ಬೆಂಗಳೂರು: ಬಾವಿಗೆ ಸ್ಕೂಟರ್ ಬಿದ್ದು 3 ಮಕ್ಕಳ ದಾರುಣ ಸಾವು
ಬೆಂಗಳೂರು, ಫೆ. 22 : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ನೋಡಿದ್ದ ಮಕ್ಕಳು ಹೊಸ ಪುಳಕ ಅನುಭವಿಸಿದ್ದರು. ಆದರೆ ತಂದೆಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದವರಿಗೆ ರಸ್ತೆಪಕ್ಕದ ಬಾವಿ ಮೃತ್ಯುಕೂಪವಾಯಿತು.
ಯಲಹಂಕ ವಾಯುನೆಲೆ ಏರ್ ಶೋ ವೀಕ್ಷಿಸಿ ವಾಪಸಾಗುತ್ತಿದ್ದಾಗ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಸ್ಕೂಟರ್ ಬಿದ್ದ ಪರಿಣಾಮ ಮೂವರು ಮಕ್ಕಳು ದಾರುಣ ಸಾವನ್ನಪ್ಪಿದ್ದಾರೆ.[ಶಿವಮೊಗ್ಗ: ಶಿವರಾತ್ರಿಗೆ ಹೋದ ಬಾಲಕರು ತುಂಗೆ ಪಾಲು]
ಯಲಹಂಕ ನ್ಯೂಟೌನ್ ಬಳಿಯ ಅನಂತಪುರ ನಿವಾಸಿಯಾದ ವೆಂಕಟರಾಜು ಅವರ ಮಕ್ಕಳಾದ ಸಿಂಗಾರವೇಲು (13), ಕವಿತಾ(10) ಮತ್ತು ಗೋಕುಲಕರ್ಣ (8) ಮೃತಪಟ್ಟ ದುರ್ದೈವಿಗಳು.
ಶನಿವಾರ ಮಕ್ಕಳೊಂದಿಗೆ ಏರ್ಶೋ ವೀಕ್ಷಣೆಗೆಂದು ತೆರಳಿ ಹಿಂದಿರುಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೆಂಚೇನಹಳ್ಳಿ ಸಮೀಪದ ಬಾವಿಗೆ ಆಕಸ್ಮಿಕವಾಗಿ ಸ್ಕೂಟರ್ ಬಿದ್ದಿದೆ. ಈಜು ಗೊತ್ತಿದ್ದ ವೆಂಕಟರಾಜು ಮೇಲಕ್ಕೆ ಬಂದಿದ್ದಾರೆ. ಆದರೆ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಆದರೆ ತಂದೆ ವೆಂಕಟರಾಜುವನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಘಟನೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ರಸ್ತೆಗೂ ಮತ್ತು ಬಾವಿಗೂ ನೂರಾರು ಅಡಿ ಅಂತರವಿದ್ದು ಅಲ್ಲಿಗೆ ಹೇಗೆ ಹೋಗಿ ಬಿದ್ದರು ಎಂಬುದರ ವಿಚಾರಣೆ ನಡೆಸಲಾಗುತ್ತಿದೆ.