ಅಮೂಲ್ಯ ಮಾಹಿತಿ, ಗಣೇಶ ವಿಸರ್ಜನೆಗೆ ಹತ್ತಿರದ ಕೆರೆ ಎಲ್ಲಿದೆ?
ಬೆಂಗಳೂರು, ಸೆಪ್ಟೆಂಬರ್, 06: ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಸಕಲ ಮುಂಜಾಗೃತಾ ಕ್ರಮ ತೆಗೆದುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 185 ಮೊಬೈಲ್ ಟ್ಯಾಂಕ್ ಮತ್ತು 35 ಕೆರೆಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದೆ.
ಕೆರೆಗಳು ಮತ್ತು ಸಂಚಾರಿ ಘಟಕಗಳ ಜತೆಗೆ ನೀರಿನ ಟ್ಯಾಂಕರ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂಬು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.[ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಮುಂಜಾನೆಯಿಂದ ರಾತ್ರಿ 10.30 ರವರೆಗೆ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಮುಖ ಕೆರೆಗಳಲ್ಲಿ 15 ದಿನ ಅಂದರೆ ಸೆಪ್ಟೆಂಬರ್ 19 ರವರೆಗೆ ಮೂರ್ತಿ ವಿಸರ್ಜನೆಗೆ ಅವಕಾಶ ಇದೆ. ಪ್ರಮುಖವಾಗಿ ಯಡಿಯೂರು ಕೆರೆ, ಸ್ಯಾಂಕಿ ಕರೆ, ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ...]
ವಿಸರ್ಜನೆ ಕ್ರಮ
ಮೂರ್ತಿ ಮುಳುಗಿಸುವ ಜಾಗಕ್ಕೆ ನಾಗರಿಕರಿಗೆ ಪ್ರವೇಶ ನಿಷೇಧ. ನಿಗದಿಪಡಿಸಿರುವ ದ್ವಾರದಲ್ಲಿ ಬಂದು ಮೂರ್ತಿಯನ್ನು ಸಿಬ್ಬಂದಿ ಕೈಗೆ ನೀಡಬೇಕು.
ಪೂಜೆಗೂ ಅವಕಾಶ
ಕೆರೆಯ ಬಳಿ ನಾಗರಿಕರಿಗೆ ಪೂಜೆಗೂ ಅವಕಾಶ ಮಾಡಿಕೊಡಲಾಗಿದೆ. ಮನೆಯಿಂದ ಮೂರ್ತಿ ತೆಗೆದುಕೊಂಡು ಹೋದವರು ಪೂಜೆ ಮಾಡಿ ವಿಸರ್ಜನೆ ಮಾಡಬಹುದು.
30 ಸಾವಿರ ಮೂರ್ತಿ
ಸೆಪ್ಟೆಂಬರ್ 5 ಒಂದೇ ದಿನದಲ್ಲಿ ಯಡಿಯೂರು ಕೆರೆಯಲ್ಲಿ 30 ಸಾವಿರ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಮಂಗಳವಾರ ಸಹ ನಾಗರಿಕರು ಆಗಮಿಸುತ್ತಿದ್ದಾರೆ.
ನೂಕು ನುಗ್ಗಲು
ಸೆಪ್ಟೆಂಬರ್ ಸೋಮವಾರ ಸಂಜೆ ವೇಳೆ ಮೂರ್ತಿ ವಿಸರ್ಜನೆ ಮಾಡಲು ನೂಕು ನುಗ್ಗಲು ಉಂಟಾಗಿತ್ತು. ಎಷ್ಟೋ ಜನ ಮೂರ್ತಿ ವಿಸರ್ಜನೆ ಅಸಾಧ್ಯ ಎಂದು ವಾಪಸ್ ತೆರಳಿದ ಪ್ರಸಂಗವೂ ಯಡಿಯೂರು ಕೆರೆ ಬಳಿ ನಡೆಯಿತು.
ಯಡಿಯೂರು ಘಟಕ
ಯಡಿಯೂರು ಕೆರೆಗೆ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಲಾಲ್ ಬಾಗ್, ಬಿಟಿಎಂ, ಜೆಪಿ ನಗರದ ಕಡೆಯ ನಾಗರಿಕರು ಮೂರ್ತಿ ವಿಸರ್ಜನೆಗೆ ಆಗಮಿಸುತ್ತಿದ್ದರು.
ಪಿಓಪಿಗೂ ಅವಕಾಶ ಇದೆ
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ವಿಸರ್ಜನೆಗೂ ಈ ವರ್ಷ ಅವಕಾಶ ಮಾಡಿಕೊಡಲಾಗಿದೆ. ವಿಸರ್ಜಿತ ಮೂರ್ತಿಗಳನ್ನು ನಗರದಿಂದ ಹೊರಭಾಗಕ್ಕೆ ಕೊಂಡೊಯ್ಯುತ್ತೇವೆ ಎಂದು ಯಡಿಯೂರು ಕೆರೆ ಬಳಿ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಶೇಖರ್ ಗೌಡ ತಿಳಿಸುತ್ತಾರೆ.