'ಇಲ್ಲಿ ನೂರು ಕೋಟಿ, ಅಲ್ಲಿನ 70 ಕೋಟಿ ಜನಾ ರೆಡ್ಡಿಯದೇ'
ಬೆಂಗಳೂರು, ಡಿಸೆಂಬರ್ 10: ಮಂಡ್ಯದ ಮದ್ದೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರಮೇಶ್ ಎಂಬ ಚಾಲಕ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ವಿರುದ್ಧ ಜನಾರ್ದನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ಬದಲಿಸಿಕೊಟ್ಟಿದ್ದಾರೆ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಆದರೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಜನಾರ್ದನ ರೆಡ್ಡಿ ಮಗಳ ಮದುವೆ ವಿಚಾರದಲ್ಲಿ ಹಣ ಹೇಗೆ ಬಂತು ಎಂಬ ಒಂದೊಂದೇ ಸಂಗತಿ ಬಯಲಾಗುತ್ತಿದೆ. ಭೀಮಾ ನಾಯ್ಕ್ ಎಂಬ ಅಧಿಕಾರಿ ಜನಾರ್ದನ ರೆಡ್ಡಿಗೆ ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಟ್ಟಿದ್ದರು. ಬದಲಿಗೆ ಭೀಮಾ ನಾಯ್ಕ್ ಮುಂದಿನ 2018 ಚುನಾವಣೆಯಲ್ಲಿ ಸ್ಪರ್ಧಿಸಲು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಗೂ ಹಣದ ಶೇಕಡಾ 20 ಪಾಲನ್ನು ಕೇಳಿದ್ದರು ಎಂದು ಡೆತ್ ನೋಟ್ ನಲ್ಲಿ ರಮೇಶ್ ತಿಳಿಸಿದ್ದಾರೆ.[ರಮೇಶ್ ಗೌಡ ಬರೆದ ಡೆತ್ ನೋಟ್ ನಲ್ಲಿ ಏನಿದೆ?]
ತಮಗಿದ್ದ ಜೀವಬೆದರಿಕೆ ಹಾಗೂ ಸಂಬಳ ನೀಡದೆ ಸತಾಯಿಸುತ್ತಿದ್ದರು ಎಂದು ಆ ಚಾಲಕ ತಿಳಿಸಿದ್ದು, ಪ್ರತಿಯೊಂದು ವ್ಯವಹಾರದ ದಿನಾಂಕ, ಜಾಗ ಹಾಗೂ ಬಳಸಿದ್ದ ಕಾರಿನ ನಂಬರ್ ಕೂಡ ನಮೂದಿಸಿದ್ದಾರೆ. ಇದರಿಂದ ಈ ಪತ್ರದಲ್ಲಿ ಸತ್ಯ ಅದೆಷ್ಟು ಕರಾರುವಾಕ್ ಆಗಿದೆ ಎಂಬುದು ತಿಳಿಯುತ್ತದೆ ಎಂದು ಪಕ್ಷವು ಆರೋಪಿಸಿದೆ.[ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್!]
ಇನ್ನು ಚೆನ್ನೈನಲ್ಲಿ ನಡೆದ ಆದಾಯ ತೆರಿಗೆ ದಾಳಿ ವೇಳೆ ಸಿಕ್ಕಿಬಿದ್ದ ಶೇಖರ್ ರೆಡ್ಡಿ ಮನೆಯಲ್ಲಿ ಪತ್ತೆಯಾದ 70 ಕೋಟಿಗೂ ಹೆಚ್ಚು ಹೊಸ ನೋಟುಗಳು ಕೂಡ ಜನಾರ್ದನ ನ ರೆಡ್ಡಿಗೆ ಸೇರಿರಬಹುದು ಎಂಬ ಬಲವಾದ ಸಂಶಯವನ್ನು ಆಮ್ ಆದ್ಮಿ ಪಾರ್ಟಿ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಕೂಲಂಕಷ ತನಿಖೆ ನಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.