ವಿಮಾನ ಹತ್ತುವ ಮುನ್ನ ಅಮಿತ್ ಶಾ ಹೇಳಿದ 6 ಸಂಗತಿ
ಬೆಂಗಳೂರು, ಆಸಗ್ಟ್ 17: 'ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು'ಎಂಬ ಧ್ಯೇಯವಾಕ್ಯವನ್ನು ಮನದಲ್ಲಿಟ್ಟುಕೊಂಡು ಅಮಿತ್ ಶಾ ಬೆಂಗಳೂರಿಗೆ ಬಂದಿದ್ರು. ತಳಮಟ್ಟದ ಕಾರ್ಯಕರ್ಯರಿಂದ ಹಿಂಡಿದು ರಾಜ್ಯ ನಾಯಕರ ತನಕ ಎಲ್ಲರ ಮೈಯಲ್ಲಿ ಹೆಪ್ಪುಗಟ್ಟಿ ದ್ದ ರಕ್ತ ಮತ್ತೆ ಹರಿಯತೊಡಗಿತ್ತು.
ಪತ್ರಕರ್ತರ ಮುಂದೆ ಗುಟ್ಟುಬಿಟ್ಟುಕೊಡದ ಮಾಸ್ಟರ್ ಸ್ಟ್ರಾಟಜಿಸ್ಟ್ ಅಮಿತ್
ಅಮಿತ್ ಶಾ ಪ್ರವಾಸದ ಮೂರೂ ದಿನಗಳನ್ನು ಪತ್ರಿಕೆಗಳು ರಸವತ್ತಾಗಿ ವರದಿ ಮಾಡಿದ್ವು. ಅಮಿತ್ ಶಾ ಯಾರಿಗೆಲ್ಲ ಹೇಗೇಗೆ ಬೈದ್ರು ಅನ್ನೋದನ್ನ ಓದಿ ನಾವೂ ಎಂಜಾಯ್ ಮಾಡಿದ್ವಿ. ಆದ್ರೆ ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಅಮಿತ್ ಭಾಯ್ ಹೇಳಿಹೋದ ಅಂತಿಮ 6 ಸಲಹೆ-ಸೂಚನೆಗಳು ಬಿಜೆಪಿಯನ್ನು ಯಾವವು ಗೊತ್ತಾ?
ಕರ್ನಾಟಕ ಚುನಾವಣೆ ರಣಾಂಗಣದ ದಿಕ್ಕು ನಿರ್ಧರಿಸಲಿರುವ ಅಮಿತ್ ಶಾ, ಮೋದಿ!
2018 ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಕರ್ನಾಟಕದ ಬಿಜೆಪಿ ನಾಯಕರು ಒಳಜಗಳ, ವೈಮನಸ್ಯವನ್ನೆಲ್ಲ ಬಿಟ್ಟು ಚುನಾವಣೆಯ ಚಕ್ರವ್ಯೂಹ ನಿರ್ಮಿಸುವತ್ತ ಗಮನಹರಿಸಬೇಕಿದೆ, ಆದರೆ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಿರುವ ರಅಜ್ಯ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆ ಎಂಬ ಹೆಸರಿನಲ್ಲಿ 'ಚಾಣಕ್ಯ' ಒಳ್ಳೇ ಟಾಂಗ್ ನೀಡಿದ್ದಾರೆ.
ನಿಮ್ಮ ಉದ್ಧಾರಕ್ಕೆ ನಾನು ಬರಬೇಕಿತ್ತೆ?!
ಚುನಾವಣೆಗೆ ಇನ್ನುಳಿದಿರುವುದು ಹೆಚ್ಚೆಂದರೆ 9 ತಿಂಗಳು. ಪರಿಸ್ಥಿತಿ ಹೀಗಿರುವಾಗ ಪಕ್ಷವನ್ನು ಹುರಿದುಂಬಿಸಿ ಮೇಲೆತ್ತಲು ರಾಷ್ಟ್ರೀಯ ಅಧ್ಯಕ್ಷ ಬೇಕಾಯಿತೇ? ಈ ಸಲಹೆ ಕೇವಲ ಅಮಿತ್ ಶಾ ಅವರದ್ದು ಮಾತ್ರವಲ್ಲ.
ಇಡೀ ರಾಜ್ಯದ ಜನರದ್ದು. 'ಈ ಬಿಜೆಪಿಗೇನಾಗಿದೆ? ಶಕ್ತಿ ಹೀನವಾಗಿರುವ ಈ ಪಕ್ಷಕ್ಕೆ ಬೂಸ್ಟ್-ಬೋರನ್ವೀಟ ಕೊಡದಿದ್ದರೆ ಮೇಲೇಳುವ ಶಕ್ತಿಯೇ ಇಲ್ಲವೇ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಮಂತ್ರಿ-ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿರುವ ಬಿಜೆಪಿ ನಾಯಕರಿಗೆ ಸಮರೋತ್ಸಾಹವೇ ಕುಗ್ಗಿ ಹೋಗಿತ್ತು. ಯುದ್ಧದಲ್ಲಿ ಕತ್ತಿ ಎತ್ತಲು ಮೀನಾಮೇಷ ಎಣಿಸುತ್ತಿದ್ದ ನಾಯಕರಿಗೆ 'ನಿಮ್ಮ ಉದ್ಧಾರಕ್ಕೆ ನಾನು ಬರಬೇಕಾಯ್ತೇ?' ಎಂದು ಅಮಿತ್ ಭಾಯ್ ಚೆನ್ನಾಗಿ ಕಾಲೆಳಿದಿದ್ದಾರೆ.
ಸಕ್ರಿಯತೆ-ಆಕ್ರಮಣಶೀಲತೆ-ಆಂದೋಲನ
ಮೂರು ವರ್ಷಗಳ ಗೆಲುವಿನ ಫಾರ್ಮುಲಾ ಮತ್ತು ಅನುಭವವಿದೆ. Action-Aggression-Agitation ಈ ಮೂರೂ ಬಿಜೆಪಿಗೆ ಶಕ್ತಿ ತುಂಬುತ್ತದೆ. ಧೂಳಿನಿಂದ ಮೇಲೆದ್ದು ಬರುವ ಕಷ್ಟಕರ ಪರಿಸ್ಥಿತಿ ಬಿಜೆಪಿಗಿಲ್ಲ. ದೇಶದ ಬಹಳಷ್ಟು ರಾಜ್ಯಗಳಲ್ಲಿ ಬಿಜೆಪಿ/ಎನ್.ಡಿ.ಎ ಅಧಿಕಾರದಲ್ಲಿದೆ.
ದೇಶದ ಜನರು ಪಕ್ಷದ ಮೇಲೆ ಮತ್ತು ನರೇಂದ್ರ ಮೋದಿಯವರ ನಿಸ್ವಾರ್ಥ ಕೆಲಸದ ಮೇಲೆ ನಂಬಿಕೆಯಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹಲವು ಚುನಾವಣೆಗಳನ್ನು ಗೆದ್ದ ಅನುಭವ ಮತ್ತು ಕಾರ್ಯನೀತಿ ಪಕ್ಷಕ್ಕಿರುವುದರಿಂದ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಾದಿ ಸುಗಮವಾಗಲಿದೆ.
ರಾಜ್ಯ ಬಿಜೆಪಿ ನಾಯಕರು Action-Aggression-Agitation (ಸಕ್ರಿಯತೆ-ಆಕ್ರಮಣಶೀಲತೆ-ಆಂದೋಲನ) ಸದಾ ತಲೆಯಲ್ಲಿಟ್ಟುಕೊಳ್ಳಬೇಕು. ನಿಮ್ಮ ಸ್ವಭಾವದಲ್ಲಿ ಈ ಮೂರು ಅಂಶಗಳಿದ್ದರೆ ಮಾತ್ರ ಜನರಿಗೆ ನಿಮ್ಮ ಮೇಲೆ ವಿಶ್ವಾಸಬರಲು ಸಾಧ್ಯ. ಆಕ್ರಮಣಶೀಲ ನಾಯಕನನ್ನು ಮಾತ್ರ ಮತದಾರರು ಬೆಂಬಲಿಸುತ್ತಾರೆ ಎಂಬ ವಾಸ್ತವವನ್ನು ಯಾರೂ ಮರೆಯಬಾರದು. ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿತ್ತು. ಆದರೆ ಬಿಜೆಪಿ ನಾಯಕರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ನದಿಗೆ ಬಿದ್ದ ಉಪ್ಪಿನ ಮೂಟೆಯಂತೆ ಮಾಯವಾಯಿತು ಎಂದು ಅಮಿತ್ ಶಾ ಸಿಟ್ಟಾದರು.
ನಾನೂ ಮಾಡಲ್ಲ, ಬೇರೆಯವರಿಗೂ ಬಿಡಲ್ಲ!
ರಾಜ್ಯ ಬಿಜೆಪಿಯ ಹಿರಿಯ ನಾಯಕರಿಗೆ ಹೋರಾಡುವ ಛಲವಾಗಲೀ, ಮನಸ್ಸಾಗಲೀ ಇಲ್ಲ. ಯುವಕರು ಹೋರಾಡುತ್ತಾರೆ, ಅವರಿಗೆ ದಾರಿ ಬಿಡಿ.
ರಾಜ್ಯ ನಾಯಕರೇ, ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಎ.ಸಿ ಕಾರಿನಲ್ಲಿ ಓಡಾಡುವುದು ನಿಮಗೆ ಅಭ್ಯಾಸವಾಗಿರಬಹುದು. ಆದರೆ ಇಂದು ರಾಜ್ಯಕ್ಕೆ ಬೇಕಿರುವುದು ಹೋರಾಟಗಾರರು. ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗ, ಮಳೆಯಿಂದ ಬೆಂಗಳೂರು ಮುಳುಗಿದಾಗ, ಅಂಗನವಾಡಿ ಕಾರ್ಯಕರ್ತೆಯರು ರಸ್ತೆಯಲ್ಲಿ ಮಲಗಿದಾಗ, ವಿಜಯಪುರದ ದಲಿತ ಹುಡುಗನನ್ನು ಮುಸಲ್ಮಾನರು ಕೊಂದಾಗ ನೀವೇಕೆ ರಸ್ತೆಗಿಳಿಯಲಿಲ್ಲ? ಹೋರಾಟ ಮಾಡದವನು ನಾಯಕ ಹೇಗಾದಾನು?
ನಿಮ್ಮ ಚೈತನ್ಯ ಕುಸಿದಿದ್ದರೆ ಯುವಕರನ್ನು ಮುಂದೆಬಿಡಿ. ನಾನೂ ಮಾಡಲ್ಲ-ಬೇರೆಯವರಿಗೂ ಬಿಡಲ್ಲ ಎಂಬ ಧೋರಣೆ ಬಿಡದಿದ್ದರೆ ಏನು ಮಾಡಬೇಕೆಂಬುದು ನಮಗೆ ತಿಳಿದಿದೆ.
ಬಿಜೆಪಿ ಎಂಬುದು ನಾಲ್ಕೈದು ಜನರ ಸೊತ್ತಲ್ಲ!
ಬಿಜೆಪಿಗಿರುವುದು ನಿಷ್ಠಾವಂತ ಮತದಾರರು. ನೀವು ಮತ್ತೊಮ್ಮೆ ಕಚ್ಚಾಡಿ ಭಿನ್ನಮತ ತಂದಿಟ್ಟರೆ ಖಂಡಿತಾ ನಿಮಗೆ ಪಾಠ ಕಲಿಸುತ್ತಾರೆ. ರಾಜ್ಯ ಬಿಜೆಪಿಯನ್ನು ನಾಲ್ಕೈದು ಜನರ ಸೊತ್ತಲ್ಲ; ಲಕ್ಷಾಂತರ ಕಾರ್ಯಕರ್ತರ ಆಸ್ತಿಯದು.
2015ರಲ್ಲಿ ಬಿಎಸ್ ವೈ ಪಕ್ಷದ ರಾಜ್ಯಾಧ್ಯಕ್ಷರಾದಾಗ ಇದ್ದ ವಾತಾವರಣಕ್ಕೂ, ಈಗಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಗಮನಿಸಿದ್ದೀರಾ? ಯಾಕೆ ಹೀಗಾಯಿತು ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಜನರು ಬಿಜೆಪಿಗೆ ಮತ ನೀಡುವುದು ಹಣದ ಆಸೆಯಿಂದಲ್ಲ. ತತ್ವ-ಸಿದ್ಧಾಂತ-ಅಭಿವೃದ್ಧಿಯ ಮಂತ್ರವೇ ಜನರನ್ನು ಬಿಜೆಪಿಯತ್ತ ಸೆಳೆಯುತ್ತಿದೆ. ದೇಶದಾದ್ಯಂತ ಇಂತಹದ್ದೊಂದು ಗಾಳಿ ಬೀಸುತ್ತಿರುವಾಗ ನೀವು ಕಚ್ಚಾಡಿಕೊಂಡು ಕೂತಿದ್ದೀರ. ನಿಮ್ಮ ಕಚ್ಚಾಟದ ಹಿಂದೆ ಸ್ವಾರ್ಥವಿದೆಯೇ ಅಥವಾ ರಾಜ್ಯದ ಹಿತವಿದೆಯೇ ಎಂದು ತಿಳಿಯದಷ್ಟು ಹೆಡ್ಡರು ಯಾರೂ ಇಲ್ಲ.
ಪ್ರಸ್ತುತ ಆಡಳಿತದಲ್ಲಿರುವ ಉಡಾಫೆ ಸರ್ಕಾರಕ್ಕೆ ಪಾಠ ಕಲಿಸಬೇಕೆಂಬ ಉತ್ಕಟ ಬಯಕೆ ಕನ್ನಡಿಗರಲ್ಲಿದೆ. ಆ ಬಯಕೆಯನ್ನು ನೀವುಗಳು ಈಡೇರಿಸಬೇಕು. ಅದು ನಿಮ್ಮಿಂದ ಮಾತ್ರ ಸಾಧ್ಯ. ಬಿಜೆಪಿ ಎಂಬುದು ಕೇವಲಕ ನಾಲ್ಕೈದು ಜನರ ಪಕ್ಷವಲ್ಲ. ಅದು ಜನರ ಸಂಘಟನೆ. ಕಾಂಗ್ರೆಸ್ಸಿನಲ್ಲಿರುವಂತೆ ಕುಟುಂಬ ರಾಜಕಾರಣಕ್ಕೆ ಇಲ್ಲಿ ಸ್ಥಾನವಿಲ್ಲ. ಹಾಗಾಗಿ ಬಿಜೆಪಿಯನ್ನು ನಾಲ್ಕೈದು ನಾಯಕರ ಸುತ್ತ ಬೆಳೆಸಬೇಡಿ. ಅಸಂಖ್ಯಾತ ನಿಷ್ಠಾವಂತ ಕಾರ್ಯಕರ್ತರು ಪಕ್ಷದಲ್ಲಿದ್ದಾರೆ. ಅವರಿದ್ದರೆ ಮಾತ್ರ ಪಕ್ಷ ಎಂಬುದನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು.
ಮೂರು ವಿಷಯಗಳು ನೆನಪಿರಲಿ
ರೈತರ ಸಮಸ್ಯೆ, ಹಿಂದು ಕಾರ್ಯಕರ್ತರ ಹತ್ಯೆ, ಭ್ರಷ್ಟಾಚಾರ ಇವುಗಳೇ ಚುನಾವಣೆಯ ವಿಷಯಗಳು. 2013ರಲ್ಲಿ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಹಿಡಿದಾಗಿನಿಂದ ಸುಮಾರು 1500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇರಳದಲ್ಲಿ ನಡೆಯುವಂತೆಯೇ ರಾಜ್ಯದಲ್ಲೂ ರಾಜಕೀಯ ವಿರೋಧಿಗಳು ಮತ್ತು ಇಸ್ಲಾಂ ಮೂಲಭೂತವಾದಿಗಳಿಂದ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಶಿವಾಜಿನಗರದ ರುದ್ರೇಶ್ ಹತ್ಯೆ ನಡೆಸಿದ್ದು ಇಸ್ಲಾಮಿಕ್ ರಾಜ್ಯ ಸ್ಥಾಪನೆಗಾಗಿ ಎಂದು ಪಾತಕಿಗಳು ಹೇಳಿದ್ದಾರೆ. ಮತೀಯ ಮೂಲಭೂತವಾದಿಗಳು ಹಿಂದು ಕಾರ್ಯಕರ್ತರ ಮೇಲೆ ನಡೆಸುವ ಹಲ್ಲೆಗಳನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿರುವುದು ರಹಸ್ಯವಾಗಿ ಉಳಿದಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ಆಸಕ್ತಿಯಿಲ್ಲ ಎಂಬುದಕ್ಕೆ ಎಂ.ಎಂ.ಕಲ್ಬುರ್ಗಿಯವರ ಪ್ರಕಣವೂ ಒಂದು ಉದಾಹರಣೆ. ಇದರೊಂದಿಗೆ ರಾಜ್ಯ ಸರ್ಕಾರ ನಡೆಸುತ್ತಿರುವ 'ಭ್ರಷ್ಟಾಚಾರ'. ಈ ಮೂರು ಅಂಶಗಳನ್ನು ಮುಂದಿಟ್ಟಿಕೊಂಡು ಚುನಾವಣೆ ಎದುರಿಸೋಣ. ಈ ಮೂರು ವಿಷಯಗಳನ್ನು ಬಿಜೆಪಿ ಕೈಗೆತ್ತಿಕೊಳ್ಳಬೇಕೆಂಬುದು ರಾಜ್ಯದ ಜನರ ಬಯಕೆಯೂ ಆಗಿದೆ.
ಚುನಾವಣೆಯ ಪೂರ್ತಿ ಉಸ್ತುವಾರಿ ನನ್ನದೇ!
ಚಿಂತಿಸಬೇಡಿ, ಚುನಾವಣೆಯ ಪೂರ್ತಿ ಉಸ್ತುವಾರಿ ನನ್ನದೇ! ಇನ್ನುಮುಂದೆ ಪ್ರತಿ ತಿಂಗಳೂ ರಾಜ್ಯಕ್ಕೆ ಬರುತ್ತೇನೆ. ಕೊನೆಯ ಮೂರು ತಿಂಗಳು ಇಲ್ಲೇ ಉಳಿಯುತ್ತೇನೆ. ಹಾಗಾಗಿ ಚುನಾವಣಾ ತಂತ್ರಗಳನ್ನು ಹೆಣೆಯುವ ತಲೆನೋವು ನಿಮಗಿಲ್ಲ.
ಒಗ್ಗಟ್ಟಿನಿಂದ ಹೋರಾಡುವುದು ಮತ್ತು ಸಿದ್ದರಾಮಯ್ಯನವರ ಮುಖವಾಡವನ್ನು ಕಳಚುವುದು ರಾಜ್ಯನಾಯಕರ ಮುಂದಿರುವ ಪ್ರಮುಖ ಗುರಿ.