ಬೆಂಗಳೂರು ಹೂವಿನ ಅರಮನೆಯಲ್ಲಿ ಹಂಪಿ ಕಲ್ಲಿನ ರಥ
ಬೆಂಗಳೂರು, ಅ. 11: ಜಗತ್ ಪ್ರಸಿದ್ಧ ಹಂಪಿ ಕಲ್ಲಿನ ರಥ ಬೆಂಗಳೂರಿಗೆ ಆಗಮಿಸಿದೆ. ನಾಗರಿಕರು ರಥದ ಸೌಂದರ್ಯ ನೋಡಿ ಆನಂದಿಸುತ್ತಿದ್ದಾರೆ. ಯಾಕೆ ಆಶ್ಚರ್ಯ ಪಡುತ್ತಿದ್ದೀರಾ? ತೋಟಗಾರಿಕಾ ಇಲಾಖೆ ಇಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟಿದೆ.
ಹೌದು.. ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಕಲ್ಲಿನ ರಥ ಸ್ಥಾಪನೆಯಾಗಿದೆ. ಜತೆಗೆ ಹಂಪಿ ಸ್ಮಾರಕವೂ ತಲೆ ಎತ್ತಿದೆ. ಅಲ್ಲದೇ ವಿವಿಧ ಬಗೆ ಸಸ್ಯಗಳು, ಆರ್ಕೀಡ್ಗಳು, ಹೂವಿನ ಗಿಡಗಳು ಕಣ್ಮನ ಸೆಳೆಯುತ್ತಿವೆ.
ತೋಟಗಾರಿಕಾ ಇಲಾಖೆ ನರ್ಸರಿಮೆನ್ಸ್ ಕೋ-ಅಪರೇಟಿವ್ ಸೊಸೈಟಿ ತನ್ನ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ 'ಸಸ್ಯೋತ್ಸವ' ಅಕ್ಟೋಬರ್ 13ರ ವರೆಗೆ ನಡೆಯಲಿದೆ. ಮಳೆಯ ಕಾಮರ್ಮೋಡ, ಹುಡ್ಹುಡ್ ಸೈಕ್ಲೋನ್ ಭೀತಿಯ ನಡುವೆಯೂ ನಾಗರಿಕರು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಿತ್ತಿದ್ದಾರೆ. ಕೇವಲ ಬೆಂಗಳೂರು ಅಲ್ಲದೇ ಪಕ್ಕದ ರಾಮನಗರ, ಮಂಡ್ಯ, ಮೈಸೂರು ಮತ್ತು ದೊಡ್ಡಬಳ್ಳಾಪುರದಿಂದಲೂ ಸಸ್ಯೋತ್ಸವ' ಕಣ್ತುಂಬಿಕೊಳ್ಳಲು ಜನರು ಬರುತ್ತಿದ್ದಾರೆ.[ನೋಡಿ ಮೈಸೂರು ಅರಮನೆ]
ಪ್ರದರ್ಶನದಲ್ಲಿ 120 ಮಾದರಿಯ ಒಟ್ಟು 10 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನಿಡಲಾಗಿದೆ. ಈ ಹೂ ಗಿಡಗಳ ನಡುವೆ ಹಂಪಿ ಪರಂಪರೆ ತಿಳಿಸುವ ಸ್ಮಾರಕ ತಲೆ ಎತ್ತಿದೆ. ಪ್ರದರ್ಶನದ ಜೊತೆಗೆ ಲಾಲ್ಬಾಗ್ ಆವರಣದಲ್ಲಿ ಹೂ ಗಿಡಗಳ ಮಾರಾಟ ಏರ್ಪಡಿಸಿದ್ದು 10 ರೂ. ಬೆಲೆಯಿಂದ 5 ಸಾವಿರ ರೂ. ಬೆಲೆ ಬಾಳುವ ಅಪರೂಪದ ಸಸಿಗಳು ಮಾರಾಟಕ್ಕೆ ಲಭ್ಯವಿವೆ. ವಿಶೇಷ ಪ್ರದರ್ಶನ ಎಂದು ಯಾವುದೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ. ಮಾಮೂಲಿ 10 ರೂಪಾಯಿ ಟಿಕೆಟ್ ತೆಗೆದುಕೊಂಡರೆ ಪ್ರದರ್ಶನ ವೀಕ್ಷಣೆ ಸಾಧ್ಯ.
ಅಕ್ಟೋಬರ್ನಲ್ಲೇಕೆ ಪ್ರದರ್ಶನ?
ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ನಡೆಯುತ್ತೆ. ಇದೇನು ಅಕ್ಟೋಬರ್ ತಿಂಗಳಲ್ಲಿ ಎಂದು ಗೊಂದಲಕ್ಕೆ ಬೀಳುವ ಅಗತ್ಯವಿಲ್ಲ. ತೋಟಗಾರಿಕಾ ಇಲಾಖೆಯ ನರ್ಸರಿಮೆನ್ಸ್ ಕೋ-ಅಪರೇಟಿವ್ ಸೊಸೈಟಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಪ್ರದರ್ಶನ.
ಎಷ್ಟು ದಿನ ನಡೆಯುತ್ತೆ?
ನಿಗದಿಯಂತೆ ಪ್ರದರ್ಶನ ಅಕ್ಟೋಬರ್ 13ರ ವರೆಗೆ ನಡೆಯಲಿದೆ. ಜನರ ಒತ್ತಾಯ ಕಂಡುಬಂದರೆ ಮತ್ತೊದು ದಿನ ಮುಂದುವರಿದರೆ ಆಶ್ಚರ್ಯವಿಲ್ಲ.
ಟಿಕೆಟ್ ದರ ಏನು?
ವಿಶೇಷ ಪ್ರದರ್ಶನ ಎಂದು ಟಿಕೆಟ್ ದರವನ್ನೇನೂ ಹೆಚ್ಚು ಮಾಡಲಾಗಿಲ್ಲ. ಮಾಮೂಲಿ 10 ರೂ. ಟಿಕೆಟ್ ಪಡೆದುಕೊಂಡರೆ ಹಂಪಿ ನೋಡಿ ಹಿಂದಿರುಗಬಹುದು.
ಸುಂದರ ಹಂಪಿ ಸ್ಮಾರಕ
40 ಅಡಿ ಉದ್ದ, 30 ಅಡಿ ಅಗಲ ಹಾಗೂ 12 ಅಡಿ ಎತ್ತರದಲ್ಲಿ ಹಂಪಿನಗರದ ವಿರೂಪಾಕ್ಷ ಮತ್ತು ವಿಜಯವಿಠಲ ದೇವಾಲಯಗಳ ಶಿಲಾರಚನೆ ಬಿಂಬಿಸುವ ಮಂಟಪದ ಕಲಾಕೃತಿ ಆಕರ್ಷಕವಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಕಲಾವಿದ ರೆಜಿನಾಥ್ ತಂಡ 1 ತಿಂಗಳ ಕಾಲ ಶ್ರಮವಹಿಸಿ ಕಲಾಕೃತಿ ರಚಿಸಿದ್ದು ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಲಾಗಿದೆ.
ಪ್ರದರ್ಶನ ಚೆನ್ನಾಗಿದೆ
ಮನೆಯಿಂದ ಹೊರಡುವಾಗ ಮಳೆಗೆ ಹೆದರಿ ಹಜ್ಜೆ ಹಿಂದೆ ಹಾಕಿದ್ದೆ. ಪ್ರತಿ ಬಾರಿಯೂ ಲಾಲ್ ಬಾಗ್ ನಲ್ಲಿ ಯಾವ ಪ್ರದರ್ಶನವಿದ್ದರೂ ತಪ್ಪಿಸಿಕೊಳ್ಳಲ್ಲ. ಅದರಂತೆ ಈ ಬಾರಿಯೂ ಬಂದಿದ್ದೇನೆ. ಪ್ರದರ್ಶನ ತೃಪ್ತಿ ನೀಡದೆ ಎಂದು ಸಿನಿಮಾಟೋಗ್ರಾಫರ್ ಕೆ.ಎಸ್ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ
ದೊಡ್ಡಬಳ್ಳಾಪುರಿದಂದ ಬಂದಿದ್ದೇವೆ
ಬೆಳಿಗ್ಗೆ ದಿನಪತ್ರಿಕೆ. ಟಿವಿಗಳಲ್ಲಿ ಮಾಹಿತಿ ಪಡೆದು ದೊಡ್ಡಬಳ್ಳಾಪುರದಿಂದ ಆಗಮಿಸಿದ್ದೇವೆ. ಹಂಪಿ ನೋಡದಿದ್ದವರಿಗೆ ಇದೊಂದು ವಿನೂತನ ಅನುಭವ. ಹಂಪಿ ನೋಡೊದ್ದವರೂ ಮತ್ತೊಮ್ಮೆ ಅದರ ಕಲ್ಪನೆ ಮಾಡಿಕೊಳ್ಳಬಹುದು ಎನ್ನುತ್ತಾರೆ ದೊಡ್ಡಬಳ್ಳಾಪುರದ ಮಧು ಮತ್ತು ಮಮತಾ.
ಜನ ಸಾಗರ
ಶನಿವಾರ ಮಧ್ಯಾಹ್ನದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಭಾನುವಾರ ಮಳೆ ಬಾರದಿದ್ದರೇ ವಾರದ ಕೊನೆಯ ರೌಂಡ್ ಹಾಕಲು ಲಾಲ್ ಬಾಗ್ಗೆ ಬಂದರೆ ನಷ್ಟವಿಲ್ಲ.