಂದೆಯೂ ಬಿಜೆಪಿಗೆ ಅವಕಾಶ ನೀಡಿದ್ದರು. ಈ ಬಾರಿ ಮತ್ತೆ ನೀಡಿದ್ದಾರೆ ಸಿಕ್ಕ ಅವಕಾಶವನ್ನು ಅಭಿವೃದ್ಧಿ ಕೆಲಸ ಮಾಡಲು ಬಳಸಿಕೊಳ್ಳಲಿ. ಕಚ್ಚಾಟಗಳನ್ನು ದೂರ ಇಡಲಿ-ಬಿ. ಎನ್.ಪ್ರಭಾಕರ್, ಜಯನಗರ ವಾರ್ಡ್.
ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಿ
ಟ್ರಾಫಿಕ್ ಸಮಸ್ಯೆ ಬಗೆಹರಿದರೆ ಅರ್ಧ ಸಮಸ್ಯೆ ಮುಗಿದಂತೆ. ಇಲ್ಲ ಸಲ್ಲದ ಕಾನೂನು ಮಾಡುವ ಬದಲು ಕಿತ್ತು ಹೋಗಿರುವ ರಸ್ತೆ ರಿಪೇರಿ ಮಾಡಲು ಮೊದಲ ಆದ್ಯತೆ ನೀಡಲಿ.-ರಮೇಶ್, ಆಟೋ ಚಾಲಕ
ಇನ್ನಷ್ಟು ಕಂಪನಿಗಳು ಬರಲಿ
ಮಹಾನಗರಕ್ಕೆ ಇನ್ನಷ್ಟು ಕಂಪನಿಗಳು ಬರಬೇಕು. ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಯಾದರೆ ಎಲ್ಲವೂ ತನ್ನಿಂದ ತಾನೇ ಸರಿ ಹೋಗುತ್ತದೆ.-ಸುಖೇಶ್ ವಿದ್ಯಾರ್ಥಿ.
ಜನ ಬದಲಾಗಬೇಕು
ನಾವು ರಾಜಕಾರಣಿಗಳ ಮೇಲೆ ಆರೋಪ ಮಾಡುವುದೊಂದೆ ಅಲ್ಲ ಜನರಲ್ಲೂ ಬದಲಾವಣೆ ಬಂದರೆ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ. ಜನಪರ ಕಾನೂನು ಮಾಡಲು ಪಕ್ಷ, ತಾರತಮ್ಯ ಮರೆತು ಎಲ್ಲರೂ ಹೋರಾಟ ಮಾಡಲಿ. ನರಸಿಂಹಮೂರ್ತಿ.
ಕಟ್ಟಿಕೊಂಡ ಚರಂಡಿ ದುರಸ್ತಿ ಮಾಡಲಿ
ಮಳೆ ಬಂತು ಎಂದರೆ ನಗರದಲ್ಲಿ ಸಮಸ್ಯೆಗಳ ಸರಣಿ ಆರಂಭವಾಗುತ್ತದೆ. ತಲೆ ಮೇಲೆ ಬೀಳುವ ಮರ ತೆರವು ಮಾಡಲಿ. ಚರಂಡಿಗಳ ವ್ಯವಸ್ಥಿತ ನಿರ್ಮಾಣ ಮೊದಲಾಗಲಿ.-ರಾಜೇಶ್, ಪಾನಿಪೂರಿ ಅಂಗಡಿ ಮಾಲೀಕ.
ಮೇಲ್ಸೆತುವೆ ನಿರ್ಮಾಣವಾಗಲಿ
ರಿಂಗ್ ರೋಡ್ ನಗರದ ಒಳಕ್ಕೆ ಸೇರಿಕೊಂಡಿದೆ. ಅನೇಕ ಕಡೆ ರಸ್ತೆ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ. ಅಗತ್ಯವಿರುವೆಡೆ ಮೇಲ್ಸೆತುವೆ, ಅಂಡರ್ ಪಾಸ್ ಗಳನ್ನು ನಿರ್ಮಿಸಿದರೆ ಉತ್ತಮ-ಇರ್ಫಾನ್, ವಿದ್ಯಾರ್ಥಿ
ಅವಕಾಶ ಹಾಳು ಮಾಡಿಕೊಳ್ಳಬೇಡಿ
ಇದು ಬಿಜೆಪಿ, ಕಾಂಗ್ರೆಸ್ ಗೆ ಸಂಬಂಧಿಸಿದ ವಿಚಾರವಲ್ಲ. ಇಡೀ ಬೆಂಗಳೂರಿನ ಅಭಿವೃದ್ಧಿ ಹೊಸ ಜನಪ್ರತಿನಿಧಿಗಳ ಹೊಣೆ. ಪಕ್ಷ ಅಥವಾ ಜಾತಿ ಮತ್ತಿತರ ಅಂಶಗಳನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಜನಪರ ಕೆಲಸ ಮಾಡಿ- ಕೃಷ್ಣಮೂರ್ತಿ