ಬೆಂಗಳೂರಿನ ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ
ಬೆಂಗಳೂರು, ಜನವರಿ 09 : 'ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1,545 ಕೆರೆಗಳು ಇವೆ. ಅವುಗಳ ಪೈಕಿ 11 ಸಾವಿರ ಎಕರೆ ಒತ್ತುವರಿ ಆಗಿದೆ' ಎಂದು ಕೆರೆ ಒತ್ತುವರಿ ಮತ್ತು ಸಂರಕ್ಷಣೆ ಸಂಬಂಧ ಪರಿಶೀಲಿಸಲು ರಚಿಸಿರುವ ವಿಧಾನಸಭೆಯ ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆರೆ ಒತ್ತುವರಿ ಮಾಡಿದ ಜಾಗದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನಿವೇಶನ ಪಡೆದಿದ್ದಾರೆ' ಎಂದು ತಿಳಿಸಿದರು. [ಕೆರೆ ಒತ್ತುವರಿ : ಸದನ ಸಮಿತಿಗೆ ಅಚ್ಚರಿ!]
'ಬಿಡಿಎ ದೊರೆಸ್ವಾಮಿ ಕೆರೆ ಒತ್ತುವರಿ ಮಾಡಿಕೊಂಡು ಡಾಲರ್ಸ್ ಕಾಲೋನಿ ನಿರ್ಮಿಸಿದೆ. ಅದರಲ್ಲಿ ಅನೇಕ ರಾಜಕಾರಣಿಗಳೂ ನಿವೇಶನ ಪಡೆದಿದ್ದಾರೆ. ಎಲ್ಲ ಒತ್ತುವರಿದಾರರಿಗೂ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಜನವರಿ 31ರೊಳಗೆ ಎಲ್ಲರೂ ನೋಟಿಸ್ಗೆ ಉತ್ತರ ನೀಡಬೇಕು' ಎಂದರು. [ಬೆಂಗಳೂರು ಕೆರೆಗಳ ಸ್ಥಿತಿ ನೋಡಿ]
ಬೆಂಗಳೂರಿನಲ್ಲಿ ನಡೆದಿರುವ ಕೆರೆ ಒತ್ತುವರಿ ಕುರಿತು ವರದಿ ನೀಡಲು ಸರ್ಕಾರ ಕೆ.ಬಿ.ಕೋಳಿವಾಡ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿಯಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರಿದ್ದಾರೆ. ಕೆರೆ ಒತ್ತುವರಿಯ ವಿವರ ಚಿತ್ರಗಳಲ್ಲಿ.....[ಯಮಲೂರು ಕೆರೆ ನೊರೆಯಲ್ಲಿ ಮತ್ತೆ ಬೆಂಕಿ]
ಸರ್ಕಾರ ಮತ್ತು ಖಾಸಗಿ ಅವರಿಂದ ಒತ್ತುವರಿ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 1,545 ಕೆರೆಗಳಿದ್ದವು. ಇವುಗಳಲ್ಲಿ ಸರ್ಕಾರ 1032 ಎಕರೆ ಜಾಗ, ಖಾಸಗಿಯವರು 5,162 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೆರೆ ಒತ್ತುವರಿ ಮತ್ತು ಸಂರಕ್ಷಣೆ ಸಂಬಂಧ ಪರಿಶೀಲಿಸಲು ರಚಿಸಿರುವ ವಿಧಾನಸಭೆಯ ಸದನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಬಿಡಿಎ, ಬಿಬಿಎಂಪಿಯಿಂದಲೂ ಒತ್ತುವರಿ
ಖಾಸಗಿ ನಿರ್ಮಾಣ ಸಂಸ್ಥೆಗಳು ಮಾತ್ರವಲ್ಲದೇ ಸರ್ಕಾರದ ಅಂಗ ಸಂಸ್ಥೆಗಳಾದ ಬಿಡಿಎ, ಬಿಬಿಎಂಪಿ, ಅರಣ್ಯ, ಸಾರಿಗೆ ಸಂಸ್ಥೆಗಳು ಸೇರಿದಂತೆ 11 ಸಾವಿರಕ್ಕೂ ಹೆಚ್ಚು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಎಲ್ಲ ಒತ್ತುವರಿದಾರರಿಗೂ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ಗೆ ಉತ್ತರ ನೀಡಲು ಜನವರಿ 31 ಕೊನೆಯ ದಿನ.
ಒತ್ತುವರಿ ವಿವರಗಳು ಶೀಘ್ರದಲ್ಲೇ ವೆಬ್ಸೈಟ್ನಲ್ಲಿ ಪ್ರಕಟ
ಬೆಂಗಳೂರಿನಲ್ಲಿ ನಿರ್ಮಾಣ ಸಂಸ್ಥೆಗಳು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿವೆ. ಎಷ್ಟು ಒತ್ತುವರಿ ಮಾಡಿವೆ? ಎಂಬುದರ ಮಾಹಿತಿಯನ್ನು www.kla.kar.nic.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ನೋಟಿಸ್
ಬಿಡಿಎ ಕೆರೆ ಒತ್ತುವರಿ ಮಾಡಿದ ಜಾಗದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನಿವೇಶನ ಪಡೆದಿದ್ದಾರೆ. ತಮಗೆ ಹಂಚಿಕೆ ಮಾಡಿದ್ದ ನಿವೇಶನವನ್ನು ಸಿದ್ದರಾಮಯ್ಯ ಮಾರಾಟ ಮಾಡಿದ್ದಾರೆ. ಆದ್ದರಿಂದ ಅವರಿಗೆ ನೋಟಿಸ್ ನೀಡುತ್ತಿಲ್ಲ. ಆದರೆ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಬಳಿ ನಿವೇಶನ ಇರುವ ಕಾರಣ ಅವರಿಗೆ ನೋಟಿಸ್ ನೀಡಲಾಗುತ್ತದೆ.
ಕೆರೆ ಒತ್ತುವರಿ ಮಾಡಿದ ನಿರ್ಮಾಣ ಸಂಸ್ಥೆಗಳು
ಆದರ್ಶ ಡೆವಲಪರ್ಸ್, ಪ್ರೆಸ್ಟೀಜ್ ಗ್ರೂಪ್, ಡಿಎಸ್ ಮ್ಯಾಕ್ಸ್, ಶೋಭಾ, ಬ್ರಿಗೇಡ್ ಗ್ರೂಪ್, ಒಬೆರಾಯ್ ಗ್ರೂಪ್, ಆರ್ಎನ್ಎಸ್ ಮೋಟರ್ಸ್, ಬಾಗಮಾನೆ ಟೆಕ್ ಪಾರ್ಕ್, ನಿಸರ್ಗಧಾಮ ಎಸ್ಟೇಟ್ಸ್, ನಂದಿನಿ ಅಪಾರ್ಟ್ಮೆಂಟ್ಸ್, ಬಿ.ಆರ್.ವ್ಯಾಲಿ ಪಾರ್ಕ್, ಶ್ರೀರಾಮ ಅಪಾರ್ಟ್ಮೆಂಟ್ಸ್, ಎನ್.ಡಿ. ಡೆವಲಪರ್ಸ್ಸ್, ಐಶ್ವರ್ಯ ಡೆವಲಪರ್ಸ್ಸ್ ಮುಂತಾದವು.