ಬಿಬಿಎಂಪಿ ಬಜೆಟ್ : ಸ್ವಚ್ಛ, ಹಸಿರು ಬೆಂಗಳೂರಿನತ್ತ ಒಂದು ಹೆಜ್ಜೆ!
210 ಹೊಸ ಪಾರ್ಕ್ ಗಳು ನಿರ್ಮಾಣ, 10 ಲಕ್ಷಕ್ಕೂ ಹೆಚ್ಚು ಸಸಿ ನೆಡುವ ಯೋಜನೆ ಸೇರಿದಂತೆ ಉದ್ಯಾನ ನಗರಿಯನ್ನು ಹಸಿರು ಬೆಂಗಳೂರನ್ನಾಗಿ, ಸ್ವಚ್ಛ ಬೆಂಗಳೂರನ್ನಾಗಿ ಪರಿವರ್ತಿಸಲು ಅಗತ್ಯವಿರುವ ಹಲವು ಯೋಜನೆಗಳನ್ನು ಬಿಬಿಎಂಪಿ ಬಜೆಟ್ ನಲ್ಲಿ ಇಂದು ಮಂಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2017-18 ನೇ ಸಾಲಿನ್ ಬಜೆಟ್ ಅನ್ನು ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಸ್ವಚ್ಛ ಬೆಂಗಳೂರು ನಮ್ಮ ಮೊದಲ ಆಧ್ಯತೆ ಎಂದಿದ್ದಾರೆ[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]
ಮಾರ್ಚ್ 15 ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನ ಪ್ರತಿರೂಪ ಎಂದೇ ಕರೆಸಿಕೊಳ್ಳುತ್ತಿರುವ ಬಿಬಿಎಂಪಿ ಬಜೆಟ್ ನ ಯೋಜನಾ ಗಾತ್ರ 9241.05 ಕೋಟಿ ರೂಪಾಯಿಯಾದರೆ, ರಾಜ್ಯ ಸರ್ಕಾರದಿಂದ ಬಂದ ಅನುದಾನ 4249 ಕೋಟಿ ರೂ. ಕಳೆದ ವರ್ಷ ಬಜೆಟ್ ನಲ್ಲಿ ಮಂಡಿಸಲಾದ ಹಲವು ವಿಷಯಗಳೇ ಮತ್ತೆ ಪ್ರಸ್ತಾಪವಾಗಿರುವುದು ಕಳೆದ ಬಾರಿಯ ಬಜೆಟ್ ನ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆ ಅನ್ನಿಸಿದೆ.[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]
ಬಜೆಟ್ ನಲ್ಲಿ ಐಟಿ ಸಿಟಿಯನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ ಏನೆಲ್ಲಾ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ಕಿರುಚಿತ್ರಣ ಇಲ್ಲಿದೆ.
210 ಹೊಸ ಪಾರ್ಕಿಗಳ ನಿರ್ಮಾಣ
ಉದ್ಯಾನ ನಗರಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವತ್ತ ಚಿಂತನೆ ನಡೆಸಿರುವ ಬಿಬಿಎಂಪಿ ನಗರದಲ್ಲಿ 210 ಹೊಸ ಪಾರ್ಕುಗಳನ್ನು ನಿರ್ಮಿಸುವ ಮತ್ತು, 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯೋಜನೆಯನ್ನು ಜಾರಿಗೊಳಿಸಲಿದೆ. ಅಲ್ಲದೆ, ಶಾಲೆ, ಕಾಲೇಜು ಆವರಣಗಳಲ್ಲಿ ಮರಗಳನ್ನು ಬೆಳೆಸುವ ಬಗ್ಗೆಯೂ ಚಿಂತನೆ ನಡೆಸಿದ್ದು ಈ ಎಲ್ಲವೂ ಹಸಿರು ಬೆಂಗಳೂರಿನತ್ತ ಪಾಲಿಕೆಯ ಮೊದಲ ಹೆಜ್ಜೆಯಾಗಲಿದೆ.[ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್]
ಕಸದ ಕತೆಯೇನು?
ಎಲ್ಲೆಂದರಲ್ಲಿ ಕಸ ಎಸೆಯುವವರ ಉಪಟಳಕ್ಕೆ ಕಡಿವಾಣ ಹಾಕುವುದಕ್ಕಾಗಿ 7 ಕೋಟಿ ರೂ. ವೆಚ್ಚದಲ್ಲಿ ಮಾರ್ಶಲ್ ಗಳ ಸೇವೆಯನ್ನು ಪಡೆಯಲು ಪಾಲಿಕೆ ನಿರ್ಧರಿಸಿದೆ. ಉದ್ಯಾನನಗರಿಯ ಬಹುಮುಖ್ಯ ಸಮಸ್ಯೆಯಾದ ಕಸ ವಿಲೇವಾರಿ ಬಗ್ಗೆಯೂ ಪ್ರಸ್ತಾಪಿಸಿದ ಪಾಲಿಕೆ, ಕಸದಿಂದ ತಯಾರಿಸಿದ ಮಿಶ್ರ ಗೊಬ್ಬರದ ಖರೀದಿ ಕೇಮದ್ರಗಳನ್ನು ಎಲ್ಲಾ 198 ವಾರ್ಡ್ ಗಳಲ್ಲೂ ತೆರೆಯುವುದಾಗಿ ಹೇಳಿದೆ. ಇದರೊಂದಿಗೆ ಮನೆಯ ಸುತ್ತ ಮುತ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಎಂದಿನಂತೆ ದಂಡ ವಿಧಿಸಲಾಗುತ್ತದೆ.
ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ
ರಾಜಧಾನಿ ಬೆಂಗಳೂರಿನ ಬಹುಮುಖ್ಯ ಸಮಸ್ಯೆ ಎನ್ನಿಸಿರುವ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕುವುದಕ್ಕಾಗಿ ನಿರುಪಯೋಗಿಯಾಗಿರುವ ಹಳೆಯ ಬಿಬಿಎಂಪಿ ಮಾರ್ಕೆಟ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ. ಅಲ್ಲದೆ ಯಾವುದೇ ವ್ಯಕ್ತಿ ತನ್ನ ಸ್ವಂತ ಜಾಗದಲ್ಲಿ ಸಾರ್ವಜನಿಕ ಪಾರ್ಕಿಂಗ್ ಗೆ ಅನುವು ಮಾಡಿಕೊಟ್ಟಲ್ಲಿ ಅಂಥವರಿಗೆ ತೆರಿಗೆ ವಿನಾಯಿತಿ ದೊರೆಯಲಿದೆ. 12 ಕಡೆಗಳಲ್ಲಿ ಬಹುಮಹಡಿಯ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಕೆರೆಗಳ ಪುನಶ್ಚೇತನದ ಗುರಿ
ಬೆಂಗಳೂರಿನಲ್ಲಿರುವ 58 ಪ್ರಮುಖ ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕೆ 89.50 ಕೋಟಿ ರೂ. ಮೀಸಲಾಗಿಡಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿರುವ ಹಲವು ಕೆರೆಗಳು ಬತ್ತಿ ಹೋಗಿದ್ದು, ರಾಜಧಾನಿಯ ಭವಿಷ್ಯದ ದೃಷ್ಟಿಯಿಂದ ಕೆರೆಗಳ ಪುನಶ್ಚೇತನ ಅನಿವಾರ್ಯವಾಗಿದೆ. ಇದಲ್ಲದೆ, ಎಲ್ಲ ಬಿಬಿಎಂಪಿ ಪಾರ್ಕ್ ಗಳಲ್ಲಿ ನೀರಿನ ಟ್ಯಾಂಕ್ ಅನ್ನು ಸ್ಥಾಪಿಸಲಾಗುತ್ತಿದೆ.
ಆರೋಗ್ಯ ಭಾಗ್ಯ!
ಬಡವರಿಗೆ ಆಂಜಿಯೋಗ್ರಾಂ ಚಿಕಿತ್ಸೆಗಾಗಿ ಅಗತ್ಯವಿರುವ ಸ್ಟೆಂಟ್ ಗಳಿಗಾಗಿ ಪಾಲಿಕೆ 4 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಲ್ಲದೆ, ಇನ್ನು ಮುಂದೆ ಅಗತ್ಯ ಔಷಧಗಳು ಎಲ್ಲ ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲೂ ಸಿಗಲಿವೆ. ಶಿವಾಜಿನಗರ, ಸರ್ವಜ್ಞ ನಗರ, ಬಿಟೆಂ ಲೇಔಟ್ ಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತೆರೆಯಲಾಗುತ್ತಿದೆ. 20 ವಿಧಾನ ಸಭಾ ಕ್ಷೇತ್ರಗಳಲ್ಲಿ 20 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಡಿಜಿಟಲ್ ಸ್ಪರ್ಶ
ಯಾವುದೇ ವ್ಯಕ್ತಿಗೆ ತಾನು ವಾಸಿಸುವ ಪ್ರದೇಶದಲ್ಲಿ ಗಿಡ ಬೆಳೆಸುವ ಬಗ್ಗೆ ಆಸಕ್ತಿ ಇದ್ದಲ್ಲಿ, ಅದಕ್ಕೆಂದೇ ಮೀಸಲಿರುವ ಮೊಬೈಲ್ ಆಪ್ ಮೂಲಕ ಬಿಬಿಎಂಪಿ ಗೆ ತಿಳಿಸಬಹುದು. ಕಟ್ಟಡದ ನಕ್ಷೆ, ಖಾತಾಗೆ ಸಂಬಂಧಿಸಿದ ಮಾಹಿತಿಗಳು ಆನ್ ಲೈನ್ ನಲ್ಲೇ ಲಭ್ಯವಾಗುವಂತೆ ಮಾಡಲಾಗುತ್ತಿದೆ. 19 ಲಕ್ಷ ಮನೆಗಳಿಗೆ ಡಿಜಿಟಲ್ ಮನೆ ನಂಬರ್ ನೀಡಲಾಗುತ್ತಿದೆ.
ಮತ್ತಷ್ಟು ಯೋಜನೆ
43 ರಸ್ತೆಗಳ ಅಭಿವೃದ್ಹಿಗಾಗಿ 649 ಕೋಟಿ ರೂ. ನಗರದ ನಾಗರಿಕ ಕಲ್ಯಾಣಕ್ಕಾಗಿ 503 ಕೋಟಿ ರೂ. ಸುವರ್ಣ ಪಾಲಿಕೆ ಸೌಧ ನಿರ್ಮಾಣಕ್ಕೆ 5 ಕೋಟಿ ರೂ, ಪೌರ ಕಾರ್ಮಿಕರ ಕಲ್ಯಾಣಕ್ಕೆ 29.5 ಕೋಟಿ ರೂ. ಸೇರಿದಂತೆ ಹಲವು ಯೋಜನೆಗಳ ಕುರಿತು ಇಂದು ಬಿಬಿಎಂಪಿ ಪ್ರಸ್ತಾಪಿಸಿದ್ದು, ಮುಂದಿನ ಬಜೆಟ್ ನಲ್ಲೂ ಇವೇ ಯೋಜನೆಗಳು ಪುನರಾವರ್ತನೆಯಾಗುತ್ತವೆಯೇ, ಅಥವಾ ನಿಜಕ್ಕೂ ಇವೆಲ್ಲ ಕಾರ್ಯರೂಪಕ್ಕೆ ಬರುತ್ತವೆಯೇ ಎಂಬುದನ್ನು ಬೆಂಗಳೂರಿಗರು ಕಾದುನೋಡಬೇಕಿದೆ.