ಹಂದಿಜ್ವರ ರೋಗಿಯ ಪ್ರಾಣ ತೆಗೆದ ಕರೆಂಟ್ ಕಣ್ಣಾಮುಚ್ಚಾಲೆ?
ಬೆಂಗಳೂರು, ಮಾ. 1 : ಎಚ್ 1 ಎನ್ 1 ನಿಂದ ಬಳಲುತ್ತಿದ್ದ ಬೆಂಗಳೂರು ಬಾಪೂಜಿ ನಗರ ನಿವಾಸಿ ಗಣೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ರೋಗಿಯ ಸಾವಿಗೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಪತ್ನಿ ಉಮಾ ಗಂಭೀರ ಆರೋಪ ಮಾಡಿದ್ದಾರೆ.
ಎಚ್ 1 ಎನ್ 1 ನಿಂದ ಬಳಲುತ್ತಿದ್ದ ಗಣೇಶ್ ಕಳೆದ 9 ದಿನಗಳ ಹಿಂದೆ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶನಿವಾರ ರಾತ್ರಿ ಐಸಿಯು ನಲ್ಲಿದ್ದಾಗಲೇ ಮೃತಪಟ್ಟಿದ್ದಾರೆ.[ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]
ರಾತ್ರಿ ವಿದ್ಯುತ್ ನಿಲುಗಡೆಯಾಗಿದ್ದು ಸಮಸ್ಯೆಯಾಗಿ ಪರಿಣಮಿಸಿದೆ. ಕೂಡಲೇ ಗಣೇಶ್ ಅವರಿಗೆ ಉಸಿರಾಟದ ತೊಂದರೆ ಆರಂಭವಾಗಿದೆ, ಗಣೇಶ್ ಪತ್ನಿ ಉಮಾ ಜನರೇಟರ್ ಹಾಕುವಂತೆ ವೈದ್ಯರು ಮತ್ತು ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ. ಆದರೆ ಯಾರೂ ಜನರೇಟರ್ ಆನ್ ಮಾಡಿಲ್ಲ. ಪರಿಣಾಮ ಉಸಿರಾಟದ ತೊಂದರೆಯಿಂದ ಗಣೇಶ್ ಮೃತಪಟ್ಟಿದ್ದಾರೆ.
ಗಣೇಶ್ ಸಾವಿಗೆ ವೈದ್ಯರು ಮತ್ತು ಸಿಬ್ಬಂದಿಯೇ ನೇರ ಹೊಣೆಗಾರಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಗೆ ರೋಗಿಗಳ ಮೇಲೆ ಮಾನವೀಯತೆಯೇ ಇಲ್ಲ. ಸಂಬಂಧಿಸಿದವರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.[ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?]
ಶನಿವಾರ ರಾತ್ರಿ ವಿದ್ಯುತ್ ಸಮಸ್ಯೆಯಾಗಿದ್ದು ನಿಜ. ಆದರೆ ಆಸ್ಪತ್ರೆಯಲ್ಲಿ ಸಕಲ ಪರ್ಯಾಯ ವ್ಯವಸ್ಥೆಗಳಿವೆ. ರೋಗಿ ಸಾವಿಗೂ ವಿದ್ಯುತ್ ನಿಲುಗಡೆಗೂ ಯಾವುದೇ ಸಂಬಂಧವಿಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಕಲ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.