ಕೆಎಸ್ಆರ್ ಟಿಸಿ ಮುಂಗಡ ಟಿಕೆಟ್ ಬುಕ್ಕಿಂಗ್ ದುಬಾರಿ
ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆಎಸ್ಆರ್ ಟಿಸಿ ಸೆ.6 ಮತ್ತು 7ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ 1000 ಹೆಚ್ಚುವರಿ ಬಸ್ಗಳನ್ನು ವ್ಯವಸ್ಥೆ ಮಾಡಿದೆ. ಈ ಬಸ್ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವಾಗ ಶೇ.20ರಷ್ಟು ಪ್ರಯಾಣ ದರ ಹೆಚ್ಚಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಸಂಚರಿಸುವ ಬಸ್ಗಳಲ್ಲಿ ನಿಗದಿತ ಟಿಕೆಟ್ ದರಕ್ಕಿಂತ ಒಂದೂವರೆ ಪಟ್ಟು ಅಧಿಕ ಹಣ ತೆತ್ತು ಪ್ರಯಾಣಿಸಬೇಕಿದೆ. ಪ್ರತಿನಿತ್ಯ ಸಂಚರಿಸುವ ಬಸ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಕೆಎಸ್ಆರ್ ಟಿಸಿ ಸ್ಪಷ್ಟಪಡಿಸಿದೆ.
ಮುಂಗಡ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿರುವ ಕೆಎಸ್ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಅಶೋಕ್ ಕುಮಾರ್, 1994ರಿಂದಲೂ ಈ ನಿಯಮ ಜಾರಿಯಲ್ಲಿದೆ. ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚರಿಸುವ ವಿಶೇಷ ಬಸ್ ಗಳಿಗೆ ಶೇ 20ರಷ್ಟು ಹೆಚ್ಚು ಪ್ರಯಾಣದರ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಿಯಮವೂ ವಿಶೇಷ ಬಸ್ ಗಳಲ್ಲಿ ಮುಂಡವಾಗಿ ಟಿಕೆಟ್ ಕಾಯ್ದುರಿಸುವ ಜನರಿಗೆ ಮಾತ್ರ ಅನ್ವಯವಾಗಲಿದೆ. ಪ್ರತಿನಿತ್ಯ ಸಂಚರಿಸುವ ಬಸ್ ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ರಾಮ ರಾಮಾ ಗಾಯದ ಮೇಲೆ ಬರೆ! ಬಸ್ ದರ ಏರಿಕೆ)
ಮುಂಗಡ ದುಬಾರಿ : ಬೆಂಗಳೂರಿನಿಂದ ಮಧುರೈ, ಕುಂಭಕೋಣಂ, ತಿರುಚ್ಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್, ಮಹಾರಾಷ್ಟ್ರ, ಗೋವಾ ಮುಂತಾದ ಸ್ಥಳಗಳಿಗೆ ಸಂಚರಿಸುವ ವಿಶೇಷ ಬಸ್ ಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮುಂಗಡ ಟಿಕೆಟ್ ಕಾಯ್ದಿರಿಸದೆ, ಬಸ್ನಲ್ಲೇ ಟಿಕೆಟ್ ಪಡೆದು ಪ್ರಯಾಣಿಸುವವರು ಹೆಚ್ಚುವರಿ ದರ ಪಾವತಿ ಮಾಡಬೇಕಾಗಿಲ್ಲ. ಊರಿಗೆ ತೆರಳಲು ವಿಶೇಷ ಬಸ್ ನಲ್ಲಿ ಟಿಕೆಟ್ ಬುಕ್ ಮಾಡಿಸುವ ಮುನ್ನ ಈ ವಿಷಯ ನಿಮಗೆ ತಿಳಿದಿರಲಿ.