ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಅನುಪಮಾ
ಮುಖ್ಯಮಂತ್ರಿ ಸೇರಿ 8 ಜನರ ವಿರುದ್ಧ ದೂರು ದಾಖಲಿಸಲು ಸ್ಪೀಕರ್ಗೆ ಅನುಮತಿ ಕೋರಿದ್ದೇನೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ 'ಹೊಸ ಬಾಂಬ್' ಹಾಕಿದ್ದಾರೆ.
ಬೆಂಗಳೂರು, ಫೆಬ್ರವರಿ 09: ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರ ಸಲಹೆಗಾರ ಕೆಂಪಯ್ಯ, ಪಿ.ಟಿ.ಪರಮೇಶ್ವರ್ನಾಯಕ್, ನಿವೃತ್ತ ಡಿಜಿ ಓಂಪ್ರಕಾಶ್, ಚುನಾವಣಾಧಿಕಾರಿ ಶ್ರೀನಿವಾಸ ಆಚಾರಿ, ಬಳ್ಳಾರಿ ಐಜಿಪಿ ಮುರುಗನ್, ಬಳ್ಳಾರಿ ಎಸ್ಪಿ ಆರ್.ಚೇತನ್ ವಿರುದ್ಧ ದಾವೆ ಹೂಡಲು ಕೂಡ್ಲಿಗಿ ಡಿವೈಎಸ್ಪಿ (ಸ್ವಯಂ ನಿವೃತ್ತ) ಯಾಗಿದ್ದ ಅನುಪಮಾ ಶೆಣೈ ಅವರು ಗುರುವಾರ (ಫೆಬ್ರವರಿ 09) ಹೇಳಿದ್ದಾರೆ.
ನನ್ನ ರಾಜೀನಾಮೆ ಹಿಂದೆ ಷಡ್ಯಂತ್ರ ಅಡಗಿದೆ.ಮಾಜಿ ಸಚಿವ ಪಿಟಿ ಪರಮೇಶ್ವರ ನಾಯಕ್ ಅವರ ಲಂಚ ಪ್ರಕರಣ ಅಷ್ಟೇ ಕಾರಣವಲ್ಲ. ನಾನು ಡಿವೈಎಸ್ಪಿಯಾಗಿದ್ದಾಗ ಅಕ್ರಮವಾಗಿ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಕೋರಿದ್ದೇನೆ ಎಂದು ಅನುಪಮಾ ಶೆಣೈ ಅವರು ಹೇಳಿದರು.
ನನ್ನ ರಾಜೀನಾಮೆ ಹಿಂದೆಯೂ ಮದ್ಯದ ಲಾಬಿಯ ಕೈವಾಡವಿದೆ ಎಂದ ಅವರು, ಲಿಕ್ಕರ್ ಲಾಬಿಗೆ ಮಣಿದು ನನ್ನನ್ನು ಒಒಡಿ ಮೇಲೆ ವರ್ಗಾವಣೆ ಮಾಡಿದ್ದು, ಕಾನೂನು ಬಾಹಿರ. ನನ್ನ ವರ್ಗಾವಣೆ ಹಿಂದಿನ ಸಂಚಿನ ಬಗ್ಗೆ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದರು. ಈಗಾಗಲೇ ಮುಖ್ಯಮಂತ್ರಿ ಸೇರಿ 8 ಜನರ ವಿರುದ್ಧ ದೂರು ದಾಖಲಿಸಲು ಸ್ಪೀಕರ್ಗೆ ಅನುಮತಿ ಕೋರಿದ್ದೇನೆ ಎಂದರು.
ಐಪಿಸಿ ಸೆಕ್ಷನ್ 124(ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ಸಿಆರ್ ಪಿಸಿ 200ರ ಅನ್ವಯ ಕೋರ್ಟಿನಲ್ಲಿ ನೇರವಾಗಿ ಸಾಕ್ಷಿ ಒದಗಿಸಲು ಮುಂದಾಗಿರುವ ಅನುಪಮಾ ಅವರು, ಮುಖ್ಯಮಂತ್ರಿ ಸೇರಿ 8 ಜನರ ವಿರುದ್ಧ ತನಿಖೆಗೆ ಕೋರಿ, ರಾಜ್ಯಪಾಲ ವಜುಭಾಯಿ ವಾಲಾ, ವಿಧಾನಸಭೆ ಸ್ಪೀಕರ್ ಕೆಬಿ ಕೋಳಿವಾಡ, ವಿಧಾನಪರಿಷತ್ ಸ್ಪೀಕರ್ ಡಿಎಚ್ ಶಂಕರಮೂರ್ತಿ, ಮುಖ್ಯಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯಾ ಅವರಿಗೆ ಪತ್ರ್ ಬರೆದಿದ್ದಾರೆ.