ಪುಟ್ಟೇನಹಳ್ಳಿ ಕೆರೆಯಂಗಳದಲ್ಲಿ ಸಾರ್ಥಕ ಕೆಲಸ ಮಾಡಿದ ಎಂಪ್ರಿ
ಬೆಂಗಳೂರು, ಮಾರ್ಚ್ 14: ಬೆಂಗಳೂರಿನ ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಯ ವಾತಾವರಣ ಮಂಗಳವಾರ ಮಾಮೂಲಿ ದಿನಗಳಂತೆ ಇರಲಿಲ್ಲ. ಯುವಕ-ಯುವತಿಯರು ಕೈಗವಸುಗಳನ್ನು ಹಾಕಿಕೊಂಡು ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡರು. ಹಲವರು ಕೆರೆಯ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿದರು.
ಪ್ಲಾಸ್ಟಿಕ್ ಬಳಕೆ ವಿರುದ್ಧದ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳು, ಬ್ಯಾನರ್ ಗಳು ಕಂಡುಬಂದವು. ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಎನ್ವಾರ್ನೈಮೆಂಟಲ್ ಮ್ಯಾನೇಜ್ ಮೆಂಟ್ ಅಂಡ್ ಪಾಲಿಸಿ ರಿಸರ್ಚ್ ಇನ್ ಸ್ಟಿಟ್ಯೂಟ್ (ಎಂಪ್ರಿ) ಅಯೋಜಿಸಿದ್ದ ಕಾರ್ಯಕ್ರಮವದು. ಅದಕ್ಕೆ ರಾಜ್ಯ ಸರಕಾರದ ಸಹಯೋಗವಿತ್ತು.
ಬೆಳಗ್ಗೆ 8.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಜೆಪಿ ನಗರದ ವಿನಾಯಕನಗರ ವೃತ್ತದಿಂದ ಪುಟ್ಟೇನಹಳ್ಳಿ ಕೆರೆವರೆಗೆ ಜಾಥಾ ನಡೆಸಲಾಯಿತು. ಮಳೆಯ ಮಧ್ಯೆಯೂ ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು. ಆ ನಂತರ ಎಂಪ್ರಿಯ ಕೆ.ಎಚ್.ವಿನಯ ಕುಮಾರ್ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿ, ಇದೊಂದು ಸರಕಾರಿ ಕಾರ್ಯಕ್ರಮ. ನಮ್ಮ ಸಂಸ್ಥೆಯ ಜತೆಗೆ ಹಸಿರು ದಳ, ಸಮರ್ಥನಂ ಹಾಗೂ ಸ್ಥಳೀಯ ನಗರಿಕ ಹಿತರಕ್ಷಣಾ ಸಮಿತಿ ಕೂಡ ಕೈಜೋಡಿಸಿವೆ ಎಂದರು.
ನೂರೈವತ್ತಕ್ಕೂ ಹೆಚ್ಚು ಮಂದಿ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ಲಾಸ್ಟಿಕ್ ನಿಷೇಧದ ಅಗತ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಷೇಧಕ್ಕೆ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಬೇಕು. ಪ್ಲಾಸ್ಟಿಕ್ ಬಳಕೆಗೆ 500ರಿಂದ 5 ಲಕ್ಷ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಆದರೆ ಇದು ನಮ್ಮೆಲ್ಲರಲ್ಲೂ ಮೂಡಬೇಕಾದ ಎಚ್ಚರ ಎಂದು ಅವರು ಹೇಳಿದರು.
ನಮ್ಮ ಹಿಂದಿನ ತಲೆಮಾರು ಸುಂದರ ಬೆಂಗಳೂರನ್ನು ನಮಗಾಗಿ ಬಿಟ್ಟಿದ್ದಾರೆ. ನಮ್ಮ ಮುಂದಿನವರೆಗೆ ನಾವು ಹೇಗೆ ಬಿಡ್ತೀವಿ ಅನ್ನೋದು ಬಹಳ ಮುಖ್ಯ. ಪ್ಲಾಸ್ಟಿಕ್ ಬಳಕೆ ಹೀಗೇ ಮುಮ್ದುವರಿದರೆ ಅಂತರ್ಜಲ ಮಟ್ಟ ಕುಸಿಯುತ್ತದೆ. ಅದರ ಜತೆಗೆ ಗುಣಮಟ್ಟವೂ ಹಾಳಾಗುತ್ತೆ. ಅವುಗಳನ್ನು ಸುಡುವುದರಿಂದ ಕ್ಯಾನ್ಸರ್, ಆಸ್ತಮಾದಂಥ ರೋಗಗಳಿಗೆ ಕಾರಣವಾಗುತ್ತದೆ. ಈ ಎಲ್ಲದರ ಜತೆಗೆ ನಮ್ಮದೇ ಪರಿಸರ ಸೌಂದರ್ಯ ಹಾಳಾಗುತ್ತದೆ ಎಂದರು.
ಪುಟ್ಟೇನಹಳ್ಳಿ ನೈಬರ್ ಹುಡ್ ಲೇಕ್ ಇಂಪ್ರೂವ್ ಮೆಂಟ್ ಟ್ರಸ್ಟ್ ನ ಟ್ರಸ್ಟಿ ಉಷಾ ರಾಜಗೋಪಾಲನ್, ಮ್ಯಾನೇಜರ್ ಸುಶೀಲಾ ಸೇರಿದಂತೆ ಹಲವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.