ಬಿಬಿಎಂಪಿ ಬಜೆಟ್ : 10 ಹೊಸ ಯೋಜನೆಗಳು
ಬೆಂಗಳೂರು, ಮಾರ್ಚ್ 29 : 2016-17ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಬಜೆಟ್ ಮಂಡನೆಯಾಗಿದೆ. 8,994.41 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದ್ದು, ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಮಾರ್ಚ್ 28ರ ಸೋಮವಾರ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರಾಜ್ಯ ಸರ್ಕಾರದಿಂದ 4,222 ಕೋಟಿ ಮತ್ತು ಕೇಂದ್ರ ಸರ್ಕಾರದಿಂದ 13 ಕೋಟಿ ಅನುದಾನವನ್ನು ಬಿಬಿಎಂಪಿ ನಿರೀಕ್ಷೆ ಮಾಡಿದೆ. [ಬಿಬಿಎಂಪಿ ಬಜೆಟ್ 2016-17, ಮುಖ್ಯಾಂಶಗಳು]
ಬಿಬಿಎಂಪಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣಗಳ ಅಂಗಡಿಯ ಬಾಡಿಗೆ ದರ ಪರಿಷ್ಕರಣೆ ಮಾಡಲು ಪಾಲಿಕೆ ಮುಂದಾಗಿದೆ. ರಸೆಲ್, ಜಾನ್ಸನ್ ಮತ್ತು ಕೆ.ಆರ್.ಮಾರುಕಟ್ಟೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಮೀಸಲಾಗಿಡಲಾಗಿದೆ. [ಸುದ್ದಿದನಿ : ಬಿಬಿಎಂಪಿ ಬಜೆಟ್]
ಬಜೆಟ್ನಲ್ಲಿ ತ್ಯಾಜ್ಯ ವಿಲೇವಾರಿಗಾಗಿ 633 ಕೋಟಿ ಮತ್ತು ರಾಜಕಾಲುವೆಗಳ ದುರಸ್ತಿಗೆ 300 ಕೋಟಿ ಅನುದಾನ ವೆಚ್ಚ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಬಜೆಟ್ನಲ್ಲಿ ಘೋಷಣೆ ಮಾಡಿದ 10 ಪ್ರಮುಖ ಹೊಸ ಯೋಜನೆಗಳ ವಿವರ ಚಿತ್ರಗಳಲ್ಲಿದೆ.....
ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಬಸ್ ಪಾಸ್ ಸೌಲಭ್ಯ. ಇಂಗ್ಲಿಶ್ ಓದುವ, ಬರೆಯುವ ಮತ್ತು ಮಾತನಾಡುವ ತರಬೇತಿ, ಪಾಲಿಕೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ. ಪಾಲಿಕೆ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲು 'ನಮ್ಮ ನಾಡು ನೋಡೋಣ' ಯೋಜನೆ.
ನಾಡು-ನುಡಿ ಸೇವೆ ಕನ್ನಡ ಮನೆ ನಿರ್ಮಾಣ
ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ನಡೆಸಲು 'ಕನ್ನಡ ಮನೆ' ಸ್ಥಾಪನೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ 1 ಕೋಟಿ ಅನುದಾನ. ನಗರದ ಪಾರಂಪರಿಕ ಹಬ್ಬವಾದ ಕರಗ ಮಹೋತ್ಸವಕ್ಕೆ 1 ಕೋಟಿ ರೂ. ಅನುದಾನ.
ಅಂಗಾಂಗ ದಾನಿಗಳ ಕುಟುಂಬಕ್ಕೆ ಸಹಕಾರ
ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಗೆ ಬೆಂಬಲ ನೀಡಲು ಅಂಗಾಗ ದಾನ ಮಾಡಿದ ವ್ಯಕ್ತಿಯ ಅವಲಂಬಿತರಿಗೆ 1 ಲಕ್ಷ ರೂ.ಪರಿಹಾರ ನೀಡಲಾಗುತ್ತದೆ. ಮೇಯರ್ ವಿವೇಚನಾ ಅನುದಾನದಡಿ ಪರಿಹಾರ ವಿತರಣೆ ಮಾಡಲಾಗುತ್ತದೆ.
ಪೌರ ಕಾರ್ಮಿಕರಿಗೆ ಬಿಸಿಯೂಟ ಸೌಲಭ್ಯ
ನಗರವನ್ನು ಸ್ವಚ್ಛವಾಗಿಡಲು ದುಡಿಯವು ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡಲಾಗುತ್ತದೆ. ಕಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಣೆ ಮಾಡುವ ಸುಮಾರು 20 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬಿಸಿಯೂಟ ಮತ್ತು ಸಮವಸ್ತ್ರ ಬದಲಾವಣೆ ಮಾಡಲು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಲೈಗಿಂಕ ಅಲ್ಪಸಂಖ್ಯಾತರಿಗೆ ನೆರವು
ನಗರದಲ್ಲಿ ವಾಸಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರು ಗೌರವಯುತವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಸ್ವಾವಲಂಬನೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲಕರ ವ್ಯವಸ್ಥೆ ಮಾಡಲು 2 ಕೋಟಿ ರೂ. ಅನುದಾನ ನೀಡಲಾಗುತ್ತದೆ.
ಪಕ್ಷಿಗಳಿಗೆ ನೀರು ಕೊಡಿ
ನಗರದಲ್ಲಿರುವ ಉದ್ಯಾನವನಗಳಲ್ಲಿ ಹಣ್ಣುಗಳನ್ನು ಬಿಡುವ ಗಿಡಗಳನ್ನು ನೆಡಲು ಯೋಜನೆ. ಪಕ್ಷಿಗಳಿಗೆ ಸುಲಭವಾಗಿ ನೀರು ದೊರೆಯಲು ಮಣ್ಣಿನ ಪಾತ್ರೆಗಳನ್ನು ಇಡಲಾಗುತ್ತದೆ. ಹಲಸೂರು, ಮೇಡಿಹಳ್ಳಿ, ಅಗ್ರಹಾರ, ಸುಮನಹಳ್ಳಿಗಳಲ್ಲಿ ಪ್ರಾಣಿಗಳ ಸಂತಾನ ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ಬಿಸಿಯೂಟ, ವೃದ್ಧಾಶ್ರಮ
ಹಿರಿಯ ನಾಗರಿಕರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ. ನಿರಾಶ್ರಿತ ವಯೋವೃದ್ಧರಿಗಾಗಿ ವೃದ್ಧಾಶ್ರಮ ಸ್ಥಾಪನೆ, ಇದಕ್ಕಾಗಿ 'ಸಂಧ್ಯಾ ಕುಟೀರ' ಎಂಬ ಹೊಸ ಯೋಜನೆ. ನಿರಾಶ್ರಿತರಿಗೆ ಪಾಲಿಕೆಯ ಎಲ್ಲಾ ವಲಯಗಳಲ್ಲಿ ರಾತ್ರಿ ಆಶ್ರಯ ತಾಣ ಯೋಜನೆಯಡಿ ತಂಗುದಾಣಗಳು ಆರಂಭ.
ಮನೆ ನಿರ್ಮಿಸಲು 'ನಮ್ಮ ಮನೆ ಯೋಜನೆ'
'ನಮ್ಮ ಮನೆ' ಯೋಜನೆಯ ಸಹಾಯಧನದ ಮೊತ್ತ 3 ರಿಂದ 4 ಲಕ್ಷಕ್ಕೆ ಹೆಚ್ಚಳ. ಯೋಜನೆಯಡಿ ವೈಯಕ್ತಿಕ ಮನೆಗಳ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಪ್ರತಿ ವಾರ್ಡ್ನಲ್ಲಿ ತಲಾ 30 ಮನೆ ನಿರ್ಮಾಣ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅಲ್ಪ ಸಂಖ್ಯಾತರಿಗೆ ಪ್ರತಿ ವಾರ್ಡ್ನಲ್ಲಿ 15 ಮನೆ ನಿರ್ಮಾಣ
ಗ್ರಾಮೀಣ ಕ್ರೀಡೆಗಳಿಗೆ ಸಹಕಾರ
'ಅಂಗಳ' ಯೋಜನೆಯಡಿ ಗ್ರಾಮೀಣ ಕ್ರೀಡೆಗಳಿಗೆ ಸಹಕಾರ. ಹಳೆಯ ಮತ್ತು ಮರೆತು ಹೋಗುತ್ತಿರುವ ಕ್ರೀಡೆಗಳನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಲು 2 ಕೋಟಿ ರೂ. ಅನುದಾನ. ಪಾಲಿಕೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಪಾಲಿಕೆಯ ಖಾಲಿ ಜಾಗಗಳನ್ನು ಆಟದ ಮೈದಾನವಾಗಿ ಅಭಿವೃದ್ಧಿ ಮಾಡಲಾಗುತ್ತದೆ.
'ಸ್ತ್ರೀ' ಯೋಜನೆಯಡಿ 10 ಲಕ್ಷ ಅನುದಾನ
ಪಾಲಿಕೆಯಲ್ಲಿ ಶೇ 50ರಷ್ಟಿರುವ ಮಹಿಳೆಯರ ವಾರ್ಡ್ಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು 'ಸ್ತ್ರೀ' ಯೋಜನೆಯಡಿ ಪ್ರತಿ ವಾರ್ಡ್ಗೆ 10 ಲಕ್ಷ ಅನುದಾನ. ಪಾಲಿಕೆಯ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಸೇವೆ ಪಡೆಯುವ ಎಲ್ಲಾ ವರ್ಗದ ಮಹಿಳೆಯರಿಗೆ ತಾಯಿ ಮಡಿಲು ಕಿಟ್ ವಿತರಣೆ.