ಬಿಎಸ್ ವೈ ಬೆಂಬಲಿಗರಿಂದ ಈಶ್ವರಪ್ಪ ವಿರುದ್ಧ ಹೈಕಮಾಂಡಿಗೆ ಪತ್ರ
ಬೆಂಗಳೂರು, ಜನವರಿ 25: ರಾಯಣ್ಣ ಬ್ರಿಗೇಡ್ ಸಂಘಟನೆಯಿಂದ ಬಿಜೆಪಿಯಲ್ಲಿ ಬಾರಿ ವೈಮನಸ್ಯವನ್ನು ಉಂಟುಮಾಡಿರುವ ಹಿರಿಯ ಮುಖಂಡ ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಣದ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದ ರಾಜ್ಯದ ಉಸ್ತುವಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮುಖಾಂತರ ಅಧ್ಯಕ್ಷರಿಗೆ ತಲುಪಿಸಲು ಪತ್ರವನ್ನು ನೀಡಲಾಗಿದೆ ಎನ್ನಲಾಗಿದ್ದು, ಇದರಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ರಮೇಶ್ ಜಿಗಜಿಣಗಿ ಸಂಸದ ಪ್ರಹಾದ್ ಜೋಶಿ ಹೊರತು ಪಡಿಸಿ ಇನ್ನೆಲ್ಲಾ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.[ಈಶ್ವರಪ್ಪಗೆ ಭಾರೀ ಹಿನ್ನಡೆ: ರಾಯಣ್ಣ ಬ್ರಿಗೇಡ್ ಪಥಸಂಚಲನ ಬಂದ್?]
ಕಲಬುರಗಿ ಕಾರ್ಯಕಾರಣಿಯಲ್ಲಿ ಈಶ್ವರಪ್ಪ- ಯಡಿಯೂರಪ್ಪ ನಡುವೆ ನಡೆದ ಮುಸುಕಿನ ಗುದ್ದಾಟದ ಬಗ್ಗೆ ಪತ್ರದಲ್ಲಿ ಬರೆಯಲಾಗಿದ್ದು, ಈಶ್ವರಪ್ಪನವರ ಪಕ್ಷ ವಿರೋಧಿ ಚುಟುವಟಿಕೆಯಿಂದ ಬಿಜೆಪಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಈಶ್ವರಪ್ಪ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಕಾರ್ಯಕರ್ತರಲ್ಲಿ ಇರುವ ಭಾಂಧವ್ಯವನ್ನು ನಾಶಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.[ರಾಯಣ್ಣ ಬ್ರಿಗೇಡ್: ಈಶ್ವರಪ್ಪ ತಮ್ಮ ಸ್ಥಾನ ಕಳೆದುಕೊಳ್ತಾರಾ?]
ಪತ್ರದೊಂದಿಗೆ ಈಶ್ವರಪ್ಪನವರು ಮಾಧ್ಯಮದೊಂದಿಗೆ 'ಬಿಜೆಪಿ ಅಧಿಕಾರಕ್ಕೆ ತರುವುದು ರಾಯಣ್ಣ ಬ್ರಿಗೇಡ್ ಉದ್ದೇಶವಲ್ಲ' ಎಂದು ಹೇಳಿರುವ ಪತ್ರಿಕಾ ವರದಿಯ ತುಣಕನ್ನು ಸೇರಿಸಲಾಗಿದೆ. ಅಲ್ಲದೆ ಅವರ ವಿರುದ್ಧ ವಿಳಂಬ ಮಾಡದೇ ಕ್ರಮ ಜರುಗಿಸಬೇಕು ಎಂದಿದ್ದಾರೆ. ಅಲ್ಲದೆ ಇನ್ನು ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದ್ದು ಬಿಎಸ್ ವೈ-ಈಶ್ವರಪ್ಪನವರು ಪರಸ್ಪರ ವೈಮನಸ್ಯ ಮುಂದುವರೆದರೆ ಪಕ್ಷ ರಾಜ್ಯದಲ್ಲಿ ಅಧಿಕಾರ ವಂಚಿತವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.