ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆ, ಬಿರುಗಾಳಿ
ಕಳೆದ ಕೆಲದಿನಗಳಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಮಳೆ ಕಡೆಗೂ ಸುರಿಯುವ ಮನಸ್ಸು ಮಾಡಿದೆ. ಮೂರ್ನಾಲ್ಕು ದಿನಗಳಿಂದ ಸಂಜೆ ಮಳೆಯಾಗುವ ಸೂಚನೆಗಳು ಇರುತ್ತಿದ್ದರೂ ನಾಲ್ಕಾರು ಹನಿ ಬಿದ್ದಂತೆ ಮಾಡಿ ಮಾಯವಾಗಿಬಿಡುತ್ತಿತ್ತು.
ಬೆಂಗಳೂರು, ಏಪ್ರಿಲ್ 20 : ಅಂತೂ ಇಂತೂ ಏಪ್ರಿಲ್ ಬೇಸಿಗೆ ಮಳೆಗೆ ಬೆಂಗಳೂರು ಛತ್ರಿ ಹಿಡಿದಿದೆ. ಬೆಂಗಳೂರಿನಲ್ಲಿ ಗುರುವಾರ ಸಂಜೆ ಎಲ್ಲೆಲ್ಲೂ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾದ ವರದಿಗಳು ಬರುತ್ತಿವೆ.
ಸ್ಕೈಮೆಟ್ ವೆದರ್ ಪ್ರಕಾರ, ಬೆಂಗಳೂರು ಮಾತ್ರವಲ್ಲ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಡಿಕೇರಿ, ರಾಮನಗರ, ಹಾಸನ, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಬಿರುಗಾಳಿಯ ಜೊತೆಗೆ ಮಳೆ ಸುರಿಯಲಿದೆ.
ಕಳೆದ ಕೆಲದಿನಗಳಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಮಳೆ ಕಡೆಗೂ ಸುರಿಯುವ ಮನಸ್ಸು ಮಾಡಿದೆ. ಮೂರ್ನಾಲ್ಕು ದಿನಗಳಿಂದ ಸಂಜೆ ಮಳೆಯಾಗುವ ಸೂಚನೆಗಳು ಇರುತ್ತಿದ್ದರೂ ನಾಲ್ಕಾರು ಹನಿ ಬಿದ್ದಂತೆ ಮಾಡಿ ಮಾಯವಾಗಿಬಿಡುತ್ತಿತ್ತು.
ಇಂದಿರಾನಗರ, ಕೋರಮಂಗಲ ಪ್ರದೇಶದ ಕೆಲವೆಡೆಗಳಲ್ಲಿ ರಸ್ತೆ ತುಂಬಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ನಾಗರಬಾವಿಯಿಂದ ಸುಮ್ಮನಹಳ್ಳಿಗೆ ಹೋಗುವ ರಸ್ತೆಯಲ್ಲಿ ಕೂಡ ಸಂಚಾರ ದಟ್ಟಣೆಯುಂಟಾಗಿದೆ. ಚನ್ನಸಂದ್ರದಲ್ಲಿ ಮರ ಬಿದ್ದು ಕೆಲ ಆಟೋಗಳು ಜಖಂ ಆಗಿರುವ ವರದಿ ಬಂದಿದೆ.
ಅರಬ್ಬಿ ಸಮುದ್ರದಿಂದ ತಂಗಾಳಿ ಬೀಸುತ್ತಿರುವುದರಿಂದ ಕರಾವಳಿಯ ಭಾಗದಲ್ಲಿ ಮತ್ತು ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ ಎಂದು ಸ್ಕೈಮೆಟ್ ವೆದರ್ ಮುಖ್ಯಸ್ಥ ಮಹೇಶ್ ಪಲವಟ್ ಅವರು ಹೇಳಿದ್ದಾರೆ.
ಹಾಸನ ಜಿಲ್ಲೆಯ ಕೊಣ್ಣನೂರು ಮತ್ತು ಚಾಮರಾಜನಗರ ದಲ್ಲಿ 1 ಸೆಂ.ಮೀ. ಮಳೆಯಾಗಿದೆ. ಇಷ್ಟೆಲ್ಲ ಮಳೆ ಮಾತು ಆಡುತ್ತಿರುವಾಗ ಕಲಬುರಗಿಯವರಿಗೆ ಸಂಕಟವಾಗದೆ ಇರಲಾರದು. ಕಲಬುರಗಿ ನಿನ್ನೆಗಿಂತ ತಾಪಮಾನವನ್ನು ಹೆಚ್ಚಿಸಿಕೊಂಡಿದ್ದು, 43.7 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು, ನಗರಾದ್ಯಂತ ಮಳೆ ಬರುವ ವಾತಾವರಣ ಇದ್ದು, ನಿಮ್ಮ ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸಬೇಡಿ, ಜಾರುವ ರಸ್ತೆಗಳಲ್ಲಿ ನಿಧಾನವಾಗಿ ವಾಹನ ಚಲಾಯಿಸಿ, ಸುರಕ್ಷಿತವಾಗಿ ತಲುಪಿ ಎಂದು ಸಂದೇಶವನ್ನು ಬೆಂಗಳೂರಿನ ಜನತೆಗೆ ನೀಡಿದ್ದಾರೆ.