ಪುಟ್ಟ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆಯೆ ಬಿಬಿಎಂಪಿ?
ಬಿಬಿಎಂಪಿಗೆ ಇಂಥ ಐಡಿಯಾ ಹೇಗೆ ಬಂತು? ಕೊಟ್ಟವರು ಯಾರು? ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಳಾಂತರಿಸುವುದೆಂದರೆ ಹುಡುಗಾಟಿಕೆಯೆ? ಒಟ್ಟಿನಲ್ಲಿ ಮಕ್ಕಳಿಗೂ, ಪೋಷಕರಿಗೂ, ಶಾಲೆ ನಡೆಸುವವರಿಗೂ ಈ ನಿರ್ಧಾರ ಭಾರೀ ತಲೆನೋವು ತಂದಿದೆ.
ಬೆಂಗಳೂರು, ಜನವರಿ 20 : ವಸತಿ ವಲಯದಲ್ಲಿರುವ ಮಕ್ಕಳ ಆರೈಕೆ ಕೇಂದ್ರಗಳಾದ ಮಾಂಟೆಸ್ಸೋರಿ ಶಾಲೆಗಳನ್ನು ವಾಣಿಜ್ಯ ವಲಯಗಳಿಗೆ ಸ್ಥಳಾಂತರಗೊಳಿಸಬೇಕು ಎಂಬ ಬಿಬಿಎಂಪಿಯ ಆದೇಶವನ್ನು ಪ್ರಶ್ನಿಸಿ ಚೇಂಜ್.ಆರ್ಗ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಬಿಬಿಎಂಪಿಯ ಈ ಆದೇಶ ಮಾಂಟೆಸ್ಸೋರಿ ಶಾಲೆಗಳನ್ನು ನಡೆಸುತ್ತಿರುವವರಿಗೆ ಮಾತ್ರವಲ್ಲ ಮಕ್ಕಳ ಪೋಷಕರಿಗೂ ತಲೆನೋವು ತಂದಿದೆ. ಮಕ್ಕಳ ಆರೈಕೆ ಕೇಂದ್ರಗಳನ್ನು ವಸತಿ ಪ್ರದೇಶದಲ್ಲಿಯೇ ನಡೆಸುವಂತಾಗಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಮಗು ಆರೈಕೆ ಕೇಂದ್ರ ಆರಂಭಿಸುವುದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಅರ್ಜಿಯನ್ನು ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮಹೀಂದ್ರ ಜೈನ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್ ವಿ, ಬಿಬಿಎಂಪಿಯ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಮುಂತಾದವರಿಗೆ ಕಳುಹಿಸಲಾಗಿದೆ.[ವಸತಿ ನಿವಾಸದಲ್ಲಿನ ಮಾಂಟೆಸರಿಗಳ ಎತ್ತಂಗಡಿಗೆ ಬಿಬಿಎಂಪಿ ನೋಟಿಸ್]
ಮಲ್ಲೇಶ್ವರಂನಲ್ಲಿರುವ ಇಂಡಿಯನ್ ಮಾಂಟೆಸ್ಸೋರಿ ಸೆಂಟರ್, ಭಾರತೀಯ ಮಾಂಟೆಸ್ಸೋರಿ ಶಾಲೆಗಳ ಒಕ್ಕೂಟ, ಕರ್ನಾಟಕ ಕೌನ್ಸಿಲ್ ಆಫ್ ಪ್ರಿಸ್ಕೂಲ್ಸ್ ಸಂಸ್ಥೆಗಳು ಈ ಆನ್ ಲೈನ್ ಅರ್ಜಿಯನ್ನು ಸಲ್ಲಿಸಿದ್ದು, ಶಾಲೆಗೆ ಹೋಗುವ ಪುಟಾಣಿ ಮಕ್ಕಳು, ವಾಣಿಜ್ಯ ವಲಯಕ್ಕೆ ಸ್ಥಳಾಂತರಿಸಿದರೆ ಅವರಿಗಾಗುವ ತೊಂದರೆಗಳನ್ನು ವಿವರಿಸಿದ್ದಾರೆ. [ಬೆಂಗಳೂರಿನ ಮೊದಲ ಶಿಶುಮಂದಿರ ಹಿಮಾಂಶುಗೆ 75]
ಈ ಅರ್ಜಿಯ ಪ್ರಮುಖ ಅಂಶಗಳು ಕೆಳಗಿನಂತಿವೆ.
ಮಾಂಟೆಸ್ಸೋರಿ ವಾಣಿಜ್ಯ ಚಟುವಟಿಕೆ ಕೇಂದ್ರವಲ್ಲ
ಮಕ್ಕಳ ಆರೈಕೆ ಕೇಂದ್ರಗಳು ವಾಣಿಜ್ಯ ಚಟುವಟಿಕೆ ನಡೆಸುತ್ತಿವೆ ಎಂದು ಭಾವಿಸುವುದೇ ಮಕ್ಕಳ ದೃಷ್ಟಿಯಿಂದ ಅತ್ಯಂತ ಆಘಾತಕಾರಿಯಾದದ್ದು. ಮಾಂಟೆಸ್ಸೋರಿ ಶಾಲೆಗಳಲ್ಲಿ ಮಕ್ಕಳನ್ನು ವ್ಯಾನ್ ನಲ್ಲಿ ತಂದು ಬಿಡುವ ಅನುಕೂಲತೆಗಳು ಇರುವುದಿಲ್ಲ. ಹದಿನೆಂಟು ತಿಂಗಳ ಮಗುವನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗುವುದು ಸರಿಯೆ?
ಕಳಿಸುವುದು ಹೇಗೆ, ಕರೆದುಕೊಂಡು ಬರುವುದು ಹೇಗೆ?
ಹಲವಾರು ಮಕ್ಕಳ ಆರೈಕೆ ಕೇಂದ್ರಗಳನ್ನು ನಿವಾಸಿಗಳು ತತ್ಮಮ್ಮ ಮನೆಗಳಲ್ಲಿಯೇ ನಡೆಸುತ್ತಾರೆ. ಇವುಗಳನ್ನು ವಾಣಿಜ್ಯ ಪ್ರದೇಶಗಳಿಗೆ ವರ್ಗಾಯಿಸಿದರೆ ಅಲ್ಲಿಗೆ ಮಕ್ಕಳನ್ನು ಕಳಿಸುವುದು ಹೇಗೆ, ಕರೆದುಕೊಂಡು ಬರುವುದು ಹೇಗೆ?
ಹೆಚ್ಚು ವಾಯು ಮತ್ತು ಶಬ್ಧ ಮಾಲಿನ್ಯ
ವಾಣಿಜ್ಯ ಪ್ರದೇಶದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ನಡೆಸುವುದು ಅಸಾಧ್ಯ. ಅಂತಹ ಪ್ರದೇಶದಲ್ಲಿ ಹೆಚ್ಚು ವಾಯು ಮತ್ತು ಶಬ್ಧ ಮಾಲಿನ್ಯವಿರುತ್ತದೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಸುರಕ್ಷಿತವೂ ಅಲ್ಲ.
ಮಕ್ಕಳಿಗೆ ಹೆಚ್ಚೂಕಮ್ಮಿಯಾದರೆ ಯಾರು ಜವಾಬ್ದಾರರು?
ಮಕ್ಕಳ ಆರೈಕೆ ಕೇಂದ್ರಗಳು ಬೆಳಿಗ್ಗೆ 9ರಿಂದ 2 ಗಂಟೆಯವರೆಗೆ ಮಾತ್ರ ನಡೆಯುತ್ತವೆ. ನಂತರ ಕೆಲವರನ್ನು ಹೊರತುಪಡಿಸಿ ಯಾರೂ ಇರುವುದಿಲ್ಲ. ಒಂದು ವೇಳೆ ಹೆಚ್ಚು ಹೊತ್ತು ಇರಬೇಕಾದಂಥ ಸಮಯದಲ್ಲಿ ಮಕ್ಕಳಿಗೆ ಹೆಚ್ಚೂಕಮ್ಮಿಯಾದರೆ ಯಾರು ಜವಾಬ್ದಾರರು?
ಐದು ವರ್ಷದವರೆಗಿನ ಪುಟಾಣಿಗಳು
ಇಂಥ ಕೇಂದ್ರಗಳಲ್ಲಿ ಹದಿನೆಂಟು ತಿಂಗಳ ಮಕ್ಕಳಿಂದ ಹಿಡಿದು ಐದು ವರ್ಷದವರೆಗಿನ ಪುಟಾಣಿಗಳು ಬರುತ್ತವೆ. ವಿಕಲಾಂಗ ಮಕ್ಕಳಿಗಾಗಿಯೇ ವಿಶೇಷವಾದ ಶಾಲೆಗಳೂ ಹಲವಾರಿವೆ.
ಮಹಿಳೆಯರೇ ನಡೆಸುತ್ತಿದ್ದಾರೆ
ಈ ಮಕ್ಕಳ ಆರೈಕೆ ಕೇಂದ್ರಗಳು ಯಾವುದೇ ಶಾಲೆಯೊಂದಿಗೆ ಸಂಬಂಧ ಹೊಂದಿರುವುದಿಲ್ಲ, ಅವು ಶಿಕ್ಷಣ ಸಂಸ್ಥೆಗಳೂ ಅಲ್ಲ. ಇಂಥ ಹಲವಾರು ಸಂಸ್ಥೆಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವವರೂ ಮಹಿಳೆಯರೇ.
ಆಟವಾಡಲು ಪ್ರಶಸ್ತ ಸ್ಥಳ ಬೇಕು
ಮಕ್ಕಳಿಗೆ ಆಟವಾಡಲು ಪ್ರಶಸ್ತ ಸ್ಥಳ ಬೇಕಾಗುತ್ತದೆ. ವಾಣಿಜ್ಯ ಪ್ರದೇಶದಲ್ಲಿದ್ದರೆ ಹೆಚ್ಚು ಸ್ಥಳ ಸಿಗುವುದಿಲ್ಲ ಮತ್ತು ಆಟವಾಡಲು ಅನುಕೂಲವಿರುವುದಿಲ್ಲ. ವಸತಿ ವಲಯದಲ್ಲಿರುವ ಕೇಂದ್ರಗಳಲ್ಲಿ ಹೆಚ್ಚು ಗಿಡಮರಗಳಿರುವುದರಿಂದ ಪರಿಸರದ ಬಗ್ಗೆಯೂ ಅವುಗಳಿಗೆ ಪ್ರೀತಿ ಉಂಟಾಗುತ್ತದೆ.
ಲೈಂಗಿಕ ದೌರ್ಜನ್ಯ ನಡೆಯುವ ಅಪಾಯ
ವಾಣಿಜ್ಯ ವಲಯದಲ್ಲಿ ಮಕ್ಕಳಿರುವ ಪ್ರದೇಶದಲ್ಲಿ ಇತರ ವಾಣಿಜ್ಯ ಚಟುವಟಿಕೆಗಳಿದ್ದರೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಅಪಾಯ, ಅಪಹರಣಕ್ಕೀಡಾಗುವ ಸಾಧ್ಯತೆಗಳೂ ಇರುತ್ತವೆ. ಮಕ್ಕಳನ್ನು ಸದಾ ಯಾರಾದರೂ ನೋಡುತ್ತಲೇ ಇರಬೇಕಾಗುತ್ತದೆ.