ದಲಿತ ಸಮುದಾಯದ ಅಭಿವೃದ್ದಿಗೆ 19852 ಕೋಟಿ: ಸಿಎಂ
ಮೈಸೂರು, ಡಿಸೆಂಬರ್ 24: ಎಸ್ ಸಿಪಿ ಮತ್ತು ಟಿಸಿಪಿ ಅನುದಾನವನ್ನು ಕಡ್ಡಾಯವಾಗಿ ದಲಿತ ಸಮುದಾಯಕ್ಕೆ ಬಳಸಬೇಕು ಎಂದು ಕಾಯಿದೆ ಪ್ರಕಾರ ಈ ವರ್ಷ ರು. 19852 ಕೋಟಿ ಗಳನ್ನು ದಲಿತ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ನಿಮಿತ್ತ "ಬೌದ್ಧ ಸಮಾಜ ನಿರ್ಮಾಣ ಸಂಕಲ್ಪ ದಿನ" ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಂಡಷ್ಟು ಬೇರೆ ಯಾರೂ ಅರ್ಥಮಾಡಿಕೊಂಡಿಲ್ಲ ಎಂದರು.[ಕನ್ನಡ ಭಾಷೆಯನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ: ಸಿದ್ದರಾಮಯ್ಯ]
2013ರಲ್ಲಿ ಎಸ್ ಸಿಪಿ ಮತ್ತು ಟಿಸಿಪಿ ಅನುದಾನವನ್ನು ಕಡ್ಡಾಯವಾಗಿ ಈ ಸಮುದಾಯಕ್ಕೆ ಬಳಸಬೇಕು ಎಂದು ಕಾಯಿದೆ ತಂದಿದ್ದೇವೆ. ಹೋದ ವರ್ಷ 6-7 ಸಾವಿರ ಕೋಟಿ ರೂ ಖರ್ಚು ಮಾಡಲಾಗಿದೆ. ನಾವು ಈ ವರ್ಷ 19852 ಕೋಟಿ ರೂಗಳನ್ನು ಈ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದೇವೆ ಎಂದರು.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ದಲಿತ ಮಹಿಳೆಯನ್ನು ವಿವಾಹವಾದರೆ 3 ಲಕ್ಷ ರೂ. ಹಾಗೂ ದಲಿತ ಪುರುಷ ಇತರೆ ಜಾತಿ ಮಹಿಳೆ ವಿವಾಹವಾದರೆ 2 ಲಕ್ಷ ರೂ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಶಾಸಕರಾದ ಪಿ. ಎಂ. ನರೇಂದ್ರಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷೀನಾರಾಯಣ ನಾಗವಾರ ಉಪಸ್ಥಿತರಿದ್ದರು.