ತಾನು ತೋಡಿದ ಬಲೆಗೆ ತಾನೇ ಬಿದ್ದ ಈ 'ಶ್ರೀಮಂತ್'
ಮಹಿಳೆಯೊಬ್ಬರಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಶ್ರೀಮಂತ್ ಎಂಬ ಯುವಕ ತಾನು ತೋಡಿದ ಬಲೆಗೆ ತಾನೇ ಬಿದ್ದಿದ್ದಾನೆ!
ಬೆಂಗಳೂರು, ಮಾರ್ಚ್ 20: ಮಹಿಳೆಯೊಬ್ಬರಿಗೆ ಪದೇ ಪದೇ ಫೊನ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದ 22 ವರ್ಷದ ಎನ್. ಶ್ರೀಮಂತ್ ಎಂಬ ಯುವಕನನ್ನು ಬೆಂಗಳೂರಿನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಯಾರಿಗೋ ಫೋನ್ ಮಾಡುವುದಕ್ಕೆ ಹೋಗಿ ನಂಬರ್ ತಪ್ಪಿ, ಈತನ ಮೊಬೈಲ್ ಸಂಖ್ಯೆಗೆ ಮಹಿಳೆ ಫೋನ್ ಮಾಡಿದ್ದಾರೆ. ರಾಂಗ್ ನಂಬರ್ ಎಂಬುದು ತಿಳಿಯುತ್ತಿದ್ದಂತೆಯೇ ಸುಮ್ಮನಾಗಿದ್ದಾರೆ. ಆದರೆ ಆ ಯುವಕ ಮಹಿಳೆಯ ನಂಬರ್ ಅನ್ನು ಸೇವ್ ಮಾಡಿಕೊಂಡು ಪ್ರತಿ ದಿನ ಆಕೆಗೆ ಫೋನ್ ಮಾಡುತ್ತಿದ್ದ. ರಾತ್ರಿ - ಹಗಲು ಎನ್ನದೆ ಯಾವ್ಯಾವುದೋ ಸಮಯದಲ್ಲಿ ಫೋನ್ ಮಾಡಿ ಅಸಭ್ಯವಾಗಿ ಮಾತನಾಡುವುದಲ್ಲದೆ, ಲೈಂಗಿಕ ಆಸೆಯನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದ.[ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!]
ಮೊದ ಮೊದಲು ಈತನನ್ನು ನಿರ್ಲಕ್ಷ್ಯಿಸಿ ಸುಮ್ಮನಾದರೂ ಕ್ರಮೇಣ ಈತನ ಅಸಭ್ಯ ಮಾತುಗಳು ಹೆಚ್ಚುತ್ತಿದ್ದಂತೆ ಗಾಬರಿಯಾದ ಮಹಿಳೆ ಪತಿಗೆ ವಿಷಯ ತಿಳಿಸಿದರು. ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ನೀಡಿದರು. ಪೀಣ್ಯದ ಪೊಲೀಸರ ಉಪಾಯದ ಮೇರೆಗೆ 'ನಿನ್ನ ಬೇಡಿಕೆಗೆ ನಾನು ಒಪ್ಪಿಕೊಂಡಿದ್ದೇನೆ, ನಾಳೆ ಬೆಳಗ್ಗೆ ಪೀಣ್ಯದ ಎಂಟನೇ ಮೈಲಿಯ ಬಳಿ ಬಂದಿರುತ್ತೇನೆ, ಭೇಟಿಯಾಗೋಣ' ಎಂದು ಮಹಿಳೆ ಶ್ರೀಮಂತ್ ಬಳಿ ಹೇಳಿದ್ದಾಳೆ.
ಆಕೆಯ ಮಾತನ್ನು ನಂಬಿದ ಶ್ರೀಮಂತ್ ಇಂದು ಬೆಳಗ್ಗೆ ಎಂಟನೇ ಮೈಲಿ ಬಳಿ ಬಂದಿದ್ದಾನೆ. ಮೊದಲೇ ಅಲ್ಲಿಗೆ ಬಂದು ಆರೋಪಿಗಾಗಿ ಕಾಯುತ್ತಿದ್ದ ಪೊಲೀಸರು ಶ್ರೀಮಂತ್ ನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ತಾನು ತೋಡಿದ ಬಲೆಯೊಳಗೆ ಶ್ರೀಮಂತ್ ತಾನೇ ಸಿಕ್ಕಿಹಾಕಿಕೊಂಡಿದ್ದಾನೆ!