ವಾಯುಭಾರ ಕುಸಿತ: ಹಿಂಗಾರು ತಡ, ಬರ ಆವೃತ
ಬೆಂಗಳೂರು ನವೆಂಬರ್ 5 : ರಾಜ್ಯಕ್ಕೆ ಒಂದು ತಿಂಗಳು ಈಶಾನ್ಯ ಹಿಂಗಾರು ತಡವಾಗಿದ್ದಕ್ಕೆ ಕ್ಯಾಂಟ್ ಚಂಡಮಾರುತ ಕಾರಣವಾಗಿತ್ತು. ಈಗ ಮತ್ತೊಂದು ವಾಯುಭಾರ ಕುಸಿತ ಬಂಗಾಳ ಕೊಲ್ಲಿಯಲ್ಲಾಗಿದ್ದು ಇನ್ನೂ ಹತ್ತು ದಿನ ತಡವಾಗಿ ಪ್ರವೇಶಿಸಲಿದೆ.
ಪ್ರತಿವರ್ಷ ವಾಡಿಕೆಯಂತೆ ಅಕ್ಟೋಬರ್ನಲ್ಲಿ 136 ಮಿ.ಮೀ ನಷ್ಟು ಹಿಂಗಾರು ಮಳೆಯಾಗಬೇಕಿತ್ತು. ಅದರೆ ಕೇವಲ 29 ಮಿ.ಮೀ ಮಳೆಯಾಗಿದೆ. ಕೊರೆತೆಯ ಪ್ರಮಾಣ ಶೇ 78ರಷ್ಟಿದ್ದು, ಈಗಾಗಲೇ ಬರದ ಪರಿಸ್ಥಿತಿಯಲ್ಲಿರುವ ರಾಜ್ಯಕ್ಕೆ ಮತ್ತೊಂದು ಬರೆ ಹಾಕಿದಂತಾಗಿದೆ.
ಈಗಾಗಲೇ 139 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಕೇಂದ್ರದ ಬರ ಅಧ್ಯಯನ ತಂಡವೂ ಈ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ.
'ಕಳೆದ 50 ವರ್ಷಗಳಿಂದ ಅಕ್ಟೋಬರ್ ತಿಂಗಳಲ್ಲಿ ಎಷ್ಟು ಮಳೆ ಸುರಿದಿದೆ ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಆದರೆ ಅಕ್ಟೋಬರ್ ನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. [ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ]
ಇದಕ್ಕಿಂತ ಮುಂಚಿತವಾಗಿ 1988ರ ಅಕ್ಟೋಬರ್ ತಿಂಗಳಲ್ಲಿ ಅತೀ ಕಡಿಮೆ ಮಳೆ ಬಿದ್ದಿತ್ತು. ಆ ವರ್ಷ ಶೇ 70ರಷ್ಟು ಮಳೆ ಕೊರತೆ ಆಗಿತ್ತು. 30 ಜಿಲ್ಲೆಗಳ ಪೈಕಿ ಬಳ್ಳಾರಿ, ಗದಗ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಶೇ 95ಕ್ಕೂ ಹೆಚ್ಚು ಮಳೆ ಅಭಾವ ಆಗಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಸರಾಸರಿ ಪ್ರಮಾಣಕ್ಕಿಂತ ಶೇ 15ರಷ್ಟು ಹೆಚ್ಚು ಮಳೆ ಸುರಿದಿದೆ.
ಹಾಗೆಯೇ ನೈರುತ್ಯ ಮುಂಗಾರಿನಲ್ಲಿ ಈ ಬಾರಿ 688 ಮಿ.ಮೀ ಮಳೆ ಬಿದ್ದಿದೆ. ಅಂದರೆ ಶೇ.ಶೇ 18ರಷ್ಟು ಕೊರತೆ ಉಂಟಾಗಿದೆ. ಜೊತೆಗೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿಯೂ ಕಡಿಮೆ ಪ್ರಮಾಣದ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ವಾತಾವರಣದಲ್ಲಿ ತೇವಾಂಶ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ಕೃಷಿ ಚಟುವಟಿಕೆ ಕುಂಠಿತವಾಗಿದೆ. ಎಂದು ರೆಡ್ಡಿ ತಿಳಿಸಿದ್ದಾರೆ.
'ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ಪಶ್ಚಿಮಕ್ಕೆ ಚಲಿಸಿದ್ದರೆ ದಕ್ಷಿಣ ರಾಜ್ಯಗಳಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದರೆ, ಅದು ಉತ್ತರಕ್ಕೆ ಚಲಿಸಿದೆ. ಹೀಗಾಗಿ ರಾಜ್ಯದಲ್ಲಿ ಮಳೆ ಕುಂಠಿತಗೊಳ್ಳಲಿದೆ. ಶನಿವಾರ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನಂತರ 10 ದಿನಗಳು ಒಣ ಹವೆ ಕಂಡು ಬರಲಿದೆ.[ವಾಯುಭಾರ ಕುಸಿತ: ರಾಜ್ಯದಲ್ಲಿ ಇನ್ನು 3 ದಿನ ಮಳೆ]
ರಾಜ್ಯದಲ್ಲಿ ಸಾಮಾನ್ಯವಾಗಿ ಹಿಂಗಾರು ಮಳೆ ವಾರ್ಷಿಕ ಮಳೆಯಲ್ಲಿ ಶೇ ಶೇ 20ರಷ್ಟಿರುತ್ತದೆ. ಇದರಿಂದ ರಾಜ್ಯದ 32 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರು ಪೂರೈಕೆಯಾಗುತ್ತದೆ. ಮಳೆ ಕೊರತೆಯಿಂದಾಗಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ಆಗಿದೆ. ಈಗ ಹಿಂಗಾರು ಮಳೆ ಆರಂಭದಲ್ಲೇ ಕೈಕೊಟ್ಟಿದ್ದು, ಬಿತ್ತಿರುವ ಬೆಳೆಗಳ ಮೇಲೂ ದುಷ್ಪರಿಣಾಮ ಆಗಲಿದೆ' ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ದಕ್ಷಿಣಕನ್ನಡದಲ್ಲಿ ಮಳೆಯಾಗುತ್ತಿದೆ.