ಕೆಪಿಎನ್ ಟ್ರಾವೆಲ್ಸ್ ಗೆ 10 ಕೋಟಿ ನಷ್ಟ: ಪ್ರಕರಣ ಸಿಐಡಿ ತನಿಖೆಗೆ
ಬೆಂಗಳೂರು, ಸೆಪ್ಟೆಂಬರ್ 17: ಕೆಪಿಎನ್ ಟ್ರಾವೆಲ್ಸ್ ನ ಬಸ್ ಸುಟ್ಟ ಪ್ರಕರಣವನ್ನು ಸಿಐಡಿಗೆ ವಹಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳಿದ್ದು, ವಿವಿಧ ಆಯಾಮ ಪಡೆಯುತ್ತಿರುವುದರಿಂದ ತನಿಖೆಯನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೇಲಂ ಮೂಲದ ಉದ್ಯಮಿ ಕೆ.ಪಿ.ನಟರಾಜನ್ ಅವರಿಗೆ ಸೇರಿದ ನಲವತ್ತೆರಡು ಬಸ್ ಗಳು ನಾಯಂಡಹಳ್ಳಿ ಸಮೀಪದ ಡಿಪೋದಲ್ಲಿ ಸುಟ್ಟುಹೋಗಿದ್ದವು. ಈ ಸಂಬಂಧ ಇಪ್ಪತ್ತೆರಡರ ಯುವತಿ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬಳನ್ನು ಹೊರತುಪಡಿಸಿ ಉಳಿದವರು ಪೀಣ್ಯ ಹಾಗೂ ಕೆಂಗೇರಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು.[ಬಸ್ಸು ಸುಡಲು ಕುಮ್ಮಕ್ಕು ನೀಡಿದ್ದು ಯಾದಗಿರಿಯ 22ರ ಯುವತಿ]
ಸೆ.9ರಂದು ಕಾವೇರಿ ನೀರು ಹರಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗಲಭೆ ಏರ್ಪಟ್ಟಿತ್ತು. ಆಗ ಕೆಪಿಎನ್ ಟ್ರಾವೆಲ್ಸ್ ನ ಬಸ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಅಧಿಕಾರಿಗಳ ಪ್ರಕಾರ, ಕೆಪಿಎನ್ ಟ್ರಾವೆಲ್ಸ್ ನವರಿಗೆ ಈ ಘಟನೆಯಿಂದ 10 ಕೋಟಿ ರುಪಾಯಿ ನಷ್ಟವಾಗಿದೆ.[ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಏಳು ಜನ ಪೊಲೀಸರ ಬಲೆಗೆ]
ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ರಕ್ಷಣೆಯ ಭರವಸೆ ನೀಡಿದರೆ ಮಾತ್ರ ಮತ್ತೆ ಬಸ್ ಸೇವೆ ಆರಂಭಿಸುತ್ತೇವೆ ಎಂದು ಟ್ರಾವೆಲ್ಸ್ ಮಾಲೀಕ ಕೆ.ಪಿ.ನಟರಾಜ್ ಹೇಳಿದ್ದಾರೆ.