ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಫಾದರ್ ಚಸರಾ ನಿಧನ
ಬೆಂಗಳೂರು,ಮಾರ್ಚ್,16: ಕಳೆದ ಮೂರು ದಶಕಗಳಿಂದಲೂ ಕನ್ನಡಪರ ಮತ್ತು ಕನ್ನಡ ಕ್ರೈಸ್ತ ಹೋರಾಟಗಳಲ್ಲಿ, ಜನಪರ ಚಳವಳಿಗಳಲ್ಲಿ ಭಾಗಿಯಾಗಿದ್ದ, ಲೇಖಕ ಫಾದರ್ ಚಸರಾ ಬುಧವಾರ ಮುಂಜಾನೆ ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗೋಕಾಕ್ ಚಳವಳಿ, ಕನ್ನಡ ಕ್ರೈಸ್ತ ಚಳವಳಿ ಮೊದಲಾದ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಬೈಬಲ್ ಇತಿಹಾಸ ಮತ್ತು ಬೈಬಲ್ ಅನ್ನು ಕನ್ನಡಕ್ಕೆ ಭಾಷಾಂತರಿಸುವಲ್ಲಿ ಫಾ. ಚಸರಾ ಪ್ರಮುಖ ಪಾತ್ರ ವಹಿಸಿದ್ದರು.[ಕ್ರಿಶ್ಚಿಯನ್ನರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!]
'ಅದುಮಿಟ್ಟ ನೆನಪಿನ ಪುಟಗಳು', 'ಮತಾಂತರ ಸತ್ಯಾನ್ವೇಷಣೆ' ಎಂಬ ಮೌಲಿಕ ಕೃತಿಗಳನ್ನು ರಚಿಸಿದ ಇವರು ಉತ್ತಮ ಸಂಗೀತ ಸಂಯೋಜಕರಾಗಿ ಸಾವಿರಾರು ಕ್ರೈಸ್ತ ಗೀತೆಗಳನ್ನು ರಚಿಸಿದ್ದರು. ಜೊತೆಗೆ ತಾವೇ ನಿರ್ದೇಶಿಸಿ ಸಂಚಲನ ಪ್ರಕಾಶನದ ಮೂಲಕ ಧ್ವನಿಸುರುಳಿಗಳನ್ನು ಹೊರತಂದಿದ್ದರು.[ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ']
ಕಳೆದ ಎರಡು ದಶಗಕಳಿಂದ 'ಮಾತುಕತೆ' ಎಂಬ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯ ಬೆನ್ನೆಲುಬಾಗಿದ್ದರು. ನೂರಾರು ಅನಾಥ ಮಕ್ಕಳನ್ನು ತಮ್ಮ ಬೋರ್ಡಿಂಗ್ ಶಾಲೆಯಲ್ಲಿ ಬೆಳೆಸಿ ಉತ್ತಮ ಶಿಕ್ಷಣ ನೀಡಿದ್ದ ಫಾದರ್ ಚಸರಾ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದರು.
ಕನ್ನಡದ ಅನೇಕ ಸಾಹಿತಿಗಳು, ಪ್ರಗತಿಪರ ಚಿಂತಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಫಾ. ಸಚರಾ ಕರ್ನಾಟಕದ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಕನ್ನಡದಲ್ಲೇ ಮೊದಲು ನೆರವೇರಬೇಕು ಎಂದು ಸಂಘಟಿತ ಹೋರಾಟ ನಡೆಸಿದ್ದರು. [ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?]
ಚಸರಾ ಅವರ ವೈಯಕ್ತಿಕ ಬದುಕು:
ಮೂಲತಃ ಬೆಂಗಳೂರಿನವರಾದ ಚಸರಾ 1955ರಲ್ಲಿ ಲಿಂಗರಾಜಪುರಂನಲ್ಲಿ ಜನಿಸಿದ್ದರು. ಪೂರ್ಣ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಜ್ಯದ ನಾನಾ ಭಾಗಗಳ ಚರ್ಚ್ ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರು ಸದ್ಯ ಬೆಂಗಳೂರು ಚಾಮರಾಜಪೇಟೆಯಲ್ಲಿನ ಸೇಂಟ್ ಜೋಸೆಫ್ಸ್ ಚರ್ಚಿನ ಧರ್ಮಗುರುವಾಗಿದ್ದರು. ಕರ್ನಾಟಕದ ಕ್ರೈಸ್ತ ಸಮುದಾಯದ ಶಕ್ತಿಯಂತಿದ್ದ ಫಾ. ಚಸರಾ ಅವರ ನಿಧನಕ್ಕೆ ಅಸಂಖ್ಯಾತರು ಕಂಬನಿ ಮಿಡಿದಿದ್ದಾರೆ.