ಮೈಸೂರು ರಸ್ತೆ ಅಡ್ಯಾರ್ ಆನಂದ ಭವನ ಮೇಲೆ ದಾಳಿ
ಬೆಂಗಳೂರು, ಸೆಪ್ಟೆಂಬರ್ 12: ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ನಗರದಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ. ನಗರದ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ. ಕೆಲವು ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಿ, ಮಕ್ಕಳನ್ನು ಮನೆಗೆ ಕರೆದೊಯ್ಯುವಂತೆ ಪೋಷಕರಿಗೆ ಸೂಚಿಸಲಾಗಿದೆ.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ದಿಢೀರ್ ನಿರ್ಧಾರದಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮೆಟ್ರೋ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಉದ್ರಿಕ್ತರು ಮೈಸೂರು ರಸ್ತೆಯಲ್ಲಿರುವ ಅಡ್ಯಾರ್ ಆನಂದ ಭವನ್ ಹೋಟೆಲ್ ನ ಗಾಜನ್ನು ಪುಡಿಪುಡಿ ಮಾಡಿದ್ದಾರೆ.[ಬೆಂಗಳೂರಿನೆಲ್ಲೆಡೆ ಭುಗಿಲೆದ್ದ ಆಕ್ರೋಶ, ಶಾಲೆಗಳಿಗೆ ರಜಾ]
ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯಲ್ಲಿ ಬಿಗುವಿನ ವಾತಾವರಣ ಇದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪೊಲೀಸರು ಲಾಟಿ ಚಾರ್ಜ್ ನಡೆಸಿದ್ದಾರೆ. ಉದ್ರಿಕ್ತರ ಗುಂಪು ಚದುರಿಸುವುದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತಮಿಳುನಾಡಿನ ನೋಂದಣಿಯಿದ್ದ ಲಾರಿಗೆ ಮೈಸೂರು ರಸ್ತೆಯಲ್ಲಿ ಬೆಂಕಿ ಹೊತ್ತಿಸಲಾಗಿದೆ.[ಶಾಂತಿ ಕಾಪಾಡುವಂತೆ ಕರೆ ನೀಡಿದ ಸಿದ್ದರಾಮಯ್ಯ]
ತಮಿಳುನಾಡು ನೋಂದಣಿಯ ಎರಡಕ್ಕೂ ಹೆಚ್ಚು ಲಾರಿಗಳಿಗೆ ಬೆಂಕಿ ಹೊತ್ತಿಸಿರುವ ಬಗ್ಗೆ ಸುದ್ದಿ ಹರಡುತ್ತಿದ್ದು, ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರನ್ನು ಹೊರಗೆ ಕಳುಹಿಸಿ, ಬೀಗ ಹಾಕಲಾಗಿದೆ. ಜತೆಗೆ ಪೊಲೀಸ್ ಕಾವಲನ್ನು ಬಿಗಿಗೊಳಿಸಲಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತರಿಂದ ಅಲ್ಲಲ್ಲಿ ಕಲ್ಲುತೂರಾಟ ನಡೆದಿದೆ.