ಅಪನಗದೀಕರಣ : ದರೋಡೆಗೆ ಇಳಿದಿದ್ದ ಪೊಲೀಸರ ವಜಾ
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯ ಬಗ್ಗೆಯೇ ಅಸಹ್ಯ ಮೂಡುವಂತೆ ಬೆಂಗಳೂರಿನ ಒಂದಿಷ್ಟು ಪೊಲೀಸರು ಯತ್ನಿಸಿದ್ದಾರೆ. ಹಣಕ್ಕಾಗಿ ಜನರು ಕಷ್ಟಪಡುತ್ತಿರುವ ಹೊತ್ತಿನಲ್ಲಿ, ಪೊಲೀಸರೇ ದರೋಡೆ ಮಾಡುವ ಯತ್ನಕ್ಕೆ ಇಳಿದಿದ್ದು ಅಕ್ಷಮ್ಯ.
ಬೆಂಗಳೂರು, ಡಿಸೆಂಬರ್ 15 : ಅಪನಗದೀಕರಣದ ದುರ್ಲಾಭ ಪಡೆದು ಲಕ್ಷಾಂತರ ರುಪಾಯಿ ಲಪಟಾಯಿಸಲು ಯತ್ನಿಸಿದ 8 ಪೊಲೀಸರನ್ನು ಯಾವುದೇ ವಿಚಾರಣೆ ಇಲ್ಲದೆ ಕೆಲಸದಿಂದ ವಜಾ ಮಾಡಲಾಗಿದೆ.
ಹಳೆ ನೋಟುಗಳನ್ನು ಹೊಸ ನಗದಿಗೆ ಪರಿವರ್ತಿಸುವ ಸೋಗಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ದರೋಡೆ ಮಾಡಲು ಯತ್ನಿಸಿದ್ದ ಪೊಲೀಸ್ ಪೇದೆಗಳು ಈಗ ಭಾರೀ ದಂಡ ತೆತ್ತಿದ್ದಾರೆ. [ಠಾಕುಠೀಕಾಲಿ ಲಾಠಿ ಹಿಡಿದು ಬಂದ ಪೇದೆ ಮಾಡಿದ್ದೇನು?]
ಪೊಲೀಸ್ ಕಾಯ್ದೆಯ 311(2)(ಬಿ) ನಿಯಮದ ಅಡಿಯಲ್ಲಿ ಯಾವುದೇ ವಿಚಾರಣೆಯನ್ನು ಕೂಡ ನಡೆಸದೆ ಬ್ಯಾಂಕಿಗೆ ಕನ್ನ ಹಾಕಲು ಯತ್ನಿಸಿದ ಪೇದೆಗಳನ್ನು ವಜಾ ಮಾಡಲಾಗಿದೆ. ವಿವಿಧ ಠಾಣೆಗಳಲ್ಲಿ 35.5 ಲಕ್ಷ ರು., 8 ಲಕ್ಷ ರು ಮತ್ತು 22.3 ಲಕ್ಷ ರು. ದರೋಡೆ ಮಾಡಲು ಯತ್ನಿಸಿದ ಕೇಸನ್ನು 3 ಠಾಣೆಗಳಲ್ಲಿ ಹಾಕಲಾಗಿತ್ತು.
ಸಬ್ ಇನ್ಸ್ಪೆಕ್ಟರ್ ಎನ್ ಸಿ ಮಲ್ಲಿಕಾರ್ಜುನ, ಹೆಡ್ ಕಾನ್ಸ್ಟೇಬರ್ ಮಯೂರ, ಪೇದೆಗಳಾದ ಮಂಜುನಾಥ್ ಮೊಗ್ಗದ, ಎಲ್ ಕೆ ಗಿರೀಶ್, ಚಂದ್ರಶೇಖರ, ಅನಂತರಾಜು, ರಾಘವ ಕುಮಾರ್ ಮತ್ತು ಬಿ ಶೇಷ ಎಂಬವರನ್ನು ವಜಾ ಮಾಡಲಾಗಿದೆ.
ಇವರೆಲ್ಲ ಗಿರಿನಗರ, ಮಾಗಡಿ ರಸ್ತೆ ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲಸದಿಂದ ವಜಾ ಆಗಿರುವ 8 ಪೊಲೀಸರಲ್ಲಿ ಐವರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಚಾಕರಿ ಮಾಡುತ್ತಿದ್ದರು. [ವಿಧಾನಸೌಧದಲ್ಲೇ ಕೋಟಿ ಕೋಟಿ ಹಣದ ಕರ್ಮಕಾಂಡ!]
ಭ್ರಷ್ಟ ಇಲಾಖೆಗಳಲ್ಲೊಂದು ಎಂಬ ಕಳಂಕ ಕಟ್ಟಿಕೊಂಡಿರುವ ಪೊಲೀಸ್ ಇಲಾಖೆಯ ಕೊಳೆ ತೊಳೆಯುವ ನಿಟ್ಟಿನಲ್ಲಿ ಇದೊಂದು ಸ್ವಾಗತಾರ್ಹ ಕ್ರಮ ಎಂದು ಪರಿಗಣಿಸಲಾಗಿದೆ. ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಸಿಕೊಂಡು ಹಣ ಲಪಟಾಯಿಸುತ್ತಿದ್ದಾರೆ ಎಂದು ಹಲವಾರು ದೂರುಗಳು ಬಂದಿದ್ದವು.