ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು 11 ಕೋಟಿ ಬಿಡುಗಡೆ
ಬೆಂಗಳೂರು, ನವೆಂಬರ್ 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆ ಬಿಡುವು ಕೊಟ್ಟಿದ್ದು ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಾಲನೆ ನೀಡಿದೆ. ಗುಂಡಿ ಮುಚ್ಚುವ ಕಾಮಗಾರಿಗಾಗಿ 11 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಗುರುವಾರ ರಾತ್ರಿ ಬಿಬಿಎಂಪಿ ಆಯುಕ್ತ ಕುಮಾರ ನಾಯಕ್ ಅವರು ಅಧಿಕಾರಿಗಳೊಂದಿಗೆ ರೆಸಿಡೆನ್ಸಿ ರಸ್ತೆ, ಲ್ಯಾವೆಲ್ಲೆ ರಸ್ತೆ, ದೊಮ್ಮಲೂರು, ವಿಕ್ಟೋರಿಯಾ ರಸ್ತೆ ಹಾಗೂ ರಿಚ್ಮಂಡ್ ವೃತ್ತದಲ್ಲಿ ಗುಂಡಿ ಮುಚ್ಚುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. [ಬೆಂಗಳೂರಿನ ರಸ್ತೆ ಅಭಿವೃದ್ಧಿ ಆಪ್ ಸಲಹೆಗಳು]
ಹಗಲು ಸಂಚಾರ ದಟ್ಟಣೆ ಉಂಟಾಗುವ ಕಾರಣ, ರಾತ್ರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ನಗರದ ಹಲವು ಕಡೆ ಗುರುವಾರ ಕಾಮಾಗಾರಿ ಅರಂಭವಾಗಿದ್ದು, ತಡರಾತ್ರಿಯವರೆಗೂ ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. [ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆಗಳು]
ನಗರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣಗೊಂಡು, ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದವು. ಇದರಿಂದ ಸಾರ್ವಜನಿಕರು ಪಾಲಿಕೆಯ ವಿರುದ್ಧ ಕಿಡಿಕಾರುತ್ತಿದ್ದರು. ಮಳೆ ಬಿಡುವು ಕೊಟ್ಟ ನಂತರ ಗುಂಡಿ ಮುಚ್ಚುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ. ಚಿತ್ರಗಳಲ್ಲಿ ನೋಡಿ ಗುಂಡಿ ಮುಚ್ಚುವ ಕಾಮಗಾರಿ..
ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿದ ಬಿಬಿಎಂಪಿ
ಬೆಂಗಳೂರು ನಗರದಲ್ಲಿ ಮಳೆ ಬಿಡುವು ಕೊಟ್ಟಿದ್ದು ಬಿಬಿಎಂಪಿ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಗುರುವಾರ ರಾತ್ರಿ ಚಾಲನೆ ನೀಡಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ.
ಎಲ್ಲೆಲ್ಲಿ ಕಾಮಗಾರಿ ಆರಂಭವಾಗಿದೆ?
ಗುರುವಾರ ರಾತ್ರಿ ಬಿಬಿಎಂಪಿ ಆಯುಕ್ತ ಕುಮಾರ ನಾಯಕ್ ಅವರು ಅಧಿಕಾರಿಗಳೊಂದಿಗೆ ರೆಸಿಡೆನ್ಸಿ ರಸ್ತೆ, ಲ್ಯಾವೆಲ್ಲೆ ರಸ್ತೆ, ದೊಮ್ಮಲೂರು, ವಿಕ್ಟೋರಿಯಾ ರಸ್ತೆ ಹಾಗೂ ರಿಚ್ಮಂಡ್ ವೃತ್ತದಲ್ಲಿ ಗುಂಡಿ ಮುಚ್ಚುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
11 ಕೋಟಿ ಬಿಡುಗಡೆ
ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಾಗಿ 11 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 'ಇನ್ನು ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ಆಯಾಭಾಗದ ಇಂಜಿನಿಯರ್ಗಳು ನೋಡಿಕೊಳ್ಳುತ್ತಾರೆ' ಎಂದು ಬಿಬಿಎಂಪಿ ಆಯುಕ್ತ ಕುಮಾರ ನಾಯಕ್ ಹೇಳಿದ್ದಾರೆ.
417 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ
ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡಲು 417 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಮೂರು ತಿಂಗಳಿನಲ್ಲಿ ಈ ಕಾಮಗಾರಿ ಆರಂಭವಾಗಲಿದ್ದು, ಅದಕ್ಕೂ ಮೊದಲು ಗುಂಡಿಗಳನ್ನು ಮುಚ್ಚಲಾಗುತ್ತದೆ.
ಅಧಿಕಾರಿಗಳಿಂದ ಸಿಟಿ ರೌಂಡ್ಸ್
ಬಿಬಿಎಂಪಿ ಆಯುಕ್ತ ಕುಮಾರ ನಾಯಕ್, ಪ್ರಧಾನ ಎಂಜಿನಿಯರ್ ಎಂ.ಆರ್. ವೆಂಕಟೇಶ್ ಮುಂತಾದ ಅಧಿಕಾರಿಗಳು ಗುರುವಾರ ರಾತ್ರಿ ನಗರದಲ್ಲಿ ಸಂಚಾರ ನಡೆಸಿ, ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.