ನೂರು ರುಪಾಯಿ, ಒಂದು ಪ್ಲೇಟ್ ಬಿರಿಯಾನಿಗೆ 42 ಬಸ್ ಗೆ ಬೆಂಕಿ
ಬೆಂಗಳೂರು, ಸೆಪ್ಟೆಂಬರ್ 19: ಕೆಪಿಎನ್ ಟ್ರಾವೆಲ್ಸ್ ನ 42 ಬಸ್ ಸುಟ್ಟ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ 22 ವರ್ಷದ ಭಾಗ್ಯಶ್ರೀಗೆ ಬಸ್ ಗೆ ಬೆಂಕಿಯಿಟ್ಟರೆ ನೂರು ರುಪಾಯಿ ದುಡ್ಡು, ಒಂದು ಪ್ಲೇಟ್ ಮಟನ್ ಬಿರಿಯಾನಿ ಕೊಡಿಸ್ತೀವಿ ಎಂದು ಭರವಸೆ ಕೊಟ್ಟಿದ್ದರಂತೆ ಎಂಬ ಸಂಗತಿ ಬಯಲಾಗಿದೆ.
ಭಾಗ್ಯಶ್ರೀ ಮೂಲತಃ ಯಾದಗಿರಿ ಜಿಲ್ಲೆಯವಳು. ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿಸಿರುವ ಹನ್ನೊಂದು ಮಂದಿ ಪೈಕಿ ಏಕೈಕ ಮಹಿಳೆ. ಇದೇ ಪ್ರಕರಣದಲ್ಲಿ ಇನ್ನೂ ಹನ್ನೆರಡು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಇಬ್ಬರು ಅಪ್ರಾಪ್ತರೂ ಇದ್ದಾರೆ. ವಿವಿಧ ಘಟನೆಗಳಲ್ಲಿ ನಾನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.[ಕೆಪಿಎನ್ ಟ್ರಾವೆಲ್ಸ್ ಗೆ 10 ಕೋಟಿ ನಷ್ಟ: ಪ್ರಕರಣ ಸಿಐಡಿ ತನಿಖೆಗೆ]
ಭಾಗ್ಯಶ್ರೀ ದಿನಗೂಲಿ ನೌಕರಳಾದ್ದಳು. ಕೆಲಸ ಮುಗಿಸಿ ವಾಪಸ್ ಬಂದವಳ ಬಳಿಗೆ ಬಂದ ಕೆಲವರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೇಳಿದ್ದಾರೆ. "ಪ್ರತಿಭಟನೆಗೆ ಹೋದರೆ ನೂರು ರುಪಾಯಿ ದುಡ್ಡು, ಒಂದು ಪ್ಲೇಟ್ ಬಿರಿಯಾನಿ ಕೊಡ್ತೀವಿ ಅಂದರು" ಎಂದು ಆಕೆಯ ತಾಯಿ ಯಲ್ಲಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಕೆ ನೋಡುವುದಕ್ಕೆ ಹೋಗಿದ್ದಳೆ ಹೊರತು ಕೃತ್ಯದಲ್ಲಿ ಭಾಗವಹಿಸಿಲ್ಲ" ಎಂದು ಭಾಗ್ಯಶ್ರೀ ಕುಟುಂಬದವರು ಹೇಳಿದ್ದಾರೆ.[ಬಸ್ಸು ಸುಡಲು ಕುಮ್ಮಕ್ಕು ನೀಡಿದ್ದು ಯಾದಗಿರಿಯ 22ರ ಯುವತಿ]
ಹೊಸಕರೆಹಳ್ಳಿಯ ಪಿಇಎಸ್ ಕಾಲೇಜು ಬಳಿಯ ಕೆಪಿಎನ್ ಟ್ರಾವೆಲ್ಸ್ ಡಿಪೋಗೆ ನುಗ್ಗಿದ್ದ ಪ್ರತಿಭಟನಾನಿರತರು ಬಸ್ ಗೆ ಬೆಂಕಿ ಹೊತ್ತಿಸಿದ್ದರು. ಟ್ರಾವೆಲ್ಸ್ ನ ನೌಕರರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದ ದೃಶ್ಯಾವಳಿಗಳು ಹಾಗೂ ಸಿಸಿಟಿವಿ ಫೂಟೇಜ್ ನಲ್ಲಿ ಭಾಗ್ಯಶ್ರೀ ಡೀಸೆಲ್, ಪೆಟ್ರೋಲ್ ಕ್ಯಾನ್ ನೀಡುತ್ತಿದ್ದದ್ದು ದಾಖಲಾಗಿತ್ತು.
ಬಂಧಿತ ಭಾಗ್ಯಶ್ರೀ ತನ್ನ ಕೈ ಮೇಲಿರುವ ಹಾವಿನ ಚಿತ್ರದ ಹಚ್ಚೆ ತೋರಿಸಿ, ನನಗೆ ಯಾವುದೇ ತೊಂದರೆ ಆಗಲ್ಲ ಎಂದು ಪೊಲೀಸರಿಗೆ ಹೇಳಿದ್ದಾಳೆ. ಡೀಸೆಲ್-ಪೆಟ್ರೋಲ್ ಸ್ವತಃ ಆಕೆಯೇ ತೆಗೆದುಕೊಂಡು ಹೋದಳಾ, ಯಾರಾದರೂ ಕೊಟ್ಟು ಕಳಿಸಿದರಾ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.