ಯಲಹಂಕ: ಕಳ್ಳನ ಹಿಡಿಯಲು ಹೋಗಿ ಜೀವತೆತ್ತ ಮನೆ ಮಾಲೀಕ
ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯಿಂದ ಮನೆ ಮಾಲೀಕನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ. ತೀವ್ರವಾಗಿ ಗಾಯಗೊಂಡ ಮನೆ ಮಾಲೀಕ ಸಾವು. ಬೆಂಗಳೂರಿನಲ ಯಲಹಂಕದಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆ.
ಬೆಂಗಳೂರು, ಜೂನ್ 21: ತನ್ನ ಮನೆಗೆ ನುಗ್ಗಿದ್ದ ಕಳ್ಳನೊಬ್ಬನನ್ನು ಹಿಡಿಯಲು ಹೋದ ಮನೆ ಮಾಲೀಕರೊಬ್ಬರು ಕಳ್ಳನ ದಾಳಿಯಿಂದ ಹತರಾದ ಘಟನೆ ಯಲಹಂಕದಲ್ಲಿರುವ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾಲೋನಿಯಲ್ಲಿರುವ ಡ್ಯೂಪ್ಲೆಕ್ಸ್ ಮನೆಯೊಂದರಲ್ಲಿ ವಾಸವಾಗಿದ್ದ ಅನಂತ್ ರಾಮಯ್ಯ (68) ಎಂಬುವರು ಹತ್ಯೆಯಾದವರು. ಅವರು, ತಮ್ಮ ಮಗ ಹಾಗೂ ಸೊಸೆಯೊಂದಿಗೆ ಅಲ್ಲಿ ವಾಸವಾಗಿದ್ದರು.
ಮನೆಯಲ್ಲಿ ಅನಂತ ರಾಮಯ್ಯ ಅವರು ನೆಲ ಅಂತಸ್ತಿನಲ್ಲಿ ಮಲಗುತ್ತಿದ್ದರು. ಮಂಗಳವಾರವೂ ಎಂದಿನಂತೆ ಅವರು ಮಲಗಿದ್ದಾಗ, ಹಿತ್ತಲ ಬಾಗಿಲಿನಿಂದ ಯಾರೋ ಒಳ ಪ್ರವೇಶಿಸಿ ಮನೆಯಲ್ಲಿ ಹುಡುಕಾಟ ನಡೆಸುತ್ತಿದ್ದು ಅವರ ಅವರಿಗೆ ಬಂದಿತ್ತು.
ತಕ್ಷಣವೇ ಎಚ್ಚರಗೊಂಡ ಅವರು ಮೆಲ್ಲಗೆ ಹೆಜ್ಜೆ ಹಾಕಿ ಶಬ್ದ ಬಂದ ಕಡೆಗೆ ಸಾಗಿದ್ದಾರೆ. ಆಗ, ಕಳ್ಳನೊಬ್ಬ ಏನನ್ನೋ ಹುಡುತ್ತಿದ್ದುದು ಕಂಡು ಬಂದಿದೆ. ತಕ್ಷಣವೇ ಅವರು, ಆತನ ಮೇಲೆರಗಿ ಆತನನ್ನು ಹಿಂಬದಿಯಿಂದ ಹಿಡಿಯಲು ಯತ್ನಿಸಿದ್ದಾರೆ.
ಆದರೆ, ಇದರಿಂದ ಗಾಬರಿಯಾದ ಕಳ್ಳ ಕೂಡಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಪ್ರಯತ್ನದಲ್ಲಿ ಕಳ್ಳ, ಅಲ್ಲೇ ಸಮೀಪದಲ್ಲಿದ್ದ ಕಬ್ಬಿಣದ ರಾಡ್ ನಿಂದ ರಾಮಯ್ಯ ಅವರ ತಲೆಗೆ ಬಲವಾಗಿ ಹೊಡೆದು ತಪ್ಪಿಸಿಕೊಂಡಿದ್ದಾನೆ. ಹೋಗುವಾಗ ಆತನಿಗೆ ಕಂಡ ಸೂಟ್ ಕೇಸ್ ಒಂದನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ.
ತಕ್ಷಣವೇ ಚೀರಿದ ರಾಮಯ್ಯ, ಕೆಳಗೆ ಬಿದ್ದಿದ್ದಾರೆ. ಆಗ, ಮಗ-ಸೊಸೆ ಹಾಗೂ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ. ಪೊಲೀಸರಿಗೆ ತಿಳಿಸುವ ಮುನ್ನ ಅವರು ರಾಮಯ್ಯ ಅವರ ಜೀವ ಉಳಿಸಲು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾಮಯ್ಯ ಅಸುನೀಗಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮನೆಯಿಂದ ಕೆಲ ಮೀಟರ್ ಗಳ ದೂರದಲ್ಲಿ ಕಳ್ಳ ತಾನು ಕದ್ದಿದ್ದ ಸೂಟ್ ಕೇಸನ್ನು ಬಿಸಾಕಿ ಹೋಗಿರುವುದನ್ನು ಗಮನಿಸಿದ್ದಾರೆ. ಸೂಟ್ ಕೇಸ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.