ಬಾಳೆ ಬೆಲೆ ಕುಸಿತ, ರಸ್ತೆಗೆ ಬಿಸಾಡಿದ ಮಾಗಡಿ ರೈತರು
ಬೆಂಗಳೂರು, ಡಿಸೆಂಬರ್, 29: ರೈತರು ಟೋಮೆಟೋ, ಈರುಳ್ಳಿ ಬೆಳೆಯನ್ನು ಬೆಲೆ ಕುಸಿತ ಹಿನ್ನೆಲೆಯಲ್ಲಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಬಾಳೆ ಹಣ್ಣಿನ ಬೆಲೆ ಕುಸಿದ ಕಾರಣ ಬೆಳೆಗಾರರು ಮಾಗಡಿಯಲ್ಲಿ ಬಾಳೆಗೊನೆಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಒಂದು ಕೆಜಿ ಬಾಳೆ ಬೆಲೆ 3 ರೂ.ಗೆ ಆಗಿದೆ. ಇದರಿಂದ ರೈತರು ತೋಟದಿಂದ ಮಾರುಕಟ್ಟೆ ತಂದ ವಾಹನದ ಬಾಡಿಗೆಯೂ ಬಾರದಂತಾಗಿದೆ. ಬಾಳೆ ಹಣ್ಣಿನ ಬೆಲೆ ಕುಸಿತವಾಗಿರುವುದರಿಂದ ಬೇಡಿಕೆ ಇಲ್ಲದಂತಾಗಿದೆ ಎಂದು ಬಾಳೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.[ಅಕ್ಕಿ ಮೇಲೆ ಆಸೆ ಇದ್ದರೆ ಕಡಿಮೆ ಮಾಡಿಕೊಂಡು ಬನ್ನಿ!]
ಲಕ್ಷಾಂತರ ರೂ. ಬಂಡವಾಳ ಸುರಿದು ಬೆಳೆಯುತ್ತಿರುವ ಬೆಳೆ ರೈತರ ಕೈಹಿಡಿದಂತೆ ಕಾಣುತ್ತಿಲ್ಲ. ಇದುವರೆಗೆ ಯಾವುದೇ ರೀತಿಯ ತೊಂದರೆ ಅನುಭವಿಸದೆ ಜೀವನ ಸಾಗಿಸುತ್ತಿದ್ದ ರೈತರಿಗೆ ಶೋಚನೀಯ ಸ್ಥಿತಿ ಎದುರಾಗಿದ್ದು, ಕೆಲವು ರೈತರು ಬಾಳೆ ತೋಟ ನಾಶ ಮಾಡಿದರೆ, ಮತ್ತೆ ಕೆಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.[ಕೆಎಂಎಫ್: ಹಾಲಿನ ಖರೀದಿ ದರ 1 ರಿಂದ 1.50 ರೂ ಇಳಿಕೆ]
ಮಾಗಡಿಯಲ್ಲಿ ರಸ್ತೆಯಲ್ಲೇ ಬಾಳೆಗೊನೆ ಸುರಿದ ರೈತರು ಸಾರ್ವಜನಿಕರಿಗೆ ಉಚಿತವಾಗಿ ಬಾಳೆಗೊನೆಯನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಬಾಳೆ ಬೆಳೆಗಾರರಿಗೆ ಬಂದಿರುವ ಸಂಕಷ್ಟಕ್ಕೆ ಸರ್ಕಾರಕ್ಕೆ ಸ್ಪಂದಿಸಬೇಕೆಂಬುದು ರೈತರ ಮನವಿಯಾಗಿದೆ.