'ಮೇಟಿ ರಕ್ಷಿಸಿದ ಸಿದ್ದರಾಮಯ್ಯ, ಪರಂ ರಾಜೀನಾಮೆ ನೀಡಲಿ'
ಮೇಟಿಯವರನ್ನು ಈವರೆಗೂ ರಕ್ಷಿಸುತ್ತಾ ಬಂದಿರುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾದ ಜಿ.ಪರಮೇಶ್ವರ್ ಈ ಕೂಡಲೇ ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು, ಅವರಿಗೆ ನೈತಿಕತೆಯಿದ್ದರೆ ರಾಜೀನಾಮೆ ನೀಡಬೇಕೆಂದು ಎಎಪಿ ಆಗ್ರಹಿಸುತ್ತಿದೆ
ಬೆಂಗಳೂರು, ಡಿಸೆಂಬರ್ 14: ರಾಸಲೀಲೆ ಪ್ರಕರಣದಲ್ಲಿ ಎಚ್.ವೈ ಮೇಟಿಯವರನ್ನು ಈವರೆಗೂ ರಕ್ಷಿಸುತ್ತಾ ಬಂದಿರುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾದ ಜಿ.ಪರಮೇಶ್ವರ್ ಈ ಕೂಡಲೇ ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು, ಅವರಿಗೆ ನೈತಿಕತೆಯಿದ್ದರೆ ಈ ಕೂಡಲೇ ತಮ್ಮ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.
ಬಿಜೆಪಿಯ ಬೃಹ್ಮಾಂಡ ಭ್ರಷ್ಟಾಚಾರ ಹಾಗೂ ಸೆಕ್ಸ್ ಹಗರಣಗಳಿಂದ ಬೇಸೆತ್ತಿದ್ದ ರಾಜ್ಯದ ಜನ, ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದರು. ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಭ್ರಷ್ಟಾಚಾರ ಪ್ರಕರಣಗಳು ಕಾಂಗ್ರೆಸ್ ಮಂತ್ರಿಗಳ ವಿರುದ್ಧ ಕೇಳಿಬರುತ್ತಿತ್ತು, ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಬಕಾರಿ ಸಚಿವ ಎಚ್.ವೈ ಮೇಟಿ ರಾಸಲೀಲೆ ಪ್ರಕರಣದಿಂದ, ಹಿಂದಿನ ಬಿಜೆಪಿ ಹಾಗೂ ಸದ್ಯದ ಕಾಂಗ್ರೆಸ್ ಸರ್ಕಾರದ ನಡುವೆ ಯಾವುದೇ ವ್ಯತ್ಯಾಸ ಉಳಿದಿಲ್ಲ.[ಎಚ್ ವೈ ಮೇಟಿ ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ]
ಮೂರ್ನಾಲ್ಕು ವರ್ಷಗಳ ಹಿಂದೆ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಸಿ.ಸಿ ಪಾಟೀಲ್, ಲಕ್ಷಣ್ ಸವದಿ, ಕೃಷ್ಣಾ ಪಾಲೇಮಾರ್, ರಾಮದಾಸ್ ನಂತಹ ಬಿಜೆಪಿ ನಾಯಕರ ಕೃತ್ಯಗಳಿಂದಾಗಿ ಇಡೀ ದೇಶದ ಮುಂದೆ ಕರ್ನಾಟಕದ ಹೆಸರು ಹಾಳಾಗಿತ್ತು, ಇದನ್ನು ಸರಿ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಕೂಡ ತನ್ವೀರ್ ಸೇಠ್, ಹೆಚ್.ವೈ ಮೇಟಿರಂಥ ಜನರರನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಟ್ಟು ರಾಜ್ಯಕ್ಕೆ ಅಪಮಾನವನ್ನುಂಟು ಮಾಡುತ್ತಿದೆ.[ಈ ಪ್ರಕರಣದಲ್ಲಿ ನನ್ನದ್ದೇನೂ ತಪ್ಪಿಲ್ಲ : ಎಚ್ ವೈ ಮೇಟಿ]
ಅಸಹ್ಯಕರ ರೀತಿಯಲ್ಲಿರುವ ಎಚ್.ವೈ ಮೇಟಿಯವರ ರಾಸಲೀಲೆ ಸಿಡಿ ಇಂದು ಸಾರ್ವಜನಿಕವಾಗಿದ್ದು, ಇಡೀ ದೇಶದ ಮುಂದೆ, ರಾಜ್ಯದ ಜನರ ಮಾನವನ್ನು ಹರಾಜು ಹಾಕಿದಂತಿದೆ. ಇದುವರೆಗೂ ಈ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ ರಾಜ್ಯದ ಗೃಹ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳೂ ಸಹ ಹೆಚ್.ವೈ ಮೇಟಿ ಮೇಲೆ ಕ್ರಮ ಜರುಗಿಸುವುದನ್ನು ಬಿಟ್ಟು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದರು.
ಆದರೂ ಈಗ ಸಿಡಿ ಬಿಡುಗಡೆಯಾದ ನಂತರ, ಕೇವಲ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದು ಮಹಾನ್ ಕಾರ್ಯ ಮಾಡಿರುವಂತೆ ಬೀಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಗೃಹ ಸಚಿವರು ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಆಗಿರುವ ಜಿ.ಪರಮೇಶ್ವರ್ ರವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆಯಿದ್ದರೆ, ಈ ಕೂಡಲೇ ಹೆಚ್.ವೈ ಮೇಟಿಯವರನ್ನು ಶಾಸಕ ಸ್ಥಾನದಿಂದಲೇ ವಜಾ ಮಾಡಿ ಅವರನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.