ಮೀಸಲಾತಿ ಶೇ. 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ - ಸಿದ್ದರಾಮಯ್ಯ
ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷಾ ವರದಿ ಬಂದ ನಂತರ ಅದರ ಆಧಾರದ ಮೇಲೆ ಈಗಿರುವ ಮೀಸಲಾತಿಯನ್ನು ಶೇ. 50 ರಿಂದ 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು, ಮೇ 19: ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷಾ ವರದಿ (ಜಾತಿ ಗಣತಿ) ಬಂದ ನಂತರ ಅದರ ಆಧಾರದ ಮೇಲೆ ಈಗಿರುವ ಮೀಸಲಾತಿಯನ್ನು ಶೇ. 50 ರಿಂದ 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ನಗರದ ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಜೊತೆ ಮಾಧ್ಯಮದವರ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, "ಸರ್ವರನ್ನೂ ಒಳಗೊಂಡ ಬೆಳವಣಿಗೆ ನಮ್ಮ ಸರ್ಕಾರದ ಉದ್ದೇಶ. ನಮ್ಮ ಸರ್ಕಾರದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವಲೋಕಿಸಿದರೆ ಹಿಂದಿನ ಸರ್ಕಾರಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ಒದಗಿಸಿದ್ದೇವೆ," ಎಂದು ತಿಳಿಸಿದರು.[ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ]
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5.00 ಲಕ್ಷ ರೂ. ಪರಿಹಾರ ಹಾಗೂ ಹೆಂಡತಿಗೆ 2,000/- ರೂ. ತಿಂಗಳ ಪಿಂಚಣಿ ಮತ್ತು ಮಕ್ಕಳಿಗೆ ಉಚಿತ ಶಿಕ್ಷಣದಂತ ಸೌಲಭ್ಯ ನೀಡಿದ ದೇಶದ ಏಕೈಕ ಸರ್ಕಾರ ನಮ್ಮದು. ರಾಜ್ಯದಲ್ಲಿ ಭೀಕರ ಬರ ಇದ್ದರೂ ಹಳ್ಳಿಗಳಲ್ಲಿ ಜನರು ಗುಳೆ ಹೋಗುವುದು ಕಡಿಮೆಯಾಗಿದೆ. ಅದಕ್ಕೆ ಅನ್ನಭಾಗ್ಯ ಯೋಜನೆ ಕಾರಣ ಎಂದು ಅವರು ಹೇಳಿದರು.
ಬೆಂಗಳೂರು ನಗರಕ್ಕೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರು ಹಾಗೂ ಮೂಲ ಸೌಲಭ್ಯ ಒದಗಿಸಲಾಗಿದೆ. ಹಾರೋಹಳ್ಳಿಯಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಕೈಗಾರಿಕಾ ವಲಯ ಸ್ಥಾಪಿಸಲಾಗಿದೆ. ಈ ನಾಲ್ಕು ವರ್ಷಗಳ ಸರ್ಕಾರದ ಸಾಧನೆಗಳನ್ನು ಹಾಗೂ ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಹಾಗೂ ನಡೆಯುತ್ತೇವೆ ಎಂದರು.
ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳ ವಿರೋಧಿಯಲ್ಲ. ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನಿವಾರ್ಯವಾಗಿ ನಿರಾಕರಿಸುವಂತಿಲ್ಲ. ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬುದು ಹೆತ್ತವರ ಆಯ್ಕೆಗೆ ಬಿಟ್ಟಿದ್ದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು.
ಸಂವಾದದಲ್ಲಿ ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿಯವರು ಉತ್ತರಿಸಿದರು. ಪ್ರೆಸ್ಕ್ಲಬ್ನ ಅಧ್ಯಕ್ಷ ಸದಾಶಿವ ಶಣೈ ಹಾಗೂ ಇತರ ಪದಾಧಿಕಾರಿಗಳು ಸೇರಿದಂತೆ ಹಲವು ಪತ್ರಕರ್ತರ ಒಕ್ಕೂಟದ ಸದಸ್ಯರು ಸಂವಾದದಲ್ಲಿ ಭಾಗವಹಿಸಿದ್ದರು.