ಇಂಥಾ ಇಕ್ಕಟ್ಟಿನ ಪ್ರದೇಶದಲ್ಲಿ ಕಟ್ಟಿದ ಅಂಥಾ ಬಿಲ್ಡಿಂಗ್!
ಬೆಂಗಳೂರು, ಆ.19 : ಸೋಮೇಶ್ವರ ನಗರದಲ್ಲಿ ಸೋಮವಾರ ಬೆಳಗ್ಗೆ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ ಮೆಂಟ್ ಕುಸಿಯಲು ಬಿಬಿಎಂಪಿಯ ನಿರ್ಲಕ್ಷತನವೇ ಸಾಕ್ಷಿ. ಕಳಪೆ ಕಾಮಗಾರಿ ನಡೆಯುತ್ತಿದ್ದರೂ, ಬಿಬಿಎಂಪಿ ಕಟ್ಟಡ ಕುಸಿದು ಬೀಳುವವರೆಗೆ ಮೌನ ವಹಿಸಿತ್ತು.
ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದಾಗಿ ಕಟ್ಟಡದ ಮಾಲೀಕ ಸಮೀರ್ ವುಲ್ಲಾ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಆದರೆ, ಅಲ್ಲಿ 6 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದರು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮೌನ ವಹಿಸಿದ್ದರು.
ಸದ್ಯ ಕಟ್ಟಡ ಅಡಿ ರಾಯಚೂರು ಮೂಲದ ಇಬ್ಬರು ಮತ್ತು ಪಶ್ಚಿಮ ಬಂಗಾಳದ ಮೂಲದ ಒಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಟ್ಟಡ ಕುಸಿದು ಬೀಳುವ ಆತಂಕ ಎದುರಾಗಿದ್ದು ಅಗ್ನಿಶಾಮಕದಳದವರು ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ತಡವಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ನಿರ್ಮಾಣ ಹಂತದ 6 ಮಹಡಿ ಕಟ್ಟಡ ಮತ್ತು ಅದರ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಎರಡೂ ಕಟ್ಟಡಗಳನ್ನು ಕೆಡವಲು ಆದೇಶ ನೀಡಿದೆ. ಅಪಾರ್ಟ್ ಮೆಂಟ್ ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದು ಮುಂದೆ ಆಗಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಿದೆ. (ಚಿತ್ರಗಳನ್ನು ನೋಡಿ)
ಸೌದಿಯಿಂದ ಬಂದಿದ್ದ ಮಾಲೀಕ
ಕುಸಿತಗೊಂಡಿರುವ ಕಟ್ಟಡ ಸಮೀರ್ ವುಲ್ಲಾ ಅವರಿಗೆ ಸೇರಿದ್ದು. ಸೌದಿಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಅವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಮರಳಿದ್ದರು. ದೇಶದ ಬೇರೆ ರಾಜ್ಯಗಳಲ್ಲಿಯೂ ಸಮೀರ್ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದಿದ್ದಾರೆ. ಅವರಿಗಾಗಿ ಸದ್ಯ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
100 ಕಾರ್ಮಿಕರು
ಸೋಮವಾರ ಬೆಳಗ್ಗೆ ಕಟ್ಟಡ ನಿರ್ಮಾಣದಲ್ಲಿ ಸುಮಾರು 100 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಟ್ಟಡದ ನೆಲ ಮಹಡಿ ಮಾತ್ರ ಕುಸಿದಿದ್ದು ಅಲ್ಲಿದ್ದ ಕಾರ್ಮಿಕರು ವೊಳಗೆ ಸಿಲುಕಿದ್ದಾರೆ. ಕಟ್ಟಡದ ಮೇಲಿನ ಮಹಡಿಗಳಲ್ಲಿದ್ದ ಕಾರ್ಮಿಕರನ್ನು ನಂತರ ರಕ್ಷಿಸಲಾಗಿದೆ.
ಆರು ತಿಂಗಳಲ್ಲಿ ನಿರ್ಮಾಣ
ಸೋಮೇಶ್ವರದ 10 ನೇ ಕ್ರಾಸ್ ನ ನಿವಾಸಿಯಾದ ಶರೀಫ್ ಹೇಳುವಂತೆ ಆರು ತಿಂಗಳಿನಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಯಾವುದೇ ಮುಂಜಾಗ್ರತೆ ಇಲ್ಲದೇ ಕಾಮಗಾರಿ ನಡೆಸಲಾಗುತ್ತಿತ್ತು. ಸ್ಥಳೀಯರೊಂದಿಗೆ ಕಟ್ಟಡದ ಮಾಲೀಕರು ಜಗಳ ಮಾಡಿಕೊಂಡು, ಇಲ್ಲಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ.
ರಸ್ತೆಯೇ ಇಲ್ಲಾ ಸಾರ್
ಈ ಕಟ್ಟಡ ನಿರ್ಮಾಣ ಪ್ರಾರಂಭವಾದದಿನದಿಂ ನಮಗೆ ಸಂಚರಿಸಲು ರಸ್ತೆಯೇ ಇಲ್ಲವಾಗಿದೆ ಸಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು ಉಸ್ಮಾನ್. ಟ್ಯಾಕ್ಸಿ ಚಾಲಕರಾಗಿರುವ ಅವರು ಕಟ್ಟಡ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿಯೇ ವಾಸಿಸುತ್ತಾರೆ. ಕಾರು ಹೋಗುಲು ಜಾಗವಿಲ್ಲದ ಸ್ಥಳದಲ್ಲಿ ಕಲ್ಲು, ಮಣ್ಣು ಸುರಿದು ಸ್ಥಳೀಯರಿಗೆ ಕಟ್ಟಡದ ಮಾಲೀಕರು ತೊಂದರೆ ನೀಡುತ್ತಿದ್ದಾರೆ.
ಬಿಬಿಎಂಪಿ ಎಡವಟ್ಟು
2 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದಾಗಿ ಹೇಳಿ ಸಮೀರ್ ವುಲ್ಲಾ 6 ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಎರಡು ಬಾರಿ ನೋಟಿಸ್ ನೀಡಿದ್ದು ಬಿಟ್ಟರೆ, ಕಾಮಗಾರಿ ಸ್ಥಳಕ್ಕೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ.
ಸಚಿವರು, ಪೊಲೀಸ್ ಆಯುಕ್ತರ ಭೇಟಿ
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದ ಮಾಲೀಕ ಸಮೀರ್ ವುಲ್ಲಾ ಅವರಿಗಾಗಿ ಹುಡುಕಾಟ ಪ್ರಾರಂಭವಾಗಿದೆ ಎಂದು ಕಮಲ್ ಪಂಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಎರಡು ಕಟ್ಟಡಗಳಿವೆ
ನಿರ್ಮಾಣಹಂತದ ಅಪಾರ್ಟ ಮೆಂಟ್ ಪಕ್ಕ ಮತ್ತೊಂದು ಕಟ್ಟಡವಿದೆ. ಅದನ್ನು ಅರ್ಧ ನಿರ್ಮಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಕಟ್ಟಡವೂ ಸಮೀರ್ ವುಲ್ಲಾ ಅವರಿಗೆ ಸೇರಿದ್ದು ಎಂಬುದು ಸ್ಥಳೀಯರ ಆರೋಪ. ಕಟ್ಟಡದ ಅಕ್ಕಪಕ್ಕದ ನಿವಾಸಿಗಳು ಸಹ ಈ ಕಟ್ಟಡದಿಂದಾಗಿ ಭಯದಿಂದ ಬದುಕುವಂತಾಗಿದೆ.
ಸ್ಥಳೀಯರು ಓಡಾಡುವಂತಿಲ್ಲ
ಅಕ್ರಮವಾಗಿ ಕಟ್ಟಡ ನಿರ್ಮಾಣವಾಗಿದೆ ಮತ್ತು ನಕ್ಷೆಯಂತೆ ಕಟ್ಟಿಲ್ಲ ಆದ್ದರಿಂದ ಸ್ಥಳೀಯರಿಗೆ ಓಡಾಡಲು ಜಾಗವೇ ಇಲ್ಲದಂತಾಗಿದೆ ಕಟ್ಟಡದ ಒಂದು ಭಾಗದಲ್ಲಿ ಸುಮಾರು ಆರು ಅಡಿ ಎತ್ತರದ ಗೋಡೆ ನಿರ್ಮಿಸಲಾಗಿದೆ. ಕಟ್ಟಡದ ಅಕ್ಕಪಕ್ಕ ವಾಸಿಸುವ ಜನರು ಗಲ್ಲಿಗಳ ಮೂಲಕ ಸಾಗಿ ಮುಖ್ಯ ರಸ್ತೆಯನ್ನು ಸೇರಿಕೊಳ್ಳಬೇಕು.
ಯಾರಿಗೂ ಪ್ರವೇಶವಿಲ್ಲ
ಪಿಲ್ಲರ್ ಗಳು ಕುಸಿರು ನೆಲಮಹಡಿ ಕುಸಿದು ಬಿದ್ದಿದೆ. ಕಟ್ಟಡದ ಅವವೇಶಗಳು ಸಂಪೂರ್ಣ ನೆಲಸಮಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕಟ್ಟಡಕ್ಕೆ ಇರುವ ಎರಡೂ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು. ಕಟ್ಟಡದ ಹತ್ತಿದ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದು ಪೊಲೀಸರು ಪ್ರದೇಶವನ್ನು ಸುತ್ತಿವರೆದಿದ್ದಾರೆ.
ನೀರಿನ ಸಂಪರ್ಕ ಕೊಡುತ್ತಿದ್ದರು
ಆರು ಅಂತಸ್ತಿನ ಕಟ್ಟಡದ ನಿರ್ಮಾಣಕ್ಕೆ ನೀರಿನ ಸಂಪರ್ಕ್ ನೀಡಲು ಬಿಬಿಎಂಪಿ ಸಿದ್ಧವಾಗಿತ್ತು. ಅದಕ್ಕಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು.