ಚಾಮರಾಜಪೇಟೆ ವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಎಸಿಬಿ ಬಲೆಗೆ
ಸರಕು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮಾಲೀಕರಿಂದ 47 ಸಾವಿರ ರು ಲಂಚ ಪಡೆಯುತ್ತಿದ್ದ ಚಾಮರಾಜಪೇಟೆ ವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು, ನವೆಂಬರ್. 06: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಚಾಮರಾಜಪೇಟೆ ವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಅವರು ಸರಕುಗಳ ಸಾಗಾಣಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 47,000 ರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ನಗರದ ಸರಕು ಸಾಗಣೆ ವಾಹನದಲ್ಲಿ ಸಾಗಣೆಯಾಗುತ್ತಿದ್ದ ವಾಣಿಜ್ಯ ಸರಕನ್ನು ತಪಾಸಣೆಗೊಳಪಡಿಸುವ ಉದ್ದೇಶದಿಂದ 12-10-2016 ರಂದು ಒಂದು ಸರಕು ಸಾಗಣೆ ಮಾಡುತ್ತಿದ್ದ ವಾಹನವನ್ನು ಚಾಮರಾಜಪೇಟೆ ವೃತ್ತದ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ತಡೆಹಿಡಿದಿದ್ದರು.[ಅಬ್ಬಾ..! ಎಸಿಬಿ ದಾಳಿಯಲ್ಲಿ ಸಿಕ್ಕಿದ್ದು ಮನೆ ತುಂಬ ಬೆಳ್ಳಿ, ಬಂಗಾರ!]
21-10-2016 ರಂದು ಈ ವಾಹನದಲ್ಲಿದ್ದ ವಾಣಿಜ್ಯ ಸರಕನ್ನು ತಪಾಸಣೆಗೊಳಪಡಿಸಿ, ಸರಕುಪಟ್ಟಿಗೂ ಹಾಗೂ ವಾಹನದಲ್ಲಿದ್ದ ಸರಕುಗಳಿಗೂ ವ್ಯತ್ಯಾಸ ಕಂಡುಬಂದ ಕಾರಣ ಈ ವಾಹನದ ವಿರುದ್ಧ 1,17,000 ರು ದಂಡವನ್ನು ವಿಧಿಸಿದ್ದಾರೆ.
ಇಂತಹ ನಿಯಮ ಪಾಲಿಸದ ಸರಕುಗಳ ಸಾಗಾಣಿಕೆ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿರುವ ಸರಕು ಸಾಗಾಣಿಕೆ ವಾಹನದ ಮಾಲೀಕರ ವಿರುದ್ಧ ವಾಣಿಜ್ಯ ತೆರಿಗೆ ಅಧಿಕಾರಿಯು ನಿಯಮಾನುಸಾರ ಕೆ-ನೋಟಿಸ್ ನ್ನು ನೀಡಿ ನಿಯಮ ಉಲ್ಲಂಘಿಸಿದವರಿಂದ ಸಮಜಾಯಿಷಿಯನ್ನು ಪಡೆದು ದಂಡಾದೇಶವನ್ನು ನೀಡಬೇಕಾಗಿರುತ್ತದೆ.
ಆದರೆ ಈ ಪ್ರಕರಣದಲ್ಲಿ ಕೆ- ನೋಟೀಸನ್ನು ನೀಡಲು 20,000 ರುಗಳ ಲಂಚವನ್ನು ನೀಡುವಂತೆ ವಾಹನ ಮಾಲೀಕರಿಗೆ ಒತ್ತಾಯಿಸಿ ಮುಂಗಡವಾಗಿ 3,000 ರುಗಳ ಲಂಚದ ಹಣವನ್ನು ಪಡೆದುಕೊಂಡಿದ್ದಾರೆ.
ಇನ್ನುಳಿದ ಹಣವನ್ನು ನೀಡಲು ಮಾಲೀಕರು ವಿಳಂಭ ಮಾಡಿದ್ದಾರೆ. ಇದರಿಂದ ಅದೇ ಮಾಲೀಕರಿಗೆ ಸೇರಿದ ಮತ್ತೊಂದು ವಾಹನವನ್ನು ಜಪ್ತಿ ಮಾಡಿ ಮೊದಲ ಪ್ರಕರಣದ ಹಣ ಹಾಗೂ ಈ ಎರಡನೇ ಪ್ರಕರಣದ ಹಣ ಸೇರಿ ಒಟ್ಟು 47 ಸಾವಿರ ರುಗಳನ್ನು ನೀಡುವಂತೆ ವಾಹನ ಮಾಲೀಕರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಾಹನದ ಮಾಲೀಕರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದು. ಓಂಕಾರಪ್ಪ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಅವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳದ ಪ್ರಕಟಣೆ ತಿಳಿಸಿದೆ.