ಉಬರ್ ಚಾಲಕನಿಂದ ಲಂಚ, ನಾಲ್ವರು ಪೊಲೀಸರ ಅಮಾನತು!
ಬೆಂಗಳೂರು, ಆಗಸ್ಟ್ 30 : ಉಬರ್ ಚಾಲಕನಿಂದ 200 ರೂ. ಲಂಚ ಪಡೆದ ನಾಲ್ವರು ಸಂಚಾರಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ನಾಲ್ವರು ಮಾರ್ಕೆಟ್ ಸಂಚಾರಿ ಠಾಣೆಯ ಸಿಬ್ಬಂದಿಗಳಾಗಿದ್ದಾರೆ.
ಮಂಗಳವಾರ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರಿ) ಆರ್.ಹಿತೇಂದ್ರ ಅವರು ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು. ನಾಲ್ವರು ಉಬರ್ ಕಾರು ಚಾಲಕನಿಂದ ಲಂಚ ಪಡೆದಿರುವುದು ಸಾಬೀತಾಗಿದೆ.[ಡಿಸೈನ್ ನಂಬರ್ ಪ್ಲೇಟ್ ಇಟ್ಟುಕೊಂಡ್ರೆ ದಂಡ ಗ್ಯಾರಂಟಿ!]
ಹೆಡ್ ಕಾನ್ಸ್ಟೇಬಲ್ ಜಗದೀಶ್, ಪೇದೆಗಳಾದ ಅರುಣ್, ಯೋಗೇಂದ್ರ, ಅನಂತಕುಮಾರ್ ಅಮಾನತು ಗೊಂಡವರು. ಕ್ಯಾಬ್ ಚಾಲಕನಿಂದ 200 ರೂ. ಲಂಚ ಪಡೆದಿದ್ದ ಪೊಲೀಸರು ರಸೀದಿ ನೀಡಿರಲಿಲ್ಲ. ಕ್ಯಾಬ್ನಲ್ಲಿದ್ದ ಪ್ರಯಾಣಿಕರು ಇದರ ಫೋಟೋ ತೆಗೆದು ಆಯುಕ್ತ ಹಿತೇಂದ್ರ ಅವರಿಗೆ ಕಳುಹಿಸಿದ್ದರು.[ಹೊಂಡ ಬಿದ್ದ ರಸ್ತೆ, ಕಟ್ಟಿದ ಚರಂಡಿ, ಕೊಳೆತ ಕಸ, ಅಯ್ಯಪ್ಪಾ..!]
ಆರ್.ಹಿತೇಂದ್ರ ಅವರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಎಸ್.ಗಿರೀಶ್ ಅವರಿಗೆ ಸೂಚನೆ ನೀಡಿದ್ದರು. ಗಿರೀಶ್ ಅವರು ಈ ಬಗ್ಗೆ ವರದಿ ನೀಡಿದ್ದು, ಲಂಚ ಪಡೆದಿರುವುದು ಸಾಬೀತಾಗಿತ್ತು. ವರದಿಯ ಅನ್ವಯ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.