ಕೊಚ್ಚಿಹೋದ ಬೆಂಗಳೂರು, ಸರಕಾರದ ಇಂದಿರಾ ಕ್ಯಾಂಟೀನ್ ಧ್ಯಾನ
ಬೆಂಗಳೂರು, ಆಗಸ್ಟ್ 17: ಮಂಗಳವಾರ ಹಾಗೂ ಬುಧವಾರ ಬೆಂಗಳೂರಿನಲ್ಲಿ ಬಿದ್ದ ಮಳೆಗೆ ಜನ ತತ್ತರಿಸಿದ್ದಾರೆ. ಕಳೆದ ಒಂದು ಶತಮಾನದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಪ್ರವಾಹ ಪರಿಸ್ಥಿತಿ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇಂಥ ಸನ್ನಿವೇಶದಲ್ಲೂ ಪರಿಸ್ಥಿತಿ ಹತೋಟಿಗೆ ತರಲು ಯಾವುದೇ ಕಾರ್ಯ ಕೈಗೊಂಡಿಲ್ಲ ಎಂಬುದು ನಿಚ್ಚಳವಾಗುತ್ತಿದೆ.
ಬೆಂಗಳೂರಿನ ಎಲ್ಲೆಲ್ಲಿ, ಎಷ್ಟೆಷ್ಟು ಮಳೆ: ಇಲ್ಲಿದೆ ಮಾಹಿತಿ
ಮುಖ್ಯಮಂತ್ರಿಗಳು ಹಾಗೂ ಅವರ ವಂದಿ ಮಾಗದರಿಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಕೆಲಸಗಳೇ ಬಹಳ ಆಯಿತು ಎಂಬಂತಿತ್ತು. ಕ್ಯಾಂಟೀನ್ ಕೆಲಗಳು ಮುಗಿದವಾ ಎಂಬುದೇ ಆದ್ಯತೆಯಾಗಿತ್ತು. ಆ ನಂತರವೇ ಉಳಿದ ಸಮಸ್ಯೆ ಕಡೆಗೆ ಗಮನ, ಆ ನಂತರ ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿ ಪಯಣ ಅಂತ ಯೋಜನೆಯಾಗಿತ್ತು.
ಬೆಂಗಳೂರಿನಲ್ಲಿ ಮಳೆಯಿಂದ ಕಂಗಾಲಾದ ಹಲವು ಪ್ರದೇಶಗಳಲ್ಲಿ ಇಡೀ ದಿನ ಅಧಿಕಾರಿಗಳಿಗಾಗಿ ಕಾದಿದ್ದೇ ಬಂತು, ನೀರನ್ನು ತೆಗೆದುಹಾಕಲು ಸಹಾಯಕ್ಕೆ ಬರುತ್ತಾರೆ ಎಂಬ ನೆರವಿನ ನಿರೀಕ್ಷೆ ಮಾಡಿದ್ದೇ ಆಯಿತು ವಿನಾ ಯಾವ ಅಧಿಕಾರಿಯೂ ಅತ್ತ ತಲೆ ಕೂಡ ಹಾಕಲಿಲ್ಲ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗಾಗಿ ಬೆಂಗಳೂರಿನಲ್ಲಿದ್ದರು. ಅಧಿಕಾರಿಗಳು ಅದನ್ನೇ ಕಾರಣವಾಗಿ ಹೇಳಿದರು.
ದೆಹಲಿಗೆ ತೆರಳಿದ ಸಿಎಂ ಮತ್ತಿತರರು
ಕ್ಯಾಂಟೀನ್ ನ ಎಲ್ಲ ಕೆಲಸಗಳು ಆಯಿತು ಎಂದಾದ ಮೇಲೆ ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತಿತರರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಬುಧವಾರ ಸಂಜೆ ರಾಹುಲ್ ಗಾಂಧಿ ಜತೆಗೆ ದೆಹಲಿಗೆ ತೆರಳಿದರು. ಈ ಮಧ್ಯೆ ಮೇಯರ್ ಪದ್ಮಾವತಿಯವರು ಕೂಡ ಕ್ಯಾಂಟೀನ್ ಕೆಲಸದಲ್ಲಿ ಮುಳುಗಿ ಹೋಗಿದ್ದರು.
ಮಡಿವಾಳ, ಕೋರಮಂಗಲ, ಈಜಿಪುರದಲ್ಲಿ ಮಳೆ ಆರ್ಭಟ
ಮಡಿವಾಳ, ಕೋರಮಂಗಲ ಮತ್ತು ಈಜಿಪುರದಲ್ಲಿ ಮಳೆಯ ಹೊಡೆತಕ್ಕೆ ಜನ ತತ್ತರಿಸಿದರು. ಬೆಳ್ಳಂದೂರು ಕೆರೆಯಲ್ಲಿ ಮಳೆಯ ಕಾರಣಕ್ಕೆ ರಾಸಾಯನಿಕ ಪ್ರಮಾಣ ಹೆಚ್ಚಾಗಿ ನೊರೆಯು ವಿಪರೀತವಾಗಿ ಸ್ಥಳೀಯ ನಿವಾಸಿಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಯಿತು.
ಅಧಿಕಾರಿಗಳು ನೆರವಾಗಲಿಲ್ಲ
ಜನರು ತಮ್ಮ ಮನೆಗಳಿಂದ ತಾವಾಗಿಯೇ ನೀರು ಹೊರ ಹಾಕಿದರು. ಜನರ ನೆರವಿಗೆ ಬರಬೇಕಾದ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಕೆಲಸವಿತ್ತು. ಇದರ ಜತೆಗೆ ಹಲವು ಪ್ರದೇಶದಲ್ಲಿ ಕಸದ ಸಮಸ್ಯೆಯೂ ಸೇರಿಕೊಂಡು ಸನ್ನಿವೇಶವನ್ನು ಮತ್ತಷ್ಟು ಗಂಭೀರ ಮಾಡಿತು.
ಬೇರೇನು ನಿರೀಕ್ಷೆ ಸಾಧ್ಯ?
ಬಿಬಿಎಂಪಿಗೆ ಮಾಡಿದ ಯಾವ ಕರೆಗಳಿಂದಲೂ ನಯಾಪೈಸೆ ಪ್ರಯೋಜನ ಆಗಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನು ಕ್ಯಾಂಟೀನ್ ಉದ್ಘಾಟನೆ ಭರದಲ್ಲಿ ಟ್ರಾಫಿಕ್ ಜಾಮ್ ಬೇರೆ ಅನುಭವಿಸಬೇಕಾಯಿತು. ಪೊಲೀಸರು, ಅಧಿಕಾರಿಗಳು ಕ್ಯಾಂಟೀನ್ ಸುತ್ತಮುತ್ತ ಇದ್ದೀವಿ ಅನ್ನೋದನ್ನು ತೋರಿಸಿಕೊಳ್ಳುವುದಕ್ಕೆ ಹರಸಾಹಸ ಪಟ್ಟರು.
ಪ್ರವಾಹ ಸ್ಥಿತಿಯಲ್ಲಿದ್ದ ಪ್ರದೇಶಗಳ ಬಳಿ ಯಾವ ಅಧಿಕಾರಿಯೂ ಇರಲಿಲ್ಲ. ಮುಖ್ಯಮಂತ್ರಿ ಸೇರಿದ ಹಾಗೆ ರಾಜ್ಯದ ಆಡಳಿತ ಯಂತ್ರವೇ ಕ್ಯಾಂಟೀನ್ ನ ಜಪ ಮಾಡುತ್ತಿದ್ದಾಗ ಬೇರೇನು ನಿರೀಕ್ಷೆ ಸಾಧ್ಯ?