ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಏಳು ಜನ ಪೊಲೀಸರ ಬಲೆಗೆ
ಬೆಂಗಳೂರು, ಸೆಪ್ಟೆಂಬರ್ 15: ಕಳೆದ ಸೋಮವಾರ ಸುಪ್ರೀಂ ಕೋರ್ಟ್ ತೀರ್ಮಾನದ ಹಿನ್ನೆಲೆಯಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ 'ಕೆಪಿಎನ್ ಟ್ರಾವೆಲ್ಸ್'ನ ಬಸ್ಗಳಿಗೆ ಬೆಂಕಿ ಹಚ್ಚಿದ್ದ ಏಳು ಆರೋಪಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
'ರಕ್ಷಿತ್, ಸತೀಶ್, ಕಿರಣ್, ಕೆಂಪೇಗೌಡ, ಪ್ರಕಾಶ್, ಲೋಕೇಶ್ ಹಾಗೂ ಚಂದನ್ ಬಂಧಿತರು. ಇವರೆಲ್ಲರೂ ಬಸ್ ಡಿಪೋಗೆ ಸಮೀಪದಲ್ಲಿರುವ ವೀರಭದ್ರನಗರ ಹಾಗೂ ಡಿಸೋಜಾನಗರದವರಾಗಿದ್ದು, ಪೀಣ್ಯದ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಓದುಗರು ಏನಂತಾರೆ?]
ಸೆಪ್ಟೆಂಬರ್ 12ರ ಸಂಜೆ ವೇಳೆಗೆ ಡಿಸೋಜಾನಗರದ ಕೆಪಿಎನ್ ಟ್ರಾವೆಲ್ಸ್ ಡಿಪೋಗೆ ನುಗ್ಗಿ, ಬಸ್ಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಗಳು ಅಲ್ಲಿದ್ದ ಡ್ರೈವರ್ಸ್ ಮತ್ತಿತರರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಡ್ರೈವರ್ ವೆಂಕಟಾಚಲಂ ಎಂಬುವರು ದೂರು ಕೊಟ್ಟಿದ್ದರು.
ಸ್ಥಳದಲ್ಲಿ ಇದ್ದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ಆರೋಪಿಗಳ ಚಹರೆಯನ್ನು ಪೊಲೀಸರು ಪಡೆದಿದ್ದಾರೆ. ಅಪರಾಧ ಹಿನ್ನೆಲೆಯಿದ್ದವರೇ ಈ ಕೃತ್ಯ ಎಸಗಿದ್ದರಿಂದ ಸಿಬ್ಬಂದಿಗೆ ಇವರ ಮುಖಪರಿಚಯವಿತ್ತು. ಕೆಂಗೇರಿ, ಪೀಣ್ಯ ಹಾಗೂ ಡಿಸೋಜಾನಗರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.[ಕೆಪಿಎನ್ ಟ್ರಾವೆಲ್ಸ್ ನ ಮೂವತ್ತಕ್ಕೂ ಹೆಚ್ಚು ಬಸ್ ಗೆ ಬೆಂಕಿ]
ಆರೋಪಿಗಳ ವಿರುದ್ಧ ಐಪಿಸಿ 143, 147, 148, 324, 427 ಹಾಗೂ ಬೆಂಕಿ 435ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.