ಪಿಎಂ ಆಗುವ ಕನಸಿಲ್ಲ; ದರ್ದೂ ಇಲ್ಲ-ಸಿಎಂ ಆಗಿಯೇ ಇರುವೆ!
ಆದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅದೇ ಉಸಿರಿನಲ್ಲಿ 'ನನಗೆ ನನ್ನ ರಾಜ್ಯ ಮುಖ್ಯ. ರಾಜ್ಯದ ಜನತೆ ನೀಡಿರುವ ರಾಜಕೀಯ ತೀರ್ಪನ್ನು ಗೌರವಿಸುವುದು ನನ್ನ ಆದ್ಯ ಕರ್ತವ್ಯ. ಹಾಗಾಗಿ ಪೂರ್ಣಾವಾಧಿಗೆ ಅಂದರೆ 2017 ರವರೆಗೂ ಮುಖ್ಯಮಂತ್ರಿಯಾಗಿಯೇ ಇರುವೆ' ಎಂದು ತಿಳಿಸಿದ್ದಾರೆ.
'ಏನೋ ಕನಸು ಕಾಣುತ್ತಾ ಕುಂತವರು ಕೊನೆಗೆ ಸ್ವಯಂನಾಶ ಹೊಂದುತ್ತಾರೆ. ಏನೋ ಆಗಬೇಕು ಎಂದು ಯಾರೂ ಕನಸು ಕಾಣಬಾರದು. ಆದರೆ ಏನೋ ಮಾಡಬೇಕು ಎಂದು ಮಹತ್ತರ ಕನಸು ಕಾಣಬೇಕು' ಎಂದು ನರೇಂದ್ರ ಮೋದಿ ಉಚಿತ ಸಲಹೆ ನೀಡಿದ್ದಾರೆ.
ಸಾರ್ ನೀವು 2014ಕ್ಕೆ ಪ್ರಧಾನ ಮಂತ್ರಿ ಆಗುತ್ತೀರಂತೆ. ಹಾಗಾದರೆ ಪ್ರಧಾನಿ ಆದಮೇಲೂ ನೀವು ಬಂದು ನನ್ನನ್ನು ಮಾತನಾಡಿಸುತ್ತೀರಾ? ಎಂದು ವಿದ್ಯಾರ್ಥಿಯೊಬ್ಬ ಕೇಳಿದಾಗ ಸಿಎಂ ಮೋದಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಪಕ್ಷ ನನ್ನನ್ನು ಲೋಕಸಭೆಯ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು, ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಸರ್ವ ಪ್ರಯತ್ನಗಳನ್ನು ಮಾಡುತ್ತೇನೆ ಹೊರತು ಪ್ರಧಾನಿಯಾಗುವ ಕನಸು ಕಾಣುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
ನಾನು (ಪ್ರಧಾನಿ ಮಂತ್ರಿಯಾಗುವಂತಹ) ಕನಸುಗಳನ್ನು ಕಾಣುವುದಿಲ್ಲ. ಜನಸೇವೆ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಗುಜರಾತ್ ಮತ್ತು ದೇಶದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. 2017 ರವರೆಗೂ ಜನ ಸೇವೆ ಮಾಡುತ್ತೇನೆ. ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.
ಗುಜರಾತ್ನಲ್ಲಿ ನಕಲಿ ಕಾರ್ಯಾಚರಣೆಗೆ ಮೋದಿ ಅವರು ಒಪ್ಪಿಗೆ ಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ಕೊಡಬೇಕೆಂದು ದೇಶದ ಮಟ್ಟದಲ್ಲಿ ದೊಡ್ಡ ಕೂಗು, ಒತ್ತಾಯ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ 'ಪ್ರಧಾನಿ ಆಗಬೇಕೆಂಬ ಆಸೆ ನನಗಿಲ್ಲ. ಆ ರೀತಿಯ ಕನಸು ಕಾಣುತ್ತಿಲ್ಲ' ಎಂದು ಮೋದಿ ಹೇಳಿರುವುದು ರಾಜಕೀಯದಲ್ಲಿ ಹೊಸ ವ್ಯಾಖ್ಯಾನಕ್ಕೆ ದಾರಿ ಮಾಡಿಕೊಟ್ಟಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಪ್ರಧಾನಿ ಯಾರು ಎಂಬುದನ್ನು ಆದಷ್ಟು ಬೇಗ ಪ್ರಕಟ ಆಗಬೇಕು. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಹಿರಿಯ ನಾಯಕರು ಹೇಳುತ್ತಿದ್ದಾರೆ.