ಜಯನಗರ ಪೊಲೀಸರಿಂದ ನಾಲ್ವರು ಸರ, ವಾಹನಗಳ್ಳರು ಕಂಬಿ ಹಿಂದೆ
ಬೆಂಗಳೂರು, ಫೆಬ್ರವರಿ 2: ಸರಗಳವು, ವಾಹನ ಕಳವು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಲಾಲ್ ಬಾಗ್ ಪಶ್ಚಿಮದ್ವಾರದ ಕಾವೇರಿ ಪೆಟ್ರೋಲ್ ಬಂಕ್ ಬಳಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಹುಲ್, ಸುದರ್ಶನ್, ವೆಂಕಟೇಶ, ಸೂರ್ಯ ಬಂಧಿತರು.
ಬಂಧಿತರಿಂದ 4,80,000 ರುಪಾಯಿ ಬೆಲೆ ಬಾಳುವ 160 ಗ್ರಾಂ ತೂಕದ ಚಿನ್ನದ ಸರಗಳು, ಆರು ಸಾವಿರ ನಗದು ಮತ್ತು 45 ಸಾವಿರ ರುಪಾಯಿ ಮೌಲ್ಯದ ದ್ವಿಚಕ್ರ ವಾಹನವೊಂದನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಆರೋಪಿಗಳ ವಿರುದ್ಧ ಬಸವನಗುಡಿ ಠಾಣೆಯಲ್ಲಿ 5, ಸಿದ್ದಾಪುರ, ಬನಶಂಕರಿ ಠಾಣೆಯಲ್ಲಿ ತಲಾ 2, ಜೆಪಿ ನಗರ, ಸೂರ್ಯನಗರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿತ್ತು.[ರು 5 ಸಾವಿರ ತೆಗೆಯಿತು, ವಿದೇಶಿ ವಿದ್ಯಾರ್ಥಿನಿಯ ಪ್ರಾಣ]
ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ಮಾರಾಟ ಮಾಡುವ ವೇಳೆ ಪೊಲೀಸರು ಈ ನಾಲ್ವರನ್ನು ಬಲೆಗೆ ಕೆಡವಿದ್ದಾರೆ. ಒಟ್ಟು ಹನ್ನೊಂದು ಪ್ರಕರಣಗಳಲ್ಲಿ ಇವರು ಬೇಕಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಅನ್ವಯ ಕಾರ್ಯಾಚರಣೆ ನಡೆಸಿದ್ದು, ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗೆ ಮೆಚ್ಚುಗೆ ಸೂಚಿಸಲಾಗಿದೆ.