'ರಿಯಲ್ ಸ್ಟಾರ್' ಉಪೇಂದ್ರ ರಾಜಕೀಯ ಎಂಟ್ರಿ ನಿಜವೇ?
ಬೆಂಗಳೂರು, ಆಗಸ್ಟ್ 11: ರಿಯಲ್ ಸ್ಟಾರ್ ಉಪೇಂದ್ರ ಅವರು ರೈತ ಎಂದೆನಿಸಿ ಹೆಗಲ ಮೇಲೆ ಟವೆಲ್ ಹಾಕಿಕೊಂಡ ಬಳಿಕ ಈಗ ತಲೆ ಮೇಲೆ ಟೋಪಿ ಇಟ್ಟುಕೊಂಡು ಸಕ್ರಿಯ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಈ ಬಗ್ಗೆ ಈಗಾಗಲೇ ಸುದ್ದಿ ಅಲ್ಲಲ್ಲಿ ಬಂದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಈ ಸುದ್ದಿ ನಿಜವೇ? ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.
ಸೂಪರ್ ಚಿತ್ರ ಸೂಪರ್ ಹಿಟ್ ಆದ ಬಳಿಕವೇ ಉಪ್ಪಿ ಅವರು ಪಾಲಿಟಿಕ್ಸ್ ಗೆ ಎಂಟ್ರಿಕೊಡುತ್ತಾರೆ ಎಂದು ದಟ್ಟವಾಗಿ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಉತ್ತರಿಸಿದ್ದ ಉಪೇಂದ್ರ, ನಾನ್ಯಾಕೆ ರಾಜಕೀಯ ಪ್ರವೇಶಿಸಬಾರದು. ನಾನು ಕೂಡಾ ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ. ಆದರೆ, ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ. ಕಾರಣ, ಯಾವ ಪಕ್ಷದವರೂ ನನಗೆ ಆಹ್ವಾನ ನೀಡಿಲ್ಲ ಎಂದಿದ್ದರು.
ನೋಡಿ, ಭವಿಷ್ಯದ ಬಗ್ಗೆ ಕನಸು ಕಾಣಬಹುದು, ಯೋಜನೆ ಹಾಕಿಕೊಳ್ಳಬಹುದು ಆದರೆ, ಅದೆಲ್ಲವೂ ಅವನ(ದೇವರು) ಕೈಲಿದೆ. ಜವಾಬ್ದಾರಿ ಹೊತ್ತು ಮುನ್ನಡೆಯುವಂತೆ ಅವನು ಸೂಚಿಸಿದರೆ, ಹಿಂಜರಿಯದೆ ಮುನ್ನುಗ್ಗುತ್ತಿರಬೇಕು ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.
ವಿಷನ್ 2030: ಪ್ರಧಾನಿ ಮೋದಿ ಅವರು ವಿಷನ್ 2020ಯನ್ನು ಹೋಲುವ ಅಥವಾ ಅದಕ್ಕಿಂತ ನೂರು ಪಟ್ಟು ಉತ್ತಮವಾಗಿರುವ ಯೋಜನೆಗಳುಳ್ಳ ಉಪೇಂದ್ರ ಅವರ ವಿಷನ್ 2030 ಬಗ್ಗೆ ಪ್ರೇಕ್ಷಕರಿಗೆ ಈಗಾಗಲೇ ಸೂಪರ್ ಚಿತ್ರದ ಮೂಲಕ ಸಣ್ಣ ಝಲಕ್ ಸಿಕ್ಕಿದೆ.
ಪ್ರತಿಯೊಬ್ಬರ ಆಂತರ್ಯದಲ್ಲಿ ಒಂದು ಕಿಡಿ ಇರುತ್ತದೆ. ಅದು ಕಿಡಿಯಾಗಿ, ಬೆಳಕಾಗಿ ಮಾರ್ಗ ತೋರುವಂತಾದರೆ ಎಲ್ಲಾ ಯೋಜನೆಗಳು ಸಾಧ್ಯವಾಗಲಿದೆ ಎಂದು ಉಪೇಂದ್ರ ಹೇಳಿದ್ದಾರೆ. ನಾಳೆ ಸುದ್ದಿಗೋಷ್ಠಿಯಲ್ಲಿ ಏನೇನು ಹೇಳುತ್ತಾರೋ ಕಾದು ನೋಡೋಣ...