ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಮತ್ತೆ ಹೋರಾಟ : ವರಲಕ್ಷ್ಮೀ
ರಾಜ್ಯಾದ್ಯಂತ 68 ಸಾವಿರಕ್ಕೂ ಇರುವ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ ದಯನೀಯವಾಗಿದೆ. ಕನಿಷ್ಠ ವೇತನ ಹೆಚ್ಚಳ, ಪಿಂಚಣಿ ಮತ್ತಿತರ ಬೇಡಿಕೆಗಳನ್ನು ಆಗ್ರಹಿಸಿ ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಸತತ ನಾಲ್ಕು ದಿನಗಳ ಕಾಲ ಹಗಲು ರಣಬಿಸಿಲಿನಲ್ಲಿ, ರಾತ್ರಿ ಛಾವಣಿಯಿಲ್ಲದೆ ಕಳೆಯಬೇಕಾಯಿತು.
ಆ ನಾಲ್ಕು ದಿನಗಳನ್ನು ಫ್ರೀಡಂ ಪಾರ್ಕ್ ಬಳಿ ರಸ್ತೆಯಲ್ಲಿಯೇ ಕಳೆಯಬೇಕಾಗಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ. ಅಂಗನವಾಡಿ ಕಾರ್ಯಕರ್ತೆಯರ ಕೂಗು ವಿಧಾನಸಭೆ ಮತ್ತು ಸಂಸತ್ತಿನಲ್ಲಿಯೂ ಮೊಳಗಿತು. ಕಡೆಗೂ ರಾಜ್ಯ ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚಿಸುವುದಾಗಿ ವಾಗ್ದಾನ ನೀಡಿದ ಮೇಲೆ ಅವರು ಮಕ್ಕಳೊಂದಿಗೆ ತತ್ಮಮ್ಮ ಊರಿಗೆ ಮರಳಬೇಕಾಯಿತು.[ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್]
ಏಪ್ರಿಲ್ 10ರಂದು ನಿರ್ಧಾರ ಪ್ರಕಟಿಸುವುದಾಗಿ ಸಿದ್ದರಾಮಯ್ಯ ವಾಗ್ದಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ನೀಡಿದ ಮಾತನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಮತ್ತೂ ಉಗ್ರವಾಗಿ ಹೋರಾಟಕ್ಕಿಳಿಯುವುದಾಗಿ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರು ಎಚ್ಚರಿಕೆ ನೀಡಿದ್ದಾರೆ.[ಅಂಗನವಾಡಿ ಕಾರ್ಯಕರ್ತೆಯರ U ಟರ್ನ್, ಧರಣಿ ವಾಪಸ್ ಇಲ್ಲ]
ಈ ಸಂಕಷ್ಟಮಯ ಸಮಯದಲ್ಲಿ ತಮಗೆ ಅನ್ನ, ನೀರು, ಮಜ್ಜಿಗೆ, ಬಟ್ಟೆ ನೀಡಿ ಸಹಾಯ ಮಾಡಿದ ಹಲವಾರು ಜನರು, ಪ್ರಚಾರ ನೀಡಿದ ಮಾಧ್ಯಮ, ತಮ್ಮ ಬಗ್ಗೆ ದನಿಯೆತ್ತಿದ ಜನಪ್ರತಿನಿಧಿಗಳು, ಹೋರಾಟಕ್ಕೆ ಬೆಂಬಲ ನೀಡಿದ ಸಂಘಸಂಸ್ಥೆಗಳಿಗೆ ಧನ್ಯವಾದ ಹೇಳಿ ವರಲಕ್ಷ್ಮೀ ಅವರು ಪತ್ರ ಬರೆದಿದ್ದಾರೆ. ಅದರ ವಿವರ ಕೆಳಗಿದೆ.[ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಾಪಸ್]
ಕೃತಜ್ಞತಾ ಭಾವನೆಯನ್ನು ಮೂಡಿಸಿದೆ
ಅಂಗನವಾಡಿ ನೌಕರರು (ಸಿಐಟಿಯು) ವೇತನ ಹೆಚ್ಚಳ ಮತ್ತು ಸೇವಾ ನಿಯಮವಳಿಗೆ ಆಗ್ರಹಿಸಿ ನಾಲ್ಕು ದಿನಗಳ ಕಾಲ ಹಗಲು ರಾತ್ರಿ ನಡೆಸಿದ ಧರಣಿಯನ್ನು ಚಿಂತಕರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ಪಕ್ಷಭೇದವನ್ನು ಮರೆತು ಶಾಸಕರು, ಮಾಜಿ ಸಚಿವರು, ಮಾಧ್ಯಮಗಳು, ನಾಡಿನ ಜನತೆ ವ್ಯಾಪಕವಾಗಿ ಸ್ಪಂದನೆ ನೀಡಿ ಹೋರಾಟವನ್ನು ಬೆಂಬಲಿಸಿದ್ದು ನಮಗೆ ಅಪಾರ ಸಂತಸವನ್ನು ಮೂಡಿಸಿದೆ.[ಅನ್ನ, ನೀರು ಇಲ್ಲದೆ ಪರದಾಡಿದ ಅಂಗನವಾಡಿ ಕಾರ್ಯಕರ್ತೆಯರು!]
ನೈತಿಕ ಬಲ ನೀಡಿದರು
20 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಅನಾರೋಗ್ಯವನ್ನೂ ಲೆಕ್ಕಿಸದೆ ಬೀದಿಯಲ್ಲಿ ಹಗಲು ರಾತ್ರಿ ಧರಣಿ ನಡೆಸಿದರು. ನೌಕರರ ಬೇಡಿಕೆ ಬೆಂಬಲಿಸಿ ರಾಜ್ಯದ ಜನತೆ ಬೆಂಬಲ ನೀಡಿದ್ದಾರೆ. ನಾವು ರಸ್ತೆಯಲ್ಲಿ ಧರಣಿ ಕುಳಿತಾಗ ಸಾಕಷ್ಟು ಜನ ಸವಾರರು, ಜನಸಾಮಾನ್ಯರು ಬೇಡಿಕೆ ಈಡೇರುವವರೆಗೂ ಏಳಬೇಡಿ ಎಂದು ನೈತಿಕ ಬಲ ನೀಡಿದರು. ಸ್ವಯಂ ಪ್ರೇರಣೆಯಿಂದ ಹಲವೆಡೆ ಪತ್ರಿಕಾ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ಲೇಖನಗಳನ್ನು ಬರೆಯುವ ಮೂಲಕ ಬೆಂಬಲ ಸೂಚಿಸಿದ್ದರು.[ಬೆಂಗಳೂರಿನಲ್ಲಿ ಪ್ರತಿಭಟನೆ: ಫುಲ್ ಟ್ರಾಫಿಕ್ ಜಾಮ್]
ಮಾಧ್ಯಮಗಳ ಕೊಡುಗೆ ದೊಡ್ಡದಿದೆ
ನಮ್ಮ ಹೋರಾಟದ ಕ್ಷಣ ಕ್ಷಣದ ಮಾಹಿತಿಯನ್ನು ಜನಸಾಮಾನ್ಯರಿಗೆ, ಸರಕಾರಕ್ಕೆ ತಿಳಿಸುವುದಕ್ಕಾಗಿ ಮಾಧ್ಯಮಗಳು ನಮ್ಮ ಜೊತೆಯಲ್ಲಿಯೇ ಉಳಿದುಕೊಂಡು ಹೋರಾಟಕ್ಕೆ ಬೆಂಬಲ ನೀಡಿದರು. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳ ನಿರಂತರ ವರದಿಗಾರಿಕೆಯಿಂದ ರಾಜ್ಯ ಸೇರಿದಂತೆ, ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗಳನ್ನು ಹುಟ್ಟು ಹಾಕಿದ್ದರಲ್ಲಿ ಮಾಧ್ಯಮಗಳ ಕೊಡುಗೆ ದೊಡ್ಡದಿದೆ. ಕಾರ್ಯಕರ್ತರ ಸಂದರ್ಶನ ಕೂಡ ಪ್ರಸಾರವಾದವು.
ಬಲತುಂಬಿದ ಜನಪ್ರತಿನಿಧಿಗಳ ಬೆಂಬಲ
ವಿವಿಧ ರಾಜಕೀಯ ಮುಖಂಡರುಗಳು ಪಕ್ಷಬೇಧವನ್ನು ಮರೆತು ಹೋರಾಟಕ್ಕೆ ಬೆಂಬಲ ನೀಡಿದ್ದರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ವಿರೋಧ ಪಕ್ಷಗಳು ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಚರ್ಚೆಗಳನ್ನು ನಡೆಸಿದರು. ಬೇಡಿಕೆ ಈಡೇರಿಸಬೇಕೆಂದು ಸದನದ ಬಾವಿಗಿಳಿದು ಹೋರಾಟ ನಡೆಸಿದರು.
ಉಟೋಪಚಾರ, ಮಜ್ಜಿಗೆ, ನೀರು
ಪೊಲೀಸ್ ಇಲಾಖೆಯವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುತುವರ್ಜಿ ವಹಿಸಿದರು. ಹೋರಾಟಕ್ಕೆ ಚಿಂತಕರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ-ಯುವಜನ-ಮಹಿಳಾ ಸಂಘಟನೆಗಳು, ಚಲನಚಿತ್ರರಂಗದವರು, ಬ್ಯಾಂಕ್ ವಿಮಾ ನೌಕರರು, ಸರಕಾರದ ನೌಕರರ ಸಂಘಟನೆಗಳು, ಕಾರ್ಖಾನೆಗಳ ಸಂಘಟನೆಗಳು, ಗಾರ್ಮೆಂಟ್ ನೌಕರರು ಉಟೋಪಚಾರ, ಮಜ್ಜಿಗೆ, ನೀರಿನ ವ್ಯವಸ್ಥೆಯನ್ನು ಮಾಡುವುದರ ಮೂಲಕ ನಮ್ಮ ಹೋರಾಟಕ್ಕೆ ಸ್ಪೂರ್ತಿ ತಂಬಿದರು.
ಬೇಡಿಕೆ ಜಾರಿ ಮಾಡದೇ ಹೋದಲ್ಲಿ
ಈ ಐತಿಹಾಸಿಕ ಹೋರಾಟ ಯಶಸ್ವಿಯಾಗಿ ನಡೆಸಲು ಕಾರಣರಾದ ತಮಗೆಲ್ಲರಿಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ರಾಜ್ಯಸಮಿತಿ ಮತ್ತು ಸಿ.ಐ.ಟಿ.ಯು ಸಮಿತಿ ಅಭಿನಂದನೆ ಸಲ್ಲಿಸುತ್ತವೆ. ನೀವು ಕೊಟ್ಟ ಪ್ರೋತ್ಸಾಹದಿಂದಾಗಿಯೇ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ಏಪ್ರಿಲ್ 19ಕ್ಕೆ ನಿಗದಿಯಾಗಿದ್ದ ಸಭೆ 10 ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 10ಕ್ಕೆ ನಿಗದಿಯಾಗಿದೆ. ಏಪ್ರಿಲ್ 10ರ ಸಭೆಯಲ್ಲಿ ರಾಜ್ಯ ಸರಕಾರ ಸಕಾರಾತ್ಮಕವಾಗಿ ನಮ್ಮ ಬೇಡಿಕೆ ಜಾರಿ ಮಾಡದೇ ಹೋದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ನಡೆಸಲು ನಾವು ತೀರ್ಮಾನಿಸಿದ್ದೇವೆ.