ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ 10 ಕಾರಣಗಳು
ಬೆಂಗಳೂರು, ಆ.25 : ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ ಅಭ್ಯರ್ಥಿಗಳು 14 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಸೋಲಿನ ಹೊಣೆಯನ್ನು ಅಭ್ಯರ್ಥಿಗಳೇ ಹೊರಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕೊನೆ ಕ್ಷಣದ ತನಕ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿದ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸಿದ್ದಾರೆ. 'ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. [ಬಿಬಿಎಂಪಿ ಫಲಿತಾಂಶ : ಯಾರು, ಏನು ಹೇಳಿದರು?]
ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದ್ದವು. ಆದರೆ, ಮತದಾರ ಪ್ರಭುಗಳು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ, ರಾಜಧಾನಿಯಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದೆ. [ಸಿದ್ದರಾಮಯ್ಯ ಪದಚ್ಯುತಿ?]
ಬೆಂಗಳೂರು ಪ್ರತಿನಿಧಿಸುವ ಐವರು ಸಚಿವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಬೇಕು ಎಂಬ ಸೂಚನೆ ನೀಡಿದ್ದರು. ಆದರೆ, ಸಚಿವರ ಪ್ರಯತ್ನಗಳು ಪಕ್ಷವನ್ನು ಮುನ್ನಡೆಸಲು ವಿಫಲವಾಗಿದೆ. ಹಾಗಾದರೆ ಕಾಂಗ್ರೆಸ್ ಸೋಲಿಗೆ ಕಾರಣಗಳೇನು? ಇಲ್ಲಿದೆ ವಿವರ..... [ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ]
ಬಿಬಿಎಂಪಿ ವಿಭಜನೆಯ ಪ್ರಸ್ತಾಪ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಾ ಬಂದಿತ್ತು. ಅದಕ್ಕಾಗಿ ವಿಶೇಷ ವಿಧಾನಸಭೆ ಅಧಿವೇಶನ ನಡೆಸಿ ವಿಧೇಯಕವನ್ನು ಮಂಡನೆ ಮಾಡಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿತ್ತು. ಬೆಂಗಳೂರು ವಿಭಜನೆ ಸಹಿಸದ ಜನರು ಕಾಂಗ್ರೆಸ್ ವಿರುದ್ಧವಾಗಿ ಮತ ಹಾಕಿರುವ ಸಾಧ್ಯತೆ ಇದೆ.
ಕೊನೆ ಕ್ಷಣದ ಸಿದ್ಧತೆಗಳು ಪಕ್ಷದ ಸೋಲಿಗೆ ಕಾರಣ
ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎಂದು ಕೊನೆ ಕ್ಷಣದ ತನಕ ಸರ್ಕಾರ ಕಾನೂನು ಹೋರಾಟ ಮಾಡಿತ್ತು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮೆಟ್ಟಿಲೇರಿ ಚುನಾವಣೆಗೆ ತಡೆ ತರಲು ಪ್ರಯತ್ನ ನಡೆಸಿತು. ಇದರ ನಡುವೆ ಚುನಾವಣೆಯ ಸಿದ್ಧತೆಗಳನ್ನು ಮರೆತು ಬಿಟ್ಟಿತು. ಕೊನೆ ಕ್ಷಣದದಲ್ಲಿ ಚುನಾವಣೆ ಎದುರಾದಾಗ ಮಾಡಿಕೊಂಡ ಸಿದ್ಧತೆಗಳು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ವಿಫಲವಾದವು.
ಸಚಿವರನ್ನು ಅತಿಯಾಗಿ ನಂಬಿದ್ದು
ಬಿಬಿಎಂಪಿ ಚುನಾವಣೆಯ ಟಿಕೆಟ್ ಹಂಚಿಕೆ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಸಚಿವರು ಹೇಳಿದ ಮಾತುಗಳನ್ನು ಪಕ್ಷ ಅತಿಯಾಗಿ ನಂಬಿತು. ಇದರಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ಇದು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿತು.
ಕೆರೆ ಒತ್ತುವರಿ ಕಾರ್ಯಾಚರಣೆ
ಕೆರೆ ಒತ್ತುವರಿ ಕಾರ್ಯಾಚರಣೆ ಕಾಂಗ್ರೆಸ್ ಮತಗಳನ್ನು ಚುನಾವಣೆಯಲ್ಲಿ ಕಸಿದುಕೊಂಡಿತು. ಕೆರೆ ಒತ್ತುವರಿ ತೆರವು ಹೆಸರಿನಲ್ಲಿ ಬಡವರ ಮನೆಗಳನ್ನು ಸರ್ಕಾರ ಒಡೆದು ಹಾಕಿತು. ಕೋರ್ಟ್ ಆದೇಶದಂತೆ ತೆರವು ಮಾಡಲಾಗುತ್ತಿದೆ ಎಂದು ಸಮರ್ಥನೆ ನೀಡಿತು. ಬಡವರ ಮತಗಳನ್ನು ಜೆಸಿಬಿಯ ಘರ್ಜನೆ ಕಸಿದುಕೊಂಡಿತು.
ವಿವಾದಾತ್ಮಕ ಅಂಶಗಳು ಹಿನ್ನಡೆ ಮಾಡಿದವು
ಅರ್ಕಾವತಿ ಡಿನೋಟಿಫಿಕೇಷನ್ ಹಗರಣ, ಕೆಪಿಎಸ್ಸಿ ನೇಮಕಾತಿ ಹಗರಣ, ಡಿಕೆ ರವಿ ಸಾವಿನ ವಿಚಾರದಲ್ಲಿ ಸರ್ಕಾರ ಹೆಜ್ಜೆಗಳು, ಸ್ಮಾಟ್ ಸಿಟಿ ಕೈ ತಪ್ಪಿದ್ದು ಸರ್ಕಾರದಿಂದ ಎಂಬ ಭಾವನೆ ಮುಂತಾದ ವಿವಾದಾತ್ಮಕ ಅಂಶಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಅಭಿಪ್ರಾಯ ಬದಲಾಗುವಂತೆ ಮಾಡಿದವು. ಇದರ ಪರಿಣಾಮ ಚುನಾವಣೆಯಲ್ಲಿ ತಿಳಿಯಿತು.
ಪ್ರಚಾರದಲ್ಲಿ ಸೋತ ಕಾಂಗ್ರೆಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೆಂಗಳೂರು ಸುತ್ತಿದರೂ ಪ್ರಚಾರದ ವಿಚಾರದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು. ಕೊನೆ ಕ್ಷಣದಲ್ಲಿ ಮಾಡಿಕೊಂಡ ಪ್ರಚಾರ ತಂತ್ರ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು. ಕೆಲವು ನಾಯಕರನ್ನು ಹೊರತು ಪಡಿಸಿದರೆ ಉಳಿದ ನಾಯಕರು ಪ್ರಚಾರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದು ಜನಾಭಿಪ್ರಾಯವನ್ನು ಬದಲಾವಣೆ ಮಾಡಿತು.
ಬರೀ ಆರೋಪ ಮಾಡಿದ್ದೆ ಆಯಿತು
ಬಿಬಿಎಂಪಿಯಲ್ಲಿ 5 ವರ್ಷ ಅಧಿಕಾರ ನಡೆಸಿ ಬಿಜೆಪಿ ಅಷ್ಟು ಹಗರಣ ಮಾಡಿತು. ಇಷ್ಟು ಲೂಟಿ ಹೊಡೆದರೂ ಎಂದು ಕಾಂಗ್ರೆಸ್ ಪ್ರಚಾರ ಮಾಡಿತು. ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ನಾವು ಬೆಂಗಳೂರು ನಗರದ ಅಭಿವೃದ್ಧಿಗೆ ಏನು ಮಾಡುತ್ತೇವೆ ಎಂಬುದನ್ನು ಜನರಿಗೆ ತಲುಪಿಸಲು ಪಕ್ಷ ವಿಫಲವಾಯಿತು. ಆದ್ದರಿಂದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.
ಫಲಿಸಿದ ಬಿಜೆಪಿ ಕಾರ್ಯತಂತ್ರ
ಬಿಬಿಎಂಪಿಯನ್ನು ಕಾಂಗ್ರೆಸ್ ವಿಭಜನೆ ಮಾಡುತ್ತಿದೆ. ಇದನ್ನು ವಿರೋಧಿಸಿ ಎಂದು ಪ್ರಚಾರದಕ್ಕೆ ಧುಮುಕಿದ ಬಿಜೆಪಿ, ಚುನಾವಣೆಗಾಗಿ ಉತ್ತಮ ಕಾರ್ಯತಂತ್ರ ರೂಪಿಸಿತ್ತು. ಪ್ರಚಾರವನ್ನು ಹಾಗೆಯೇ ಮಾಡಿತು. ಸಾಮಾಜಿಕ ಜಾಲಾ ತಾಣಗಳಲ್ಲಿಯೂ ಪ್ರಚಾರ ನಡೆಸಿತು. ಇದರಿಂದ ಗೆಲುವಿನ ಹಾದಿ ಸುಗಮವಾಯಿತು.
ಅಶೋಕ್ v/s ಐವರು ಸಚಿವರು
ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿತು. ಕಾಂಗ್ರೆಸ್ ಐವರು ಸಚಿವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಎದುರಿಸಿತು. ಬೆಂಗಳೂರಿನಲ್ಲಿ ಅತ್ಯಂತ ಪ್ರಭಾವ ಹೊಂದಿರುವ ಅಶೋಕ್ ಉತ್ತಮ ಕಾರ್ಯತಂತ್ರ ರೂಪಿಸಿದರು. ಆದರೆ, ಕಾಂಗ್ರೆಸ್ನ ಸಚಿವರು ಜನರಲ್ಲಿ ತಲುಪುವಲ್ಲಿ ವಿಫಲವಾದರು.
ಸರ್ಕಾರದ ಸಾಧನೆ ತಲುಪಿಸಲು ವಿಫಲ
ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರ ಎರಡು ವರ್ಷಗಳ ಸಾಧನೆಯನ್ನು ಜನರಿಗೆ ತಲುಪಿಸಲು ವಿಫಲವಾಯಿತು. ಆದರೆ, ಅಬ್ಬರದ ಪ್ರಚಾರ ನಡೆಸಿದ ಬಿಜೆಪಿ ಜನರನ್ನು ಬೇಗನೆ ತಲುಪಿತು. ಕಾಂಗ್ರೆಸ್ ಸೋಲಿನಲ್ಲಿ ಇದೂ ಪ್ರಮುಖ ಪಾತ್ರ ವಹಿಸಿತು.