ಬಿಜೆಪಿಯ ಮತ ಬೇಟೆಗಾರ ಅಮಿತ್ ಶಾಗೆ ಬೆಂಗಳೂರಿನಲ್ಲಿ ಮನೆ ಹುಡುಕಾಟ
ಚುನಾವಣಾ ತಯಾರಿಗಾಗಿ ಅಮಿತ್ ಶಾ ತಾತ್ಕಾಲಿಕವಾಗಿ ತಮ್ಮ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಲು ಹೊರಟಿದ್ದಾರೆ. ಅವರ ಆಪ್ತರು ಬೆಂಗಳೂರು ಏರ್ಪೋರ್ಟ್ ಸುತ್ತ ಮುತ್ತ ವಿಲ್ಲಾ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಏಪ್ರಿಲ್ 28: ಕರ್ನಾಟಕದಲ್ಲಿ ಶತಾಯ ಗತಾಯ ಮತ್ತೆ ಕೇಸರಿ ಝಂಡಾ ಊರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಣತಂತ್ರ ಹೆಣೆಯಲು ಹೊರಟಿದ್ದಾರೆ. ಈ ಕಾರಣಕ್ಕೆ ದೆಹಲಿಯಿಂದ ಬೆಂಗಳೂರಿಗೆ ನೆಲೆ ಬದಲಾಯಿಸಲು ಯೋಚಿಸಿದ್ದಾರೆ.
ಈ ವರ್ಷಾಂತ್ಯದ ವೇಳೆಗೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದರೂ ಅಮಿತ್ ಶಾ 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ.[ಮೋದಿ ಅಲೆಯನ್ನು ಹೊಸಕಿಹಾಕುತ್ತಿರುವ ಯಡ್ಡಿ-ಈಶು ಜಟಾಪಟಿ]
ಮೂಲಗಳ ಪ್ರಕಾರ ಚುನಾವಣಾ ತಯಾರಿಗಾಗಿ ತಾತ್ಕಾಲಿಕವಾಗಿ ಅಮಿತ್ ಶಾ ತಮ್ಮ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಲು ಹೊರಟಿದ್ದಾರೆ. ಅವರ ಆಪ್ತರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ವಿಲ್ಲಾ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಮಿತ್ ಶಾ ಮೌನವಾಗಿದ್ದಾರೆ. ಆದರೆ ಮೂಲಗಳ ಪ್ರಕಾರ ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಆಗಸ್ಟ್ ನಲ್ಲಿ ಅಮಿತ್ ಶಾ ಕರ್ನಾಟಕಕ್ಕೆ ಬರಲಿದ್ದಾರೆ. ನಂತರ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಣತಂತ್ರ ಹೆಣೆಯಲಿದ್ದಾರೆ.[ಸಂತೋಷ್ ಗೆ ಅಧಿಕಾರ ಬೇಕಿಲ್ಲ, ಬಿಜೆಪಿ ಬಿಕ್ಕಟ್ಟಿನ ಅಸಲಿ ಕಾರಣ ಏನು?]
ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ನಿರ್ಮಿಸಲಿರುವ ವಿಲ್ಲಾಗಳನ್ನು ಅಮಿತ್ ಶಾ ಆಪ್ತರು ತಲಾಷ್ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಹತ್ತಿರದ, ನಗರದ ಜಂಜಾಟದಿಂದ ಮುಕ್ತವಾಗಿರುವ ಜತೆಗೆ ನಾಯಕರೊಂದಿಗೆ ಚರ್ಚೆ ಸೇರಿದಂತೆ ಖಾಸಗಿ ಸಮಯ ಕಳೆಯಲು ಅವಕಾಶವಿರುವ ಮನೆಗಳನ್ನು ಹುಡುಕಾಡುತ್ತಿದ್ದಾರೆ.
ಇದರ ಜತೆಗೆ ಪ್ರಯಾಣಕ್ಕೆ ಸುಲಭವಾಗುವ, ಭದ್ರತೆ ದೃಷ್ಟಿಯಿಂದಲೂ ಸುರಕ್ಷಿತವಾಗಿರುವ ಮನೆಗಳನ್ನು ನೋಡುತ್ತಿದ್ದಾರೆ.
ಬಿಜೆಪಿ ಪಾಲಿನ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿ 2008ರಲ್ಲಿ ಗೆದ್ದಿದ್ದರೂ 2013ರಲ್ಲಿ ಆಡಳಿತವನ್ನು ಕಾಂಗ್ರೆಸ್ ಕೈಗಿತ್ತಿತ್ತು. ಇದೀಗ ಮತ್ತೆ ಆ ರೀತಿಯ ತಪ್ಪುಗಳು ಮರುಕಳಿಸದಂತೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಮುಂದಾಗಿದೆ.