ಹಿಂದುಳಿದವರ ಏಳಿಗೆಯೇ ಗುರಿ, ಮಾಧ್ಯಮವಿಲ್ಲದೆ ಸರಕಾರವಿಲ್ಲ: ಸಿಎಂ
ಬೆಂಗಳೂರು, ಡಿಸೆಂಬರ್ 10: ಅಖಿಲ ಭಾರತ ಸಾರ್ವಜನಿಕ ಸಂಪರ್ಕಾದಿಕಾರಿಗಳ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ನಡೆಯುತ್ತಿದ್ದು ಶುಕ್ರವಾರ ವಸತಿ ಮತ್ತು ಬಡತನ ನಿರ್ಮೂಲನಾ ಖಾತೆ ಸಚಿವ ವೆಂಕಯ್ಯನಾಯ್ಡು ಉದ್ಘಾಟಿಸಿದರು. ಹರಿಯ ಪತ್ರಕರ್ತ ಶೇಖರ್ ಗುಪ್ತಾ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ, ನಿರ್ದೇಶಕ ಎನ್ ರವಿಕುಮಾರ್ ಇದ್ದರು.
ಎರಡನೇ ದಿನವಾದ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸಿಎಂ ಸಮ್ಮುಖದಲ್ಲಿ ಅನೇಕ ರಾಜ್ಯದ ವಾರ್ತಾಧಿಕಾರಿಗಳು ವರದಿ ಮಂಡಿಸಿದರು. ಸಿಎಂ ಮಾತನಾಡಿ ಮಾಧ್ಯಮಗಳಿಲ್ಲದೆ ಸರ್ಕಾರ ಇಲ್ಲ, ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಸಬಲೀಕರಣಗೊಳಿಸುವುದು ನಮ್ಮ ಸರ್ಕಾರದ ಗುರಿ ಎಂದು ತಿಳಿಸಿದರು.[ಬರ ಪರಿಹಾರ: ಕೇಂದ್ರದಿಂದ ರು 4703 ಕೋಟಿ ನೆರವು ಬೇಡಿದ ಸಿಎಂ]
ದಲಿತರು, ಶೋಷಿತರು, ಹಿಂದುಳಿಗೆಗೆ ಸರ್ಕಾರ ಬದ್ಧ
ಸಂವಿಧಾನದ ಪರಿಚ್ಚೇದ 21ರಲ್ಲಿ ಗೌರವಯುತವಾಗಿ ಬದುಕುವ ಹಕ್ಕನ್ನು ನೀಡಲಾಗಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ಸರ್ಕಾರ ಎಲ್ಲರೂ ಘನತೆಯಿಂದ ಬಾಳಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಬಡವರು ಮತ್ತು ಶೋಷಿತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಮೂಲಕ ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಮಂಚೂಣಿಗೆ ತರುವುದು ನಮ್ಮ ಉದ್ದೇಶ ಎಂದರು.
ಮಾಧ್ಯಮಗಳಿಲ್ಲದೇ ಸರ್ಕಾರ ಇಲ್ಲ: ಸಿಎಂ
ಮಾಧ್ಯಮಗಳಿಲ್ಲದೇ ಸರ್ಕಾರ ಇಲ್ಲ, ಸರ್ಕಾರವಿಲ್ಲದೇ ಮಾಧ್ಯಮಗಳಿಲ್ಲ ಎಂಬ ಅಮೇರಿಕಾ ಅಧ್ಯಕ್ಷ ಥಾಮಸ್ ಜೆಫರ್ ಸನ್ ಮಾತು ನೆನಪಿಗೆ ಬರುತ್ತಿದೆ, ಇದನ್ನು ನಾವು ಒಪ್ಪುತ್ತೇವೆ. ನಮ್ಮ ಸರ್ಕಾರವು ಬಡವರು ಮತ್ತು ದಲಿತರು ಶೋಷಿತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವರದಿ ಮಂಡಿಸಿದ ವಿವಿಧ ರಾಜ್ಯದ ವಾರ್ತಾಧಿಕಾರಿಗಳು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಅಖಿಲ ಭಾರತ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕಾರ್ಯಾಗಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು, ಮುಖ್ಯಮಂತ್ರಿಯವರನ್ನು ಸ್ವಾಗತಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಆಸೀನರಾಗುತ್ತಿದ್ದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಾರ್ತಾ ಇಲಾಖೆಯ ನಿರ್ದೇಶಕರುಗಳು ತಮ್ಮ ರಾಜ್ಯಗಳಲ್ಲಿ ಇಲಾಖೆಗೆ ಸಂಬಂದಿಸಿದಂತೆ ಕೈಗೊಂಡಿರುವ ಕ್ರಮಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು.
ನವ ಮಾಧ್ಯಮಗಳನ್ನು ಬಳಸಿ : ಮನೀಶ್ ತಿವಾರಿ
ಕಾರ್ಯಾಗಾರದ ಎರಡನೇ ಅಧಿವೇಶನದಲ್ಲಿ 'ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪಾತ್ರ'ದ ಕುರಿತು ಸಂವಾದ ಜರುಗಿತು.ಕೇಂದ್ರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಮಾಜಿ ಸಚಿವ ಮನೀಶ್ ತಿವಾರಿ ಅವರು ಆಧುನಿಕ ತಂತ್ರಜ್ಞಾನ ಮತ್ತು ಸಂವಹನಕ್ಕೆ ನವ ಮಾಧ್ಯಮಗಳನ್ನು ಬಳಸಿ ಸಾರ್ವಜನಿಕ ಮಾಹಿತಿಯನ್ನು ವಾರ್ತಾ ಇಲಾಖೆಗಳು ಪರಿಣಾಮಕಾರಿಯಾಗಿ ಹೇಗೆ ನೀಡಬೇಕು ಎಂಬ ಕುರಿತು ಮಾತನಾಡಿದರು.
ಪೇಯ್ಡ್ ನ್ಯೂಸ್ ಗೆ ಮಾರುಹೋಗದಿರಿ: ಸಚಿವ ರೋಷನ್ ಬೇಗ್
ಮಾಧ್ಯಮಗಳು ಪೇಯ್ಡ್ ನ್ಯೂಸ್ ಗಳನ್ನು ಪ್ರಕಟಿಸುತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಅಡಚಣೆ ಉಂಟು ಮಾಡಿದೆ ಎಂದು ನಗರಾಭಿವೃದ್ದಿ, ವಕ್ಫ್, ಹಝ್ ಖಾತೆ ಸಚಿವರಾದ ರೋಷನ್ ಬೇಗ್ ಹೇಳಿದರು. ಪತ್ರಕರ್ತರು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸ ಬೇಕಾಗಿದೆ, ವಾಸ್ತವ ಸಂಗತಿಗಳನ್ನು ನೈಜ ನೆಲೆಗಟ್ಟಿನಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ನುಡಿದರು.
ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಿ: ವೆಂಕಯ್ಯನಾಯ್ಡು
ಮಾಧ್ಯಮಗಳು ಅಭಿವೃದ್ದಿ ಮಾಹಿತಿಗಿಂತ ಸ್ವಾಸ್ಥ್ಯ ಕೆಡಿಸುವ ಸಂಗತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ, ಇದರ ಪರಿಣಾಮಗಳ ಹೊಣೆ ಇಲ್ಲದವರಂತೆ ಮಾಧ್ಯಮಗಳು ವರ್ತಿಸುತ್ತಿರುವುದು ವಿಷಾದನೀಯಕರವಾಗಿದೆ. ದೇಶದ ಅಬಿವೃದ್ದಿಗೆ ಪೂರಕವಾದ ಸುದ್ದಿಗಳಿಗೆ ಆದ್ಯತೆ ಸಿಕ್ಕಾಗ ಹೊರ ಜಗತ್ತಿಗೆ ಸಕಾರಾತ್ಮಕವಾದ ನೋಟ ಸಿಗುತ್ತದೆ ಅದು ಎಲ್ಲಾ ರೀತಿಯಿಂದಲೂ ದೇಶಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿಲ್ಲವೇ? ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವರಾದ ಎಂ ವೆಂಕಯ್ಯನಾಯ್ಡು ಪ್ರಶ್ನಿಸಿದರು.