ಅಮೀರ್ ಖಾನ್ ಒಬ್ಬ ಹೇಡಿ : ಬೆಂಗಳೂರಿನ ಇಮಾಮ್
ಬೆಂಗಳೂರು, ನವೆಂಬರ್ 25 : "ಮುಸ್ಲಿಂರಿಗೆ ಭಾರತ ಅತ್ಯಂತ ಸುರಕ್ಷಿತವಾದ ರಾಷ್ಟ್ರ. ದೇಶದಲ್ಲಿ ಖಂಡಿತ ಸಮಸ್ಯೆಗಳಿವೆ. ಈ ಸಮಸ್ಯೆಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವುದಿಲ್ಲ. ಸಮಸ್ಯೆಗಳಿದ್ದರೆ ಅವನ್ನು ಧೈರ್ಯವಾಗಿ ಎದುರಿಸಬೇಕು. ದೇಶ ಬಿಟ್ಟು ಹೋಗುವುದು ಸಮಸ್ಯೆಗಳಿಗೆ ಪರಿಹಾರವಲ್ಲ!"
'ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ಮಕ್ಕಳ ಸುರಕ್ಷತೆಗಾಗಿ ದೇಶ ಬಿಟ್ಟುಹೋದರೆ ಹೇಗೆ' ಎಂದು ಖ್ಯಾತ ಹಿಂದಿ ಚಿತ್ರನಟ ಅಮೀರ್ ಖಾನ್ ಆಡಿರುವ ಮಾತಿಗೆ ಬೆಂಗಳೂರಿನ ಜಾಮಿಯಾ ಮಸೀದಿಯ ಇಮಾಮ್ ಮೊಹಮ್ಮದ್ ಮಕ್ಸೂದ್ ಇಮ್ರಾನ್ ತಿರುಗೇಟು ನೀಡಿರುವುದು ಹೀಗೆ.
ಮಂಗಳವಾರ ಒನ್ಇಂಡಿಯಾ ಜೊತೆ ಮಾತನಾಡುತ್ತಿದ್ದ ಇಮ್ರಾನ್ ಅವರು, ಇದು ಅಮೀರ್ ಅವರ ದೇಶ ಕೂಡ. ಇಲ್ಲಿಯೇ ಅವರು ಹುಟ್ಟಿ ಬೆಳೆದಿದ್ದಾರೆ. ಭಾರತದಿಂದಾಗಿಯೇ ಅವರು ಈ ಸ್ಥಿತಿಗೆ ತಲುಪಿದ್ದಾರೆ. ಸಮಸ್ಯೆ ಇದ್ದರೆ ಭಾರತೀಯನಾಗಿಯೇ ಅವರು ಅದನ್ನು ಎದುರಿಸಬೇಕು ಎಂದಿದ್ದಾರೆ. ಅಲ್ಲದೆ, ಈ ಮಾತುಗಳನ್ನಾಡುವ ಅವಶ್ಯಕತೆಯಾದರೂ ಇತ್ತಾ ಎಂದೂ ಪ್ರಶ್ನಿಸಿದ್ದಾರೆ. [ಎಲ್ಲಿಯ ಕಿರಣ್, ಎಲ್ಲಿಯ ಅಮೀರ್, ಎಲ್ಲಿಯ ಶಾಶ್ವತಿ]
ಭಾರತವನ್ನು ರಕ್ಷಿಸುವ ಕರ್ತವ್ಯ ಎಲ್ಲ ಭಾರತೀಯನದ್ದು. ಭಾರತದ ಇತಿಹಾಸದೊಂದಿಗೆ ಮುಸ್ಲಿಂರು ಬೆರೆತುಹೋಗಿದ್ದೇವೆ. ಇತಿಹಾಸವನ್ನೇ ಬದಲಿಸಬೇಕೆಂದು ಕೆಲ ಅಲ್ಪಸಂಖ್ಯಾತರು ಮಾತಾಡುತ್ತಿದ್ದಾರೆ. ದೇಶದ ರಕ್ಷಣೆಗಾಗಿ ರಕ್ತ ಹರಿಸುವಂಥ ಪ್ರಸಂಗ ಬಂದರೂ ನಾವು ಅದಕ್ಕೆ ಸಿದ್ಧರಾಗಿರಬೇಕು ಎಂದು ಇಮ್ರಾನ್ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ಅಭಿಪ್ರಾಯ ಮಂಡಿಸುವಾಗ ಅಮೀರ್ ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕಿತ್ತು. ಅವರು ಪ್ರಖ್ಯಾತ ನಟರು. ಅಂಥವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಚಿತ್ತ ಹರಿಸಬೇಕು. ಅದು ಬಿಟ್ಟು ಓಡಿ ಹೋಗುವ ಮಾತಾಡುವುದು ಹೇಡಿತನ ಎಂದು ಇಮಾಮ್ ಅಮೀರ್ ವಿರುದ್ಧ ಕೆಂಡ ಕಾರಿದರು. [ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]
ಅಮೀರ್ ಆಡಿರುವಂಥ ಮಾತುಗಳು ದೇಶವನ್ನು ಇಬ್ಭಾಗ ಮಾಡುವಂಥವು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಅದು ಬೇಕಿಲ್ಲ. ಕೆಲವರು ದೇಶದ ಒಗ್ಗಟ್ಟು ಮತ್ತು ಶಾಂತಿ ಕದಡಲು ಕಾಯುತ್ತಲೇ ಇರುತ್ತಾರೆ. ಆದರೆ, ಜವಾಬ್ದಾರಿಯುತ ನಾಗರಿಕರಾಗಿ ಶಾಂತಿ ಕದಡದಂತೆ ನಾವು ಕಾಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೊಹಮ್ಮದ್ ಮಕ್ಸೂದ್ ಇಮ್ರಾನ್ ಯಾರು?
ದೇಶದಲ್ಲಿ ಐಎಸ್ಐಎಸ್ ನಿಂದ ದಾಳಿಗಳಾಗುತ್ತಿರುವಾಗ ಈ ಉಗ್ರ ಸಂಘಟನೆಯನ್ನು ನಿಗ್ರಹಿಸುವ ಬಗೆಯನ್ನು ಕರ್ನಾಟಕದಲ್ಲಿ ಮೊದಲು ಅರುಹಿದವರೇ ಮೊಹಮ್ಮದ್ ಮಕ್ಸೂದ್ ಇಮ್ರಾನ್. ಐಸಿಸ್ನ ಹುನ್ನಾರಗಳ ಬಗ್ಗೆ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಉಪನ್ಯಾಸ ನೀಡಲಾಗುತ್ತಿದೆ. ಐಸಿಸ್ ಇಸ್ಲಾಂ ಬದಲು ಹಿಂಸಾಚಾರ ಬಿತ್ತರಿಸುತ್ತಿದೆ ಎಂಬುದು ಅವರ ವಾದ.
ಇಮ್ರಾನ್ ಅವರ ಈ ಯೋಜನೆಗೆ ಕರ್ನಾಟಕದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇಸ್ಲಾಂ ಧರ್ಮ ಹಿಂಸಾಚಾರವನ್ನು ಬೋಧಿಸುವುದಿಲ್ಲ. ಆದರೆ ಇದನ್ನು ಮಾಡುತ್ತಿರುವ ಐಸಿಸ್ ಇಸ್ಲಾಂ ವಿರೋಧಿ ಎಂಬ ಸಂದೇಶವಿರುವ ಉಪನ್ಯಾಸಗಳನ್ನು ಸಿಡಿ ಮಾಡಿ ಯುವ ಮುಸ್ಲಿಂರಿಗೆ ಕರ್ನಾಟಕದ ಮಸೀದಿಗಳಲ್ಲಿ ನೀಡಲಾಗುತ್ತಿದೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]