ಜಯಾ ಫೋಟೋ ಇಟ್ಟು ಪನ್ನೀರ್ ಕ್ಯಾಬಿನೆಟ್ ಮೀಟಿಂಗ್!
ಚೆನ್ನೈ, ಅಕ್ಟೋಬರ್ 19 : ತಮಿಳುನಾಡಿಗೆ ಇಂತಹ ದುರ್ಗತಿ ಬರಬಾರದಿತ್ತು. ಒಂದೆಡೆ ಮೂರು ವಾರಗಳಿಂದ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಆಸ್ಪತ್ರೆ ಸೇರಿದ್ದರೆ, ಮತ್ತೊಂದೆಡೆ ಜಯಲಲಿತಾ ಅವರ ಫೋಟೋ ಮುಂದಿಟ್ಟುಕೊಂಡು ಸಂಪುಟ ಸಭೆಯನ್ನು ನಡಿಸಿದ್ದು.
ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ರಾಜ್ಯಭಾರ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ ಅವರಿಗೆ ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ತಾಕತ್ತಿಲ್ಲವೆ? ಜಯಲಲಿಯಾ ಆಸ್ಪತ್ರೆ ಸೇರಿದ ನಂತರ ಬುಧವಾರ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯ ಫೋಟೋ ಇಟ್ಟುಕೊಂಡು ಸಭೆ ನಡೆಸಿದ್ದು ನಿಜಕ್ಕೂ ನಗೆಪಾಟಲು.
ಓ ಪನ್ನೀರ್ ಸೆಲ್ವಂ ಅವರದು ಎಂತಹ ಸ್ವಾಮಿನಿಷ್ಠೆಯ ಪರಮಾವಧಿ ಎಂಬುದನ್ನು ಹಿಂದೆ ಹಲವು ಬಾರಿ ತಮಿಳುನಾಡಿನ ಜನತೆ ನೋಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಾಗ, ಮುಖ್ಯಮಂತ್ರಿ ಪಟ್ಟ ಏರಿದ್ದ ಓ ಪನ್ನೀರ್ಸೆಲ್ವಂ ಅವರು ಕರ್ಚೀಫು ಒದ್ದೆಯಾಗುವಂತೆ ಅತ್ತಿದ್ದರು.
ಕೆಲವೇ ದಿನಗಳಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾ. ಕುಮಾರಸ್ವಾಮಿ ಅವರ ತೀರ್ಪಿನಿಂದಾಗಿ ಜಯಲಲಿತಾ ಅವರು ಖುಲಾಸೆಯಾಗಿ ಹೊರಬಂದಾಗ ಅಷ್ಟೇ ವಿಧೇಯತೆಯಿಂದ ಪಟ್ಟಬಿಟ್ಟುಕೊಟ್ಟು ಪನ್ನೀರ್ಸೆಲ್ವಂ ಅವರು ಸ್ವಾಮಿನಿಷ್ಠೆಯನ್ನು ಮೆರೆದು ಆನಂದಭಾಷ್ಪ ಸುರಿಸಿದ್ದರು. ಜಯಲಲಿತಾ ಅವರಂಥ ನಾಯಕಿಯನ್ನು ಪಡೆಯುವುದಕ್ಕೆ ಪನ್ನೀರ್ಸೆಲ್ವಂ ಪುಣ್ಯ ಮಾಡಿರಬೇಕು.
ಬುಧವಾರ ನಡೆಸಿದ ಸಭೆಯಲ್ಲಿ ಪನ್ನೀರ್ಸೆಲ್ವಂ ಅವರು ಮುಖ್ಯಮಂತ್ರಿಗೆ ಮೀಸಲಿದ್ದ ಕುರ್ಚಿಯಲ್ಲಿ ಕೂತಿರಲಿಲ್ಲ. ಅದನ್ನು ಹಾಗೆಯೇ ಖಾಲಿಬಿಟ್ಟು ಮುಂದೆ ಫೋಟೋ ಇಟ್ಟುಕೊಂಡು ಸಭೆ ನಡೆಸಿದರು. ಜಯಲಲಿತಾ ಅವರು ಜೈಲಿನಲ್ಲಿ ಮುದ್ದೆ ಉಣ್ಣುತ್ತಿದ್ದಾಗಲೂ ಪನ್ನೀರ್ಸೆಲ್ವಂ ಅವರು ಮುಖ್ಯಮಂತ್ರಿಯ ಕುರ್ಚಿಯನ್ನು ಅಲಂಕರಿಸಿರಲಿಲ್ಲ.