ಬರಗೂರರ 'ನೂರಾರು ಕವಿತೆಗಳನ್ನು ಬದುಕೋಣ' ಏ.29ಕ್ಕೆ ಲೋಕಾರ್ಪಣೆ
ಬರಗೂರರ ಭಾಷಣದಲ್ಲಿದ್ದ ಕೆಲವು ಕಾಳಜಿ ಮತ್ತು ಪರಿಕಲ್ಪನೆಗಳ ಕುರಿತು ಚಿಂತನ ಗೋಷ್ಠಿಯನ್ನು ಹಮ್ಮಿಕೊಳ್ಳುವ ಮೂಲಕ ವಿನೂತನವಾಗಿ ನೂರಾರು ಕವಿತೆಗಳನ್ನು ಬದುಕೋಣ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ.
ಬೆಂಗಳೂರು, ಏಪ್ರಿಲ್ 28: ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು 82 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷ ಭಾಷಣದ ಪುಸ್ತಕ ರೂಪವಾದ 'ನೂರಾರು ಕವಿತೆಗಳನ್ನು ಬದುಕೋಣ' ಕೃತಿ ಏಪ್ರಿಲ್ 29, ಶನಿವಾರದಂದು ಲೋಕಾರ್ಪಣೆಗೊಳ್ಳಲಿದೆ.
ಕೃತಿ ಬಿಡುಗಡೆ ಕಾರ್ಯಕ್ರಮವು ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬೆಳಗ್ಗೆ 10:30 ಕ್ಕೆ ನಡೆಯಲಿದೆ.
ಪ್ರಗತಿಪರ ಚಿಂತನೆಯ ಸಮಾನ ಮನಸ್ಕರು ಆರಂಭಿಸಿದ ಜನ ಪ್ರಕಾಶನವು ಈ ಕೃತಿಯನ್ನು ಹೊರತರುತ್ತಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೊಬ್ಬರ ಭಾಷಣವು ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ಸಮಕಾಲೀನ ಇತಿಹಾಸದಲ್ಲೇ ದಾಖಲೆ ಎನ್ನಿಸಿದೆ. [ಅರಮನೆ ಮೈದಾನದಲ್ಲಿ ಏಪ್ರಿಲ್ 27 ರಿಂದ ಸಿರಿಧಾನ್ಯದ್ದೇ ಜಾತ್ರೆ!]
ಕಳೆದ ವರ್ಷ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ, ಪಂಪ ಪ್ರಶಸ್ತಿ ವಿಜೇತ ಬರಗೂರು ರಾಮಚಂದ್ರಪ್ಪನವರು ಸಮ್ಮೇಳನದಲ್ಲಿ ಮಾಡಿದ್ದ ಭಾಷಣ ಎಲ್ಲೆಡೆ ಚರ್ಚೆಯನ್ನು ಹುಟ್ಟುಹಾಕಿತ್ತು.
ಇದೀಗ ಬರಗೂರರ ಭಾಷಣದಲ್ಲಿದ್ದ ಕೆಲವು ಕಾಳಜಿ ಮತ್ತು ಪರಿಕಲ್ಪನೆಗಳ ಕುರಿತು ಚಿಂತನ ಗೋಷ್ಠಿಯನ್ನು ಹಮ್ಮಿಕೊಳ್ಳುವ ಮೂಲಕ ವಿನೂತನವಾಗಿ ಈ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ.
ಕೃತಿ ಬಿಡುಗಡೆ ಮತ್ತು ಚಿಂತನ ಗೋಷ್ಠಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ಡಾ.ಕೆ.ವಿ.ನಾರಾಯಣ ಅವರು ವಹಿಸಲಿದ್ದು, ಚಿಂತನ ಗೋಷ್ಠಿಯಲ್ಲಿ, ಡಾ.ಪ್ರಶಾಂತ್ ನಾಯಕ್, ವಸಂತ್ ಶೆಟ್ಟಿ, ಕೆ.ಪ್ರಕಾಶ್ ಮುಂತಾದವರು ಭಾಗವಹಿಸಲಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಗೌರವ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದೆ.
ಲೆಬನಾನ್ ತತ್ವಜ್ಞಾನಿ ಖಲೀಲ್ ಗಿಬ್ರಾನ್ ಅವರ "ನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ, ಆದರೆ ನೂರಾರು ಕವಿತೆಗಳನ್ನು ಬದುಕಿದಳು" ಎಂಬ ವಾಕ್ಯದಿಂದ ಸ್ಫೂರ್ತಿ ಪಡೆದು ಪ್ರಸ್ತುತ 'ನೂರಾರು ಕವಿತೆಗಳನ್ನು ಬದುಕೋಣ' ಕೃತಿಗೆ ಶೀರ್ಷಿಕೆ ನೀಡಲಾಗಿದೆ.
ಪ್ರಗತಿಪರ ಚಿಂತಕ ಬರಗೂರು ರಾಮಚಂದ್ರಪ್ಪ
ತುಮಕೂರು ಜಿಲ್ಲೆಯ ಬರಗೂರಿನಲ್ಲಿ ಜನಿಸಿದ ಬರಗೂರು ರಾಮಚಂದ್ರಪ್ಪನವರು ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡವರು. ಕೇವಲ ಸಾಹಿತಿ ಮಾತ್ರವಲ್ಲದೆ, ಚಿತ್ರ ನಿರ್ದೇಶಕರಾಗಿಯೂ ಅವರು ಪರಿಚಿತರು. 1978 ರಲ್ಲಿ ಬರಗೂರರು ನಿರ್ದೇಶಿಸಿದ 'ಒಂದು ಊರಿನ ಕತೆ' ಚಿತ್ರ ರಾಜ್ಯ ಪ್ರಶಸ್ತಿಯನ್ನೂ ಗೆದ್ದಿತ್ತು.
ಸೂತ್ರ, ಉಕ್ಕಿನ ಕೋಟೆ, ಬೆಂಕಿ, ಸೂರ್ಯ, ಸೀಳು ನೆಲ, ಸ್ವಪ್ನ ಮಂಟಪ, ಗಾಜಿನ ಮನೆ ಸೇರಿದಂತೆ ಬರಗೂರರ ಹಲವು ಕಾದಂಬರಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿವೆ. ಕವಿ, ನಾಟಕಕಾರರಾಗಿಯೂ ಹೆಸರುಗಳಿಸಿದ ಅವರಿಗೆ 2011 ರಲ್ಲಿ ಕರ್ನಾಟಕ ಸರ್ಕಾರವು ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ.