ರುದ್ರೇಶ್ ಕೊಲೆ: ಅರ್ ಎಸ್ ಎಸ್ ನಿಂದ ಶಿವಾಜಿನಗರ ಬಂದ್
ಬೆಂಗಳೂರು, ಅಕ್ಟೋಬರ್ 17: ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರ್ ಎಸ್ ಎಸ್ ಸೋಮವಾರ ಬಂದ್ ಗೆ ಕರೆ ನೀಡಿದೆ. ಕಾಮರಾಜ್ ರಸ್ತೆಯಲ್ಲಿ ಭಾನುವಾರ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಆರ್ ಎಸ್ ಎಸ್ ಹಾಗೂ ಬಿಜೆಪಿ ಮುಖಂಡ ರುದ್ರೇಶ್ ಅವರನ್ನು ಕೊಲೆ ಮಾಡಿದ್ದರು. ಈ ಘಟನೆ ಖಂಡಿಸಿ, ಬಂದ್ ಗೆ ಕರೆ ನೀಡಲಾಗಿದೆ.
ಶಿವಾಜಿನಗರ ವಿಧಾನಸಭೆ ವ್ಯಾಪ್ತಿಯಲ್ಲಿ ಸೋಮವಾರ ಸಂಪೂರ್ಣ ಬಂದ್ ಗೆ ಆರ್ ಎಸ್ ಎಸ್ ಕರೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ ಅಡಿ ಶಿವಾಜಿನಗರ, ಫ್ರೇಜರ್ ಟೌನ್, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]
ಆರ್ ಎಸ್ ಎಸ್ ನ ಶಿವಾಜಿನಗರ ಮಂಡಲದ ಅಧ್ಯಕ್ಷರಾಗಿದ್ದ ರುದ್ರೇಶ್, ಬಿಜೆಪಿಯ ಶಿವಾಜಿನಗರ ಘಟಕದ ಕಾರ್ಯದರ್ಶಿಯೂ ಆಗಿದ್ದರು. ಆಬಿಎಎನ್ ಎಮ್ ಎಸ್ ಮೈದಾನದಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದರು. ಕಾಮರಾಜ್ ರಸ್ತೆಯಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿ, ಅವರ ಮೂವರು ಸ್ನೇಹಿತರ ಜತೆಗೆ ಮಾತನಾಡುತ್ತಿದ್ದರು. ಆ ವೇಳೆ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ರುದ್ರೇಶ್ ಮೇಲೆ ದಾಳಿ ಮಾಡಿದ್ದರು.[ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್]
ರುದ್ರೇಶ್ ರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು. ಕೊಲೆ ಸುದ್ದಿ ಹರಡುತ್ತಿದ್ದಂತೆಯೇ ಆರ್ ಎಸ್ ಎಸ್ ಸದಸ್ಯರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಈ ಜನನಿಬಿಡ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.